ಸ್ಟೋರಿ ಆಫ್ Terracotta: ಇತಿಹಾಸ ಮತ್ತು ವೈವಿಧ್ಯ

ಬಿಷ್ಣುಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಮದನಮೋಹನ ದೇವಾಲಯ, ರಾಸ್ ಮಂಚ್ ಮತ್ತು ಈ ಜೋರ್ ಬಾಂಗ್ಲಾ ದೇವಾಲಯದಂತಹ ಐತಿಹಾಸಿಕ ಕ್ಷೇತ್ರಗಳನ್ನು ವೀಕ್ಷಿಸಲು ಉತ್ಸುಕರಾಗಿರುತ್ತಾರೆ.
A different view point of Rashmancha
ರಾಸ್ಮಂಚ ದೇವಾಲಯ
Updated on

ಪಶ್ಚಿಮ ಬಂಗಾಳವು ಅತ್ಯಂತ ಸುಂದರವಾದ ರಾಜ್ಯವಾಗಿದೆ. ತನ್ನದೇ ಆದ ಬಂಗಾಳಿ ಭಾಷೆ, ವಿಭಿನ್ನ ಸಂಸ್ಕೃತಿ, ಉಡುಗೆ ತೊಡುಗೆಗಳನ್ನು ಹೊಂದಿರುವ ಶ್ರೀಮಂತ ರಾಜ್ಯವಾಗಿದೆ. ಬಂಗಾಳಿಗರು ಬುದ್ಧಿಜೀವಿಗಳು, ಕಲಾಪ್ರೇಮಿಗಳು ಎಂದು ಹೆಸರಾಗಿದ್ದಾರೆ.

ನಿಮ್ಮ ಸುಮಧುರವಾದ ರಜೆ ದಿನಗಳನ್ನು ಬೇರೆ ರಾಜ್ಯದಲ್ಲಿ ಕಾಲ ಕಳೆಯಲು ನೀವು ಬಯಸಿದರೆ ಭಾರತದ ಪಶ್ಚಿಮ ಬಂಗಾಳ ಬೆಸ್ಟ್‌ ಎಂದೇ ಹೇಳಬಹುದು. ಇಲ್ಲಿ ಚಿತ್ತಾಕರ್ಷಕವಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು. ಅಲ್ಲದೆ, ಕೌತುಕಮಯ ತಾಣಗಳು ನಿಮ್ಮ ಗಮನವನ್ನು ಸೆಳೆಯದೇ ಇರಲಾರದು.

ಪಶ್ಚಿಮ ಬಂಗಾಳವು ಕೆಲವು ವಿಷಯಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿನ ಪ್ರತೀಯೊಂದು ಭೂಮಿಯೂ ಒಂದೊಂದು ಇತಿಹಾಸವನ್ನು ಹೇಳುತ್ತದೆ. ಪ್ರತೀ ಪ್ರದೇಶವೂ ಕಲಾ ಪ್ರಕಾರವನ್ನು ಹೊಂದಿದೆ. ಬಂಗಾಳದ ಟೆರಾಕೋಟಾ ಸೃಷ್ಟಿಗಳು ಕೇವಲ ಮಣ್ಣಿನ ಪ್ರತಿಮೆಗಳಲ್ಲ; ಅವು ಇತಿಹಾಸ, ಸಂಸ್ಕೃತಿ ಮತ್ತು ಕರಕುಶಲತೆಯ ಜೀವಂತ ಸಾಕ್ಷಿಗಳಾಗಿವೆ.

ಇಲ್ಲಿನ ಪ್ರತಿಯೊಂದು ಕರಕುಶಲತೆಗಳು ಶತಮಾನಗಳ ರಾಜವಂಶದ ಪ್ರಭಾವ, ಕಲಾತ್ಮಕ ನಾವೀನ್ಯತೆ ಮತ್ತು ಅಚಲ ಭಕ್ತಿಯಿಂದ ರೂಪುಗೊಂಡ ನಿರೂಪಣೆಯನ್ನು ಹೊಂದಿದೆ. ಅವು ಇಲ್ಲಿನ ಭೂಮಿ ಮತ್ತು ಜನರ ಸಾರವನ್ನು ಹೇಳುತ್ತವೆ.

ಬಂಗಾಳದ ಟೆರಾಕೋಟಾ ಜೇಡಿಮಣ್ಣಿನ ಕರಕುಶಲತೆಯ ಮೂಲವು ಸಾವಿರ ವರ್ಷಗಳ ಹಿಂದಿನದು, ಈ ಪ್ರದೇಶವನ್ನು ಆಳಿದ ವಿವಿಧ ರಾಜವಂಶಗಳ ಪ್ರಭಾವದಿಂದ. 8ನೇ ಮತ್ತು 12 ನೇ ಶತಮಾನಗಳ ನಡುವೆ ಪ್ರವರ್ಧಮಾನಕ್ಕೆ ಬಂದ ಪಾಲಾ ಸಾಮ್ರಾಜ್ಯವು ಈ ಕಲಾ ಪ್ರಕಾರದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ.

Terracotta craft
ಟೆರಾಕೋಟಾ ಜೇಡಿಮಣ್ಣಿನ ಕರಕುಶಲತೆ
A different view point of Rashmancha
Kantara: Chapter-1: ಶಿವನ ಹೂದೋಟದಲ್ಲಿ ಮಿಂಚಿದ ಮಲೆನಾಡು... ಇದೇ ನೋಡಿ ಶೂಟಿಂಗ್‌ ನಡೆದ ಸ್ಥಳ!

ಇಲ್ಲಿರುವ ಅನೇಕ ದೇವಾಲಯಗಳು ಮತ್ತು ಶಿಲ್ಪಗಳು ಟೆರಾಕೋಟಾದ ಇತಿಹಾಸ, ಹಿಂದೂ ಮತ್ತು ಬೌದ್ಧ ಲಕ್ಷಣಗಳ ವಿಶಿಷ್ಟ ಮಿಶ್ರಣವನ್ನು ಪ್ರದರ್ಶಿಸುತ್ತವೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿರುವ ಐತಿಹಾಸಿಕ ಪಟ್ಟಣವಾದ ಬಿಷ್ಣುಪುರವು ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಇಲ್ಲಿನ ಬೀದಿ, ಪ್ರಶಾಂತ ಸ್ಥಳಗಳು ಮತ್ತು ಜನರ ಸಮುದಾಯವು ಅನೇಕ ಲಿಖಿತ ಮತ್ತು ಅಲಿಖಿತ ಕಥೆಗಳನ್ನು ಹೆಣೆಯುತ್ತದೆ.

ರಾಧ್ ಬಂಗಾಳವು ಪಶ್ಚಿಮ ಬಂಗಾಳದ ಒಂದು ಪ್ರದೇಶವಾಗಿದ್ದು, ಇದನ್ನು ದೇವಾಲಯ ಪಟ್ಟಣ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ವಿವಿಧ ಗಾತ್ರಗಳಲ್ಲಿ ಮತ್ತು ವಿಭಿನ್ನ ದೇವರುಗಳು ಮತ್ತು ದೇವಾಲಯಗಳ ಸಾಲುಗಳನ್ನು ಒಳಗೊಂಡಿದೆ. ಈ ದೇವಾಲಯಗಳನ್ನು ಟೆರಾಕೋಟಾ ಜೇಡಿಮಣ್ಣಿನಿಂದ ನಿರ್ಮಿಸಲಾಗಿದೆ. ಈ ದೇವಾಲಯಗಳ ನಿರ್ಮಾಣ ಶೈಲಿಯು 16ನೇ ಶತಮಾನದಲ್ಲಿ ಹುಟ್ಟಿಕೊಂಡಿದ್ದು, 19ನೇ ಶತಮಾನದವರೆಗೆ ನಡೆದಿದೆ.

ಈ ಅವಧಿಯನ್ನು ಪಶ್ಚಿಮ ಬಂಗಾಳದಲ್ಲಿ ದೇವಾಲಯದ ಸುವರ್ಣಯುಗ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ಚಳಿಗಾಲದ ವೇಳೆ ಪ್ರವಾಸಿಗರು ಭೇಟಿ ನೀಡಲು ಉತ್ತಮ ತಾಣವಾಗಿದೆ.

ಬಂಕುರಾ ಜಿಲ್ಲೆಯೊಳಗೆ ನೆಲೆಗೊಂಡಿರುವ ಬಿಷ್ಣುಪುರದ ಇತಿಹಾಸವು ಮಲ್ಲ ರಾಜವಂಶದ ಹತ್ತೊಂಬತ್ತನೇ ಆಡಳಿತಗಾರ ರಾಜ ಜಗತ್ ಮಲ್ಲನ ಕಾಲಕ್ಕೂ ಹಿಂದಿನದು. ರಾಜ ಜಗತ್ ತನ್ನ ಸಾಮ್ರಾಜ್ಯದ ರಾಜಧಾನಿಯನ್ನು ಬಿಷ್ಣುಪುರಕ್ಕೆ ಸ್ಥಳಾಂತರಿಸುವ ನಿರ್ಧಾರವು ಅನೇಕ ಕಥೆಗಳು ಮತ್ತು ಚರ್ಚೆಗಳ ವಿಷಯವಾಗಿದೆ. ಆದಾಗ್ಯೂ, ಈ ಕ್ರಮವು ಟೆರಾಕೋಟಾ ಕರಕುಶಲತೆಯ ಉಗಮಕ್ಕೆ ಕಾರಣವಾಯಿತು. ಇದು ಆ ಸಮಯದಲ್ಲಿ ಈ ಪ್ರದೇಶದಲ್ಲಿ ಕಲ್ಲಿನ ಪೂರೈಕೆಯ ಕೊರತೆಯಿಂದ ಹುಟ್ಟಿಕೊಂಡಿತು. 17ನೇ ಶತಮಾನದ ಆರಂಭದೊಂದಿಗೆ, ಟೆರಾಕೋಟಾದ ಕಲ್ಲಿನ ಬಳಕೆಯು ಉತ್ತುಂಗಕ್ಕೇರಿತು, ಇಂದಿಗೂ ನಾವು ನೋಡುವ ಅನೇಕ ರಚನೆಗಳನ್ನು ಇಲ್ಲಿನ ಕಲ್ಲಿನಿಂದಲೇ ಸ್ಥಾಪಿಸಲ್ಪಟ್ಟಿದ್ದಾಗಿದೆ.

Terracotta craft
ಟೆರಾಕೋಟಾ ಜೇಡಿಮಣ್ಣಿನ ಕರಕುಶಲತೆ

ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಟೆರಾಕೋಟಾ ರಚನೆಗಳು ಹಾಗೂ ಬಲುಚಾರಿ ರೇಷ್ಮೆ ಸೀರೆಯು ದೊಡ್ಡ ಆಕರ್ಷಣೆಯಾಗಿದೆ.

ಬಿಷ್ಣುಪುರದಲ್ಲಿರುವ ದೇವಾಲಯದ ಗೋಡೆಗಳ ಮೇಲೆ ಕೃಷ್ಣನ ಕಥೆಗಳನ್ನು ಅದ್ಭುತವಾಗಿ ಕೆತ್ತಲಾಗಿದ್ದು, ಈ ಕೆತ್ತನೆಯಿಂದ ಮಹಾಭಾರತ, ರಾಮಾಯಣ ಮತ್ತು ಇತರ ಕಥೆಗಳ ಬಗ್ಗೆ ಹೆಚ್ಚು ತಿಳಿಯಬಹುದಾಗಿದೆ. ಈ ಕಥೆಗಳು ಸೀರೆಗಳಲ್ಲಿನ ಮೋಟಿಫ್‌ಗಳಲ್ಲಿಯೂ ಕಾಣಬಹುದು.

ಇಲ್ಲಿನ ಸ್ಥಳೀಯ ಎಲೆಕ್ಟ್ರಿಕ್ ಟುಕ್-ಟುಕ್‌ಗಳು, ಸಣ್ಣ ಕೊಳಗಳು, ಹಸಿರು ಪಾಚಿ, ಸುತ್ತಲೂ ಇರುವ ಹಸಿರು ಪರಿಸರ ವ್ಯವಸ್ಥೆ ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಈ ಟುಕ್-ಟುಕ್ ಸವಾರಿಗಳು ಮೊದಲ ಬಾರಿಗೆ ವಿಷ್ಣುಪುರಕ್ಕೆ ಬರುವ ಪ್ರಯಾಣಿಕರಿಗೆ ನೋಡಲೇಬೇಕಾದ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತವೆ.

ಸಾಂಪ್ರದಾಯಿಕ ತಂತ್ರ

ಬಂಗಾಳದ ಟೆರಾಕೋಟಾ ಕಲಾಕೃತಿಗಳ ತಯಾರಿಕೆಯು ತಲೆಮಾರುಗಳಿಂದ ರವಾನಿಸಲ್ಪಟ್ಟ ಕಾಲಮಾನದ ತಂತ್ರಗಳನ್ನು ಒಳಗೊಂಡಿರುತ್ತದೆ. ಸ್ಥಳೀಯ ಕುಶಲಕರ್ಮಿಗಳು ಸಾಮಾನ್ಯವಾಗಿ ನದಿ ದಂಡೆಗಳಿಂದ ಸಂಗ್ರಹಿಸಿದ ಜೇಡಿಮಣ್ಣನ್ನು ವಿವಿಧ ರೂಪಗಳಲ್ಲಿ ಕೌಶಲ್ಯದಿಂದ ರೂಪಿಸುತ್ತಾರೆ.

Terracotta craft
ಟೆರಾಕೋಟಾ ಜೇಡಿಮಣ್ಣಿನ ಕರಕುಶಲತೆ

ಆಕಾರ ನೀಡಿದ ನಂತರ, ಅವುಗಳನ್ನು ಬಿಸಿಲಿನಲ್ಲಿ ಒಣಗಿಸಲು ಬಿಡಲಾಗುತ್ತದೆ, ನಂಕಪ ಕುಶಲಕರ್ಮಿಗಳು ಸರಳ ಸಾಧನಗಳನ್ನು ಬಳಸಿಕೊಂಡು ಜೇಡಿಮಣ್ಣಿನ ಮೇಲೆ ಸಂಕೀರ್ಣವಾದ ವಿನ್ಯಾಸಗಳನ್ನು ಎಚ್ಚರಿಕೆಯಿಂದ ಕೆತ್ತುತ್ತಾರೆ. ನಂತರ ಅನುಗಳನ್ನು ಗಟ್ಟಿಯಾಗಿಸಲು ಗೂಡುಗಳಲ್ಲಿಟ್ಟು ಬೇಯಿಸಲಾಗುತ್ತದೆ. ಇದರಿಂದ ಆ ಕಲಾಕೃತಿಗಳು ದೀರ್ಘಕಾಲಿಕ ಬಾಳಿಕೆ ಬರುವ ವಸ್ತುಗಳಾಗುತ್ತವೆ.

ಸಾಂಕೇತಿಕತೆ

ಪ್ರತಿಯೊಂದು ಟೆರಾಕೋಟಾ ಗೊಂಬೆ, ವಿಗ್ರಹಗಳು ಮತ್ತು ಇತರ ಕಲಾಕೃತಿಗಳು ಒಂದು ವಿಶಿಷ್ಟ ಕಥೆಯನ್ನು ಹೇಳುತ್ತವೆ. ದೇವರ ಕತೆಗಳಿಂದ ಹಿಡಿದು ರಾಮಾಯಣ ಮತ್ತು ಮಹಾಭಾರತದಂತಹ ಪ್ರಾಚೀನ ಮಹಾಕಾವ್ಯಗಳ ದೃಶ್ಯಗಳವರೆಗೆ, ಈ ಕಲಾಕೃತಿಗಳ ಹಿಂದಿನ ಸಂಕೇತವು ಆಳವಾಗಿ ಬೇರೂರಿದೆ. ಕಲಾತ್ಮಕತೆಯು ಹೆಚ್ಚಾಗಿ ಬಂಗಾಳಿ ಜನರ ದೈನಂದಿನ ಜೀವನ, ಪದ್ಧತಿಗಳು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ.

A different view point of Rashmancha
ಇಗ್ಲೂ ಹಿಮ ಮನೆ ಇಷ್ಟವೇ? ಕಾಶ್ಮೀರದ ಗುಲ್ಮಾರ್ಗ್ ಈಗ ಅತ್ಯುತ್ತಮ ಟೂರಿಸ್ಟ್ ಜಾಗ!

ಕರಕುಶಲ ವಸ್ತುಗಳುಬಂಗಾಳದ ಟೆರಾಕೋಟಾ ಕರಕುಶಲ ವಸ್ತುಗಳು ಅದರ ಸಾಂಪ್ರದಾಯಿಕ ಗಡಿಗಳನ್ನು ಮೀರಿದ್ದು, ದೇವಾಲಯಗಳ ಕಥೆಗಳನ್ನು ಹೇಳುವ ಕಲಾಕೃತಿಗಳ ಜೊತೆಗೆ, ಮನೆಗಳನ್ನು ಅಲಂಕರಿಸುವ ಕರಕುಶಲ ವಸ್ತುಗಳನ್ನು ಇಂದು ನಾವು ನೋಡಬಹುದು.

ಅಲಂಕಾರಿಕ ವಸ್ತುಗಳಿಗೆ ಬಂಗಾಳದ ಕಲಾತ್ಮಕ ಪರಂಪರೆಯ ಸ್ಪರ್ಶವನ್ನು ನೀಡಲಾಗುತ್ತಿದೆ. ಇಂದು ನಾವು ಟೆರಾಕೋಟಾ ಆಭರಣಗಳು, ಗೃಹಾಲಂಕಾರ ವಸ್ತುಗಳು ಮತ್ತು ಪ್ರಾಚೀನ ಸಂಪ್ರದಾಯದಿಂದ ಸ್ಫೂರ್ತಿ ಪಡೆಯುವ ಕುಂಬಾರಿಕೆಗಳನ್ನು ವಸ್ತುಗಳನ್ನು ನಾವು ನೋಡಬಹುದು.

ಬಿಷ್ಣುಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಮದನಮೋಹನ ದೇವಾಲಯ, ರಾಸ್ ಮಂಚ್ ಮತ್ತು ಈ ಜೋರ್ ಬಾಂಗ್ಲಾ ದೇವಾಲಯದಂತಹ ಐತಿಹಾಸಿಕ ಕ್ಷೇತ್ರಗಳನ್ನು ವೀಕ್ಷಿಸಲು ಉತ್ಸುಕರಾಗಿರುತ್ತಾರೆ. ನೀವೂ ಬಿಷ್ಣುಪುರಕ್ಕೆ ಭೇಟಿ ನೀಡುವುದಾದರೆ, ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ...

ರಾಸ್ಮಂಚ

ರಾಸ್ಮಂಚ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರದಲ್ಲಿರುವ ಒಂದು ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯ ನಿರ್ಮಾಣಕ್ಕೆ ಮೊದಲು ಕ್ರಿ.ಶ. 1600 ರಲ್ಲಿ ಮಲ್ಲಭೂಮ್ ರಾಜ ಹಂಬೀರ್ ಮಲ್ಲ ದೇವ್ (ಬೀರ್ ಹಂಬೀರ್) ಆದೇಶಿಸಿದ್ದರು. ಈ ದೇವಾಲಯದ ಉದ್ದ ಮತ್ತು ಅಗಲ 24.5 ಮೀಟರ್ ಮತ್ತು ಎತ್ತರ 12.5 ಮೀಟರ್ ಇದ್ದು, ತಳಪಾಯವು ಲ್ಯಾಟರೈಟ್ ಕಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ಮೇಲ್ಭಾಗವು ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ.

Rashmancha
ರಾಸ್ಮಂಚ

'ಇಟ್ಟಿಗೆಯಿಂದ ನಿರ್ಮಿಸಲಾದ ಚೌಕ' ರಚನೆಯ ಮೇಲೆ ಮೊಟಕುಗೊಳಿಸಿದ ಪಿರಮಿಡ್ ಛಾವಣಿಯಿದ್ದು, ಇದನ್ನು ಲ್ಯಾಟರೈಟ್ ಸ್ತಂಭದ ಮೇಲಿನ ಸ್ಟ್ಯಾಂಡ್‌ಗಳ ಮೇಲೆ ನಿರ್ಮಿಸಲಾಗಿದೆ. ಮಧ್ಯದಲ್ಲಿ ಸಣ್ಣ ದೇವಾಲಯವಿದ್ದು, ಮೂರು-ಕಾರಿಡಾರ್ ಗ್ಯಾಲರಿಗಳನ್ನು ಹೊಂದಿರುವ ಪ್ರಭಾವಶಾಲಿ ಚದರ ಕಟ್ಟಡವಾಗಿದೆ. ರಾಸ್ ಹಬ್ಬದ ಸಮಯದಲ್ಲಿ 'ಇತರ ವಿಗ್ರಹಗಳನ್ನು ಸ್ಥಾಪಿಸಲು' ಇದನ್ನು ಬಳಸಲಾಗುತ್ತಿತ್ತು. ಇದನ್ನು 17ನೇ ಶತಮಾನದ ಸುಮಾರಿಗೆ ನಿರ್ಮಿಸಲಾಗಿದೆ.

A different view point of Rashmancha
ಪ್ರವಾಸಿಗರ ಗಮನಕ್ಕೆ; ಆಗಸ್ಟ್ 1 ರಿಂದ ಮಸ್ಸೂರಿಗೆ ಭೇಟಿ ನೀಡಲು ಆನ್‌ಲೈನ್ ನೋಂದಣಿ ಕಡ್ಡಾಯ

ಮದನಮೋಹನ ದೇವಾಲಯ

ಮದನಮೋಹನ ದೇವಾಲಯವು ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲಿರುವ 17ನೇ ಶತಮಾನದ ಟೆರಾಕೋಟಾ ಶೈಲಿಯ ಕೃಷ್ಣನ ದೇವಾಲಯವಾಗಿದೆ. ಇದನ್ನು 1694 ರಲ್ಲಿ ಮಲ್ಲ ರಾಜ ದುರ್ಜನ್ ಸಿಂಗ್ ದೇವನು ನಿರ್ಮಿಸಿದನು. ದೇವಾಲಯದ ಗೋಡೆಗಳ ಮೇಲೆ ಕೃಷ್ಣನ ಜೀವನ ಮತ್ತು ಇತರ ಪೌರಾಣಿಕ ಕಥೆಗಳ ದೃಶ್ಯಗಳನ್ನು ಕೆತ್ತಲಾಗಿದೆ. ಇದು ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಸಂರಕ್ಷಿಸಲ್ಪಟ್ಟಿದೆ.

Madanmohan Temple
ಮದನಮೋಹನ ದೇವಾಲಯ

ಗೇಟ್ ಆಫ್ ಓಲ್ಡ್ ಫೋರ್ಟ್

ಬಿಷ್ಣುಪುರದಲ್ಲಿರುವ ಹಳೆಯ ಕೋಟೆಯ ದ್ವಾರವನ್ನು ಸ್ಥಳೀಯವಾಗಿ 'ಗರ್ ದರ್ವಾಜಾ' (Garh Darwaja) ಅಥವಾ 'ಪಥರ್ ದರ್ವಾಜಾ' (Pathar Darwaja) ಎಂದು ಕರೆಯುತ್ತಾರೆ. ಈ ದ್ವಾರವು ಕೆಂಪು ಲ್ಯಾಟರೈಟ್ ಕಲ್ಲುಗಳಿಂದ (laterite blocks) ನಿರ್ಮಿತವಾಗಿದೆ. ಇದು ಮಲ್ಲ ರಾಜರ ಯುದ್ಧ ತಂತ್ರಗಾರಿಕೆಯ ಅತ್ಯುತ್ತಮ ಉದಾಹರಣೆಯಾಗಿದೆ.

Gate Of Old Fort
ಗೇಟ್ ಆಫ್ ಓಲ್ಡ್ ಫೋರ್ಟ್

ಇದು ಪ್ರಾಚೀನ ಬಿಷ್ಣುಪುರ ರಾಜಧಾನಿಯ ಕೋಟೆಗೆ ಉತ್ತರ ದಿಕ್ಕಿನ ಪ್ರವೇಶ ದ್ವಾರವಾಗಿತ್ತು. ಇದನ್ನು ಮಲ್ಲಾ ರಾಜಾ ಬೀರ್ ಸಿಂಗ್ (Raja Bir Singha) 17ನೇ ಶತಮಾನದ ದ್ವಿತೀಯಾರ್ಧದಲ್ಲಿ ನಿರ್ಮಿಸಿದನು. ಇದರ ಎರಡೂ ಬದಿಗಳಲ್ಲಿ ಸೈನಿಕರಿಗೆ ತಂಗಲು ಕೋಣೆಗಳಿವೆ ಮತ್ತು ಶತ್ರುಗಳ ಮೇಲೆ ಬಾಣ ಅಥವಾ ಗುಂಡು ಹಾರಿಸಲು ರಂಧ್ರಗಳಿವೆ. ಕೋಟೆಯ ಬಹುತೇಕ ಭಾಗಗಳು ಕಾಲಾನಂತರದಲ್ಲಿ ನಾಶವಾಗಿದ್ದರೂ, ಈ ಎರಡು ದ್ವಾರಗಳು (ಒಂದು ದೊಡ್ಡದು ಮತ್ತು ಒಂದು ಚಿಕ್ಕದು) ಇಂದಿಗೂ ಇವೆ. ಈ ದ್ವಾರಗಳು ಬಿಷ್ಣುಪುರದ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಗಳಾಗಿವೆ.

ಜೋರ್ ಬಾಂಗ್ಲಾ ದೇವಾಲಯ

ಜೋರ್ ಬಾಂಗ್ಲಾ ದೇವಾಲಯವು (Jor Bangla Temple) ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲಿರುವ ಪ್ರಸಿದ್ಧ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ವಿಶಿಷ್ಟವಾದ 'ಜೋರ್ ಬಾಂಗ್ಲಾ' ಅಥವಾ 'ದೋ ಚಾಲಾ' (Dochala) ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಅಂದರೆ, ಎರಡು ಗುಡಿಸಲುಗಳಂತಹ ರಚನೆಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿ, ಅವುಗಳ ಮೇಲೆ ಒಂದೇ ಛಾವಣಿಯನ್ನು ನಿರ್ಮಿಸಲಾಗಿದೆ.

Jor Bangla Temple
ಜೋರ್ ಬಾಂಗ್ಲಾ ದೇವಾಲಯ

ಈ ದೇವಾಲಯದ ಅತಿ ದೊಡ್ಡ ಆಕರ್ಷಣೆ ಎಂದರೆ ಇದರ ಹೊರ ಗೋಡೆಗಳ ಮೇಲಿರುವ ಅತ್ಯುತ್ಕೃಷ್ಟವಾದ ಟೆರಾಕೋಟಾ (ಸುಟ್ಟ ಮಣ್ಣಿನ) ಕೆತ್ತನೆಗಳು. ಈ ಕೆತ್ತನೆಗಳು ಮಹಾಭಾರತ ಮತ್ತು ರಾಮಾಯಣದ ಕಥೆಗಳು, ಪೌರಾಣಿಕ ಘಟನೆಗಳು ಮತ್ತು ಅಂದಿನ ಸಮಾಜದ ಜೀವನಶೈಲಿಯನ್ನು ಚಿತ್ರಿಸುತ್ತವೆ. ದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (Archaeological Survey of India - ASI) ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕ ಎಂದು ಘೋಷಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com