ಮುತ್ತತ್ತಿಯಲ್ಲೊಂದು ಸುತ್ತು

ನಿಜಕ್ಕೂ ಅದೊಂದು ಅಪರೂಪದ ನಿಸರ್ಗ ತಾಣ. ಹಚ್ಚ ಹಸಿರಿನಿಂದ ಕಂಗೊಳಿಸುವ ರಮಣೀಯ ತಾಣ...
ಮುತ್ತತ್ತಿ
ಮುತ್ತತ್ತಿ

ನಿಜಕ್ಕೂ ಅದೊಂದು ಅಪರೂಪದ ನಿಸರ್ಗ ತಾಣ. ಹಚ್ಚ ಹಸಿರಿನಿಂದ ಕಂಗೊಳಿಸುವ ರಮಣೀಯ ತಾಣ. ಮಂಡ್ಯದಿಂದ ಸುಮಾರು 90ಕಿ.ಮೀ ದೂರದ ಮುತ್ತತ್ತಿಯೇ ಆ ಸುಂದರ ಜಾಗ.

ಇಡೀ ಮಂಡ್ಯದಲ್ಲೇ ಈ ಕಾಡು ವಿಶಿಷ್ಟ ಬಗೆಯದ್ದು. ಮಳೆಗಾಲದಲ್ಲಂತೂ ಕಾಡಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಚಾರಣ ಮಾಡುವ ಹವ್ಯಾಸವುಳ್ಳವರು, ಪ್ರಾಕೃತಿಕ ಸೌಂದರ್ಯ ಸವಿಯುವವರಿಗೆ ಹೇಳಿ ಮಾಡಿಸಿದಂಥ ಸ್ಥಳ ಇದು.

ಹಾಗಂತ ಕೇವಲ ಗಿಡ ಮರಗಳಿಂದ ಕೂಡಿದ ತಾಣವಷ್ಟೇ ಅಲ್ಲ. ಅನೇಕ ವನ್ಯ ಪ್ರಾಣಿಗಳು ಇಲ್ಲುಂಟು. ಜಿಂಕೆ, ಆನೆ, ಕಾಡು ಹಂದಿ, ನರಿ, ತೋಳ ಮುಂತಾದ ಪ್ರಾಣಿಗಳನ್ನು ಕಾಣಬಹುದು.

ಆದರೆ, ಸ್ಥಳೀಯರ ಮಾರ್ಗದರ್ಶನವಿಲ್ಲದೇ ಕಾಡು ನೋಡಲು ಹೋದರೆ ತಮಿಳುನಾಡಿನ ಗಡಿ ಸೇರುವುದು ನಿಶ್ಚಿತ. ಆ ನದಿಯ ಜುಳು ಜುಳು ಸದ್ದು, ಹಕ್ಕಿಗಳ ಚಿಲಿಪಿಲಿ ಗಾನ ಹೃನ್ಮನಗಳಿಗೆ ಸುಶ್ರಾವ್ಯ ಸಂಗೀತದ ರಸ ನೀಡುತ್ತವೆ. ಇಲ್ಲಿನ ಪ್ರಕೃತಿಗೆ ಮನಸೋತ ಅನೇಕ ನಿರ್ದೇಶಕರು ತಮ್ಮ ಚಿತ್ರಗಳ ಭಾಗವನ್ನು ಇಲ್ಲೇ ಚಿತ್ರೀಕರಣ ಮಾಡಿದ ನಿದರ್ಶನಗಳಿವೆ. ಹಲವು ಹವ್ಯಾಸಿ ಛಾಯಾಗ್ರಾಹಕರು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಇಲ್ಲಿನ ಅಂದವನ್ನು ಸೆರೆ ಹಿಡಿಯಲೆಂದೇ ದಿನಗಟ್ಟಲೆ ಕಾಲ ಕಳೆಯುತ್ತಾರೆ.

ಜೋರಾಗಿ ಒಮ್ಮೆ ಮನದಿಂಗಿತ ಚೀರಿ ಬಿಡುವಷ್ಟು ಉನ್ಮಾದ ಸೃಷ್ಟಿಸುವ ವಾತಾವರಣ. ವನ ಭೋಜನಕ್ಕೆಂದು ಕೆಲವರು ಇಲ್ಲಿಗೆ ಬರುತ್ತಾರೆ. ರಜೆ ದಿನಗಳಲ್ಲಿ ಕುಟುಂಬ ಸಮೇತರಾಗಿ ಬಂದು ಆಡಿ ನಲಿಯುವುದು ಸಾಮಾನ್ಯ.

ಇಲ್ಲಿ ಇನ್ನೊಂದು ಆಕರ್ಷಣೀಯ ಸ್ಥಳವೂ ಇದೆ. ಅದೇ ಮುತ್ತತ್ತಿ ಹನುಮಂತರಾಯ ದೇವಸ್ಥಾನ. ಸಂಜೆ ಆರರ ಒಳಗೆ ಇಲ್ಲಿಂದ ಹಿಂತಿರುಗುವುದು ಸೂಕ್ತ. ಏಕೆಂದರೆ ಕತ್ತಲಾಗುತ್ತಿದ್ದಂತೆ ಕಾಡು ಪ್ರಾಣಿಗಳ ಒಡಾಟ ಹೆಚ್ಚಾಗುತ್ತದೆ. ಸಾಧ್ಯವಾದರೆ ಒಮ್ಮೆ ಈ ಕಡೆ ಬನ್ನಿ.

- ಪ್ರತಿಮಾ ಕೆ.
ತುಮಕೂರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com