
ನನ್ನದು ಪ್ರೇಮ ವಿವಾಹ. ನಾನು ಹಿಂದು, ನನ್ನಾಕೆ ಮುಸ್ಲೀಂ. ನನ್ನ ಧರ್ಮ ನನಗೆ ಶ್ರೇಷ್ಠ, ಅವಳ ಧರ್ಮ ಅವಳಿಗೆ ಶ್ರೇಷ್ಠ. ಆದರೂ ನನಗೋಸ್ಕರ ಹಣೆಯಲ್ಲಿ ಕುಂಕುಮದ ರೀತಿ ಹಚ್ಚೆ ಹಾಕಿಸಿಕೊಂಡಿದ್ದಾಳೆ. ನನ್ನ ಧರ್ಮವನ್ನು ಪ್ರೀತಿಸ್ತಾಳೆ. ಅವಳ ಧರ್ಮವನ್ನು ಪಾಲಿಸ್ತಾಳೆ. ದೇವರೆಂದರೆ ಬಲು ಭಕ್ತಿ. ಸಮರಸವೇ ಜೀವನ ಎನ್ನುವಂಥಾ ಸಂಸಾರ ನಮ್ಮದು. ಮಧ್ಯೆ ಮಧ್ಯೆ ವಿರಸ, ವಿರಹ ಊಟದಲ್ಲಿ ಉಪ್ಪಿನ ಕಾಯಿ ಇದ್ದ ಹಾಗೆ. ನಮ್ಮ ಪ್ರೀತಿಗೆ ಅಂದಾಜು 20 ವರ್ಷ ದಾಟಿವೆ. ನಾಲ್ಕು ಮಕ್ಕಳು ನಮ್ಮ ಪ್ರೀತಿಯ ಫಲವಾಗಿ, ಪುಷ್ಪದ ರೀತಿ ಅರಳುತ್ತಿವೆ. ನಮ್ಮ ಮನೆಯಲ್ಲೂ ನಮ್ಮ ಪ್ರೀತಿಗೆ ಸಹಮತ. ನಮ್ಮ ಮಕ್ಕಳಿಗೆ ಯಾವುದರಲ್ಲೂ ಕೊರತೆ ಇಲ್ಲ. ಸಮಾಜದಲ್ಲಿ ತಲೆ ಎತ್ತಿ ಬಾಳುವ ಗೌರವ ನಮಗೆ ದೊರಕಿದ್ದರ ಬಗ್ಗೆ ಹೆಮ್ಮೆ ಇದೆ. ಜಾತಿ ಜಾತಿಗಳ ಮಧ್ಯೆ ಕಲಹ ಹುಟ್ಟುಹಾಕುವವರ ಬಗ್ಗೆ ಜಿಗುಪ್ಸೆ ಇದೆ. ನಾವು ಮನುಷ್ಯರಾಗಿ ಜೀವಿಸದರೆ ಸಾಕು ಅದೇ ಬಲುದೊಡ್ಡ ನೆಮ್ಮದಿಯ ಜೀವನ ಅನ್ನೋದು ನಮ್ಮ ಭಾವನೆ. ನಮಗೆಂದೂ ಪಶ್ಚಾತ್ತಾಪ ಆಗಿಲ್ಲ. ಮುಂದೆ ಆಗದಷ್ಟು ದೂರ ದಾರಿ ಸವೆಸಿದ್ದೇವೆ. ನಮ್ಮಂಥವರಿಗೆ ಪ್ರೋತ್ಸಾಹ ಕೊಡಬೇಕು ಅಂತಾ ಚಿಂತಿಸ್ತೇವೆ. ಮಕ್ಕಳ ಮೇಲೆ ನಮ್ಮತನವನ್ನು ಎಂದೂ ಬಲವಂತವಾಗಿ ಹೇರಬಾರದು ಅಂದ್ಕೋಂಡಿದ್ದೇವೆ. ಪ್ರತಿಭೇ ಒಂದೇ ಮಾನದಂಡವಾಗಬೇಕು ಅಂತಾ ಆಶಿಸ್ತೇವೆ. ಮೇಲು, ಕೀಳು ಅನ್ನೋದು ನಮ್ಹತ್ರ ಇಲ್ಲ. ನಮಗಿಂತ ಅರ್ಥಿಕವಾಗಿ ಕೆಳಗಿರುವವರನ್ನ ಪ್ರೀತಿಸ್ತೇವೆ. ಕೈಲಾದ ಸಹಾಯ ಮಾಡ್ತೇವೆ. ಮಾನವೀಯತೆಯ ಮಿಡಿತ ಸಂದರ್ಭ ಸಿಕ್ಕಾಗೆಲ್ಲ ಅನಾವರಣಗೊಳಿಸ್ತೇವೆ. ನಮ್ಮಂಥವರ ಸಂಖ್ಯೆ ಹೆಚ್ಚಾಗಬೇಕು ಅನ್ನೋದು ನಮ್ಮಾಶಯ. ನಮ್ಮ ಕುಟುಂಬದ ಹಿರಿಯರಂತೆ ಇತರೆ ಕುಟುಂಬದ ಹಿರಿಯರೂ ಇರಬೇಕು ಎಂದು ಬಯಸ್ತೇವೆ. ಆದ್ರ ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಹಿರಿಯರನ್ನು ಕಟ್ಟಿಹಾಕಿದ್ರೆ ಏನೂ ಮಾಡೋಕಾಗೊಲ್ಲ. ಪ್ರೇಮಿಗಳೆ ನಿಮಗೆ ನೀವು ಪ್ರೀತಿಸಿದವರನ್ನು ಚನ್ನಾಗಿ ನೋಡ್ಕೋಳ್ಳೋ ತಾಕತ್ತು, ಧೈರ್ಯ ಇದ್ರೆ ಮಾತ್ರ ಪ್ರೇಮವನ್ನು ವಿವಾಹ ಬಂಧನಕ್ಕಿಳಿಸಿ. ಇಲ್ಲಾಂದ್ರೆ ಜಸ್ಟ ಮನೆಯವರು ಹೇಳಿದಂತೆ ಕೇಳಿ. ಕ್ಷಣಿಕ ಆವೇಶಕ್ಕೋಳಗಾಗಿ, ಬಲಿಯಾಗಿ ಭವಿಷ್ಯ ಮಸುಕಾಗಿಸಿಕೊಳ್ಳಬೇಡಿ. ಹೆಣ್ಮಕ್ಕಳೆ ನಿಮ್ಮನ್ನು ಪ್ರೀತಿಸುವವನು ಜೀವನ ಪೂರ್ತಿ ನಿಮ್ಮನ್ನ ಚನ್ನಾಗಿ ನೋಡ್ಕೋತಾನೆ ಅನ್ನೋ ನಂಬಿಕೆ ಬಂದರೆ ಮಾತ್ರ ಮುಂದುವರೆಯಿರಿ. ಇಲ್ಲದಿದ್ದರೆ ಫುಲ್ ಸ್ಟಾಪ್ ಹಾಕಿ. ದಯವಿಟ್ಟು ಹುಡುಗರ ತಲೆಕೆಡ್ಸಿ ಆತ ಮಾನಸಿಕ ರೋಗಿಯಾಗಿ ಕೊನೆಗೆ ಆತ್ಮಹತ್ಯೆ ಮಾಡ್ಕೋ ಹಂತಕ್ಕೆ ತರಬೇಡಿ. ಹುಡುಗರೆ ನಿಮ್ಮನ್ನು ಅತಿಯಾಗಿ ಇಷ್ಟಪಡುವ ಪ್ರಿತಮೆಯನ್ನು ಯಾವುದೇ ಕಾರಣಕ್ಕೂ ವಂಚಿಸಬೇಡಿ.
ಇಂತಿ ನಿಮ್ಮ ಪ್ರೀತಿಯ
ದವಲತ್ ಕುಮಾರ ವಡವಡಗಿ
ಮುದ್ದೇಬಿಹಾಳ-586 212
ಜಿ:ವಿಜಯಪುರ (ಬಿಜಾಪುರ)
Advertisement