ನೀವು ಅಭ್ಯಾ ಸ ಮಾಡುತ್ತಾ ಹೋದಂತೆ ಏಕಾಗ್ರತೆ ಸಾಧಿಸಬಹುದು. ಒಂದು ಹಾಡು ಬರೆಯುವಾಗ ಧ್ಯಾನಸ್ಥ ಸ್ಥಿತಿಗೆ ತಲುಪಬೇಕು. ನಿಮಗೆ ಹೊರಗಿನ ಪ್ರಪಂಚದ ಅರಿವು ಇರಬಾರದು. ಆ ಹೊತ್ತಿಗೆ ಹೊರಗಿನ ಸದ್ದು ಕೇಳಿಸಬಾರದು, ಹೊರಗಿನ ಹೊಯ್ದಾಟಗಳೂ ಕೇಳಿಸಬಾರದು. ನಿಮ್ಮೊಳಗೆ ನೀವೇ ಶಾಂತ ಪ್ರಪಂಚವೊಂದನ್ನು ಸೃಷ್ಟಿ ಮಾಡಬೇಕು. ಅದು ಮುಖ್ಯ. ಹೀಗಿದ್ದರೆ ನೀವು ಯಾವ ಮೂಡ್ ಗೆ ಬೇಕಾದರೂ ಹೋಗಬಹುದು. ನಿಮ್ಮ ಮನಸ್ಸನ್ನು ಹತೋಟಿಗೆ ತಂದು ಬಿಟ್ಟರೆ ಮುಗೀತು. ನೋಡಿ ನೀವು ವೃಂದಾವನದಲ್ಲೋ, ಊಟಿಯಲ್ಲೋ ಕುಳಿತಿದ್ದು, ಮನಸ್ಸು ಕಲಾಸಿಪಾಳ್ಯ ಆಗಿದ್ದರೆ ಹಾಡು ಬರೆಯಲು ಸಾಧ್ಯವಿಲ್ಲ. ಅದೇ ರೀತಿ ಕಲಾಸಿಪಾಳ್ಯದಲ್ಲಿ ಕುಳಿತು ಮನಸ್ಸು ಊಟಿಯಲ್ಲಿದ್ದರೆ ಹಾಡು ಬರೆಯಬಹುದು. ಇಂಥಾ ಸಾಧನೆಯನ್ನು ನಾವು ದಕ್ಕಿಸಿಕೊಳ್ಳಬೇಕು. ನಮ್ಮ ಮನಸ್ಸನ್ನು ತಹಬದಿಗೆ ತಂದರೆ ಅದು ಹೇಳಿದಂತೆ ಕೇಳುತ್ತದೆ. ನನ್ನದಲ್ಲದ ಭಾವನೆಯನ್ನು ನಾನು ಗೀತೆಯ ಮೂಲಕ ವ್ಯಕ್ತ ಪಡಿಸುವಾಗ ನನ್ನ ಸೃಜನಶೀಲತೆಯ ಮಟ್ಟ ಹೆಚ್ಚುತ್ತದೆ. ನನ್ನದಲ್ಲದ ಭಾವನೆಯನ್ನು ನಾನು ಗಟ್ಟಿಯಾಗಿ ಇನ್ನೊಬ್ಬರಿಗೆ ತಲುಪಿಸಬೇಕು. ನನಗನಿಸಿದಂತೆ ನಾನು ಬರೆಯುತ್ತಾ ಹೋಗುತ್ತೀನಿ. ಹೀಗೆ ಬರೆಯುವಾಗ ಕಾವ್ಯಗಳಿಗೆ ಚೌಕಟ್ಟು ಇರಲ್ಲ, ಆದರೆ ನಮಗೆ ಬಹಳಷ್ಟು ಚೌಕಟ್ಟುಗಳಿರುತ್ತವೆ . ನೋಟ್ಸ್, ಸಂದರ್ಭ, ಲಯ ಹೀಗೆ ಸಾಕಷ್ಟು ಚೌಕಟ್ಟುಗಳಿವೆ. ಈ ಚೌಕಟ್ಟುಗಳಲ್ಲಿಯೂ ನಾವು ಸೃಜನಶೀಲತೆಯನ್ನು ತೋರಿಸೇಕು. ಹಾಗಾಗಿ ಇದು ತುಂಬಾ ಸವಾಲಿನ ವಿಷಯ. ಹೊರಗಡೆಯವರಿಗೆ ತುಂಬಾ ಸುಲಭ ಅನಿಸಿದರೂ, ಅದಷ್ಟು ಸುಲಭವಲ್ಲ. ಇನ್ಯಾರೋ ಬರೆದ ಹಾಡುಗಳನ್ನು ಕೇಳಿ ಸಿನಿಮಾ ಸಾಹಿತ್ಯ ಕೆಟ್ಟದು ಅನ್ನುವವರಿದ್ದಾರೆ. ಎಲ್ಲ ಕಡೆಯೂ ಜೊಳ್ಳುಗಳು ಇದ್ದೇ ಇವೆ. ಸಾಹಿತ್ಯದಲ್ಲಿ, ಕಾವ್ಯದಲ್ಲಿ ಜೊಳ್ಳುಗಳಿಲ್ಲವಾ ? ಹಾಗೆಯೇ ಇಲ್ಲಿ ಗಟ್ಟಿ ಕಾಳು ಮತ್ತು ಜೊಳ್ಳು ಎರಡೂ ಇದೆ. ಆದರೆ ಉದಾಹರಣೆಗೆ ತೆಗೆದುಕೊಳ್ಳುವಾಗ ಜೊಳ್ಳುಗಳನ್ನೇ ಹೈಲೈಟ್ ಮಾಡಲಾಗುತ್ತದೆ. ಯಾಕೆ ಉದಾಹರಣೆ ಕೊಡುವಾಗ ಒಳ್ಳೆಯ ಹಾಡುಗಳನ್ನು ಉದಾಹರಣೆ ಕೊಡಬಾರದು? . ಸಿನಿಮಾ ಸಾಹಿತ್ಯದಲ್ಲಿ ಕನ್ನಡಾಭಿಮಾನವನ್ನು ಬಡಿದೆಬ್ಬಿಸಿದ ಹಾಡುಗಳಿವೆ, ಜೀವನ ಪ್ರೀತಿ ಹುಟ್ಟಿಸಿದ ಹಾಡುಗಳು, ಮನುಷ್ಯನ ಬದುಕನ್ನೇ ಬದಲಾಯಿಸಿದ ಹಾಡುಗಳಿವೆ. ಸಿನಿಮಾ ಸಾಹಿತ್ಯದ ಬಗ್ಗೆ ಮಾತನಾಡುವಾಗ ಇಂಥಾ ಹಾಡುಗಳನ್ನೂ ಪರಿಗಣಿಸಿ. ಎಲ್ಲೋ ಒಂದು ಕಡೆ ಸನ್ನಿವೇಶಕ್ಕೆ ತಕ್ಕಂತೆ ಹಳೇ ಪಾತ್ರೆ, ಕಬ್ಬಿಣ, ಎಕ್ಕಡ ಪದ ಬಳಸಿದ ಹಾಡುಗಳು ಬಂತು ಎಂದಾಗ ಸಿನಿಮಾ ಸಾಹಿತ್ಯವನ್ನೇ ಪ್ರಶ್ನಿಸಲಾಗುತ್ತದೆ. ಹಳೇ ಪಾತ್ರೆ, ಕಬ್ಬಿಣ , ಎಕ್ಕಡ ಎಲ್ಲವೂ ನಾವು ಆಡುವ ಪದಗಳೇ. ಅದ್ಯಾಕೆ ಸಿನಿಮಾ ಸಾಹಿತ್ಯದಲ್ಲಿ ಬರಬಾರದು? ಆ ಪದಗಳನ್ನು ಯಾಕೆ ಅಸ್ಪಶೃತೆ