ಸಾಯುವ ಮುನ್ನ ಬರೆದ ಕೊನೆಯ ಪ್ರೀತಿ ಪತ್ರ!

ಕಳೆದ 4 ವರ್ಷಗಳ ಪ್ರೀತಿಯಲ್ಲಿ ನಾವಿಬ್ಬರು ಅದೆಷ್ಟು ಬಾರಿ ಜಗಳ ಮಾಡಿದ್ದೀವಿ. ಲೆಕ್ಕಕ್ಕೆ ಸಿಗಲ್ಲ. ಆದರೆ ಆ ಜಗಳದಿಂದ ನಮ್ಮಿಬ್ಬರ ಮಧ್ಯೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿತ್ತೇ ಹೊರತು ಕಡಿಮೆಯಾಗಿಲ್ಲ...
ಕೊನೆಯ ಪ್ರೀತಿ ಪತ್ರ
ಕೊನೆಯ ಪ್ರೀತಿ ಪತ್ರ
Updated on

ಯಾರಿಗಾಗಿ ಈ ಪತ್ರ. ನಾನ್ಯಾಕೆ ಹುಚ್ಚನಂತೆ ವರ್ತಿಸುತ್ತಿದ್ದೀನಿ. ನನ್ನಲ್ಲೆ ಇದಕ್ಕೆ ಉತ್ತರವಿಲ್ಲ. ಮತ್ಯಾರಲ್ಲಿ ಹುಡುಕಲಿ?

ಆದರೂ ಬರೆಯಬೇಕೆನಿಸಿದೆ ಸಾಯುವ ಮುನ್ನ ಕೊನೆಯ ಪತ್ರ. ಆದರೆ ಪದಗಳೇ ಕೂಡುತ್ತಿಲ್ಲ. ಆದರೂ ಬರೆಯುತ್ತಿದ್ದೇನೆ. ಯಾರಿಗಂತ ಈಗಲೂ ತಿಳಿಯುತ್ತಿಲ್ಲ. ಯಾರಿಗಾಗಿ ಈ ಪತ್ರ? ಇನ್ಯಾರಿಗೆ? ನನ್ನ ಕನಸಿಗೆ ರೆಕ್ಕೆ ಪುಕ್ಕ ಕೊಟ್ಟು ಸ್ವಚ್ಛಂದವಾಗಿ ಹಾರಾಡುವಂತೆ ಮಾಡಿ. ಸ್ವಪ್ನ ಲೋಕವನ್ನು ಪರಿಚಯಿಸಿ, ಸುತ್ತಾಡಿಸಿ, ಅಲ್ಲಿ ನನ್ನೊಂದಿಗೆ ಕಳೆದ ನನ್ನ ಜೀವದ ಗೆಳತಿ. ಸ್ವಪ್ನ ಸುಂದರಿ.

ನಿನಗಾಗಿ ಬರೆಯುತ್ತಿದ್ದೇನೆ. ನೀ ಸಿಕ್ಕರೂ ಸಿಗದಿದ್ದರೂ, ನನ್ನ ನೆನಪಿನ ಹೂ ಬುತ್ತಿಯಲ್ಲಿ ಜೋಪಾನವಾಗಿ ಕೂಡಿಟ್ಟಿದ್ದ ಆ ನೆನಪುಗಳ ಹೆಕ್ಕಿ ತೆಗೆಯುತ್ತಿರುವೆ. ನನ್ನ ಪಯಣ ಇಲ್ಲಿಗೆ ಕೊನೆಯಾಗಬಹುದು ಆದರೆ ಆ ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳನ್ನು ನನ್ನಲ್ಲೇ ಮಣ್ಣುಮಾಡಲು ಅದೇಕೊ ಆಗುತ್ತಿಲ್ಲ. ಹಾಗಂತ ಇಬ್ಬರ ನಡುವಿನ ಖಾಸಗಿ ವಿಚಾರವನ್ನು ಬಟಾಬಯಲು ಮಾಡಿ ನಿನ್ನ ನೆಮ್ಮದಿಗೆ ಕಿಚ್ಚು ಹಚ್ಚುವ ಹಂಬಲ ನನಗಿಲ್ಲ. ಈ ಪತ್ರ ನಿನ್ನ ಕೈ ಸೇರುವ ಮುನ್ನ ನನ್ನ .... ಸುದ್ದಿ ನಿನ್ನ ಕಿವಿ ಮುಟ್ಟಬಹುದು. ಅದಕ್ಕೆ ನೀನು ವ್ಯಥೆ ಪಡಬೇಡ. ನನ್ನ .... ನಿನಗೆ ಸ್ವತಂತ್ರವನ್ನು ನೀಡಲಿದೆ. ಅದನ್ನು ಸ್ವಚ್ಛಂದವಾಗಿ ಅನುಭವಿಸು. ನಿನ್ನ ಮುಂದಿನ ದಿನಗಳು ಹೊನ್ನಿನ ಹಾಸಿಗೆಯಾಗಲಿ.....ನಿರಂತರ.

ಪ್ರೀತಿ ಎಷ್ಟು ಕ್ರೂರಿ ಅಲ್ವಾ. ಇದ್ಯಾಕೆ ನನ್ನಲ್ಲಿ ಇಂತ ಯೋಚನೆಗಳು ನನಗೆ ತಿಳಿಯುತ್ತಿಲ್ಲ. ಪ್ರೀತಿ ಕೊಟ್ಟಷ್ಟು ಸುಖ ಮತ್ಯಾವುದು ಕೊಡಲಿಲ್ಲ ಎಂದು ಹೇಳುತ್ತಿದ್ದ ನಾನು ಇಂದೇಕೆ ಈ ರೀತಿ ಆಲೋಚಿಸುತ್ತಿರುವೆ. ಮೋಸ್ಟ್ ಲೀ ಇಂದು ನಿನ್ನ ಆ ಪವಿತ್ರ ಪ್ರೀತಿಯಿಂದ ವಂಚಿತನಾಗಿ, ಕತ್ತಲೆಯ ಕೂಪಕ್ಕೆ ತಳಲ್ಪಟ್ಟಿರುವ ಮನಾಂಧಕಾರದ ಯೋಚನೆ ಇರಬಹುದು.

ಭಾವದ ಗೆಳತಿ...
ನೀ ನನ್ನ ಬಿಟ್ಟರು ನಾ ನಿನ್ನ ಬಿಡುವ ಮನಸ್ಸಾಗುತ್ತಿಲ್ಲ. ನಿನ್ನ ಮಾತು ಸತ್ಯ. ಅದ್ಯಾಕೋ ನೀ ನಾಡಿದ ಮಾತುಗಳು ಇಂದು ಕಿವಿಯಲ್ಲಿ ಮತ್ತೆ ಮತ್ತೆ ಗುನುಗುತ್ತಿದೆ. ನಾನ್ಯಾಕೆ ಈತರ ಮಾಡ್ತಿದ್ದೇನೆ ಗೊತ್ತಿಲ್ಲ. ಮೋಸ್ಟ್ ಲೀ ಅದು ನನ್ನ ಹುಟ್ಟು ಸ್ವಭಾವ ಇರಬಹುದು. ಅದು ನಿನಗ್ಯಾಕೆ ಇಷ್ಟವಾಗಿಲ್ಲ. ಹುಡುಗಿಯರಿಗೆ ತನ್ನ ಹುಡುಗ ತನ್ನ ಮೇಲೆ ಮಾತ್ರ ಕಾಳಜಿ ವಹಿಸಬೇಕು ಅಂತ. ಆದರೆ ಇಂದು ಅದೇ ನನ್ನ ಬದುಕಿಗೆ ವಿಷವಾಯಿತೆ.

ಇದು ಅಸಾಧ್ಯದ ಮಾತು. ನಾನು ಮಾಡಿದ ಯಾವೊಂದು ಕೆಲಸವನ್ನು ನೀನು ತಿರಸ್ಕರಿಸಿಲ್ಲ. ಕೊಂಕು ಬಿಂಕದ ಮಾತಾಡಿಲ್ಲ. ಇದೇ ನೀ ನನ್ನ ಮೇಲಿಟ್ಟ ಪ್ರೀತಿಗೆ ಸಾಕ್ಷಿ. ಕಳೆದ 4 ವರ್ಷಗಳ ಪ್ರೀತಿಯಲ್ಲಿ ನಾವಿಬ್ಬರು ಅದೆಷ್ಟು ಬಾರಿ ಜಗಳ ಮಾಡಿದ್ದೀವಿ. ಲೆಕ್ಕಕ್ಕೆ ಸಿಗಲ್ಲ. ಆದರೆ ಆ ಜಗಳದಿಂದ ನಮ್ಮಿಬ್ಬರ ಮಧ್ಯೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿತ್ತೇ ಹೊರತು ಕಡಿಮೆಯಾಗಿಲ್ಲ. ಈ ಇದೇ ಕಾರಣಕ್ಕೆ ಇಂದು ನಾನು ಬೆಂಬಿಡದೆ ನಿನ್ನ ಕಾಳಜಿ ಮಾಡುತ್ತಿರುವುದು. ನಾನಿದ್ದರೆ ನೀನು ನಿಶ್ಚಿಂತೆಯಿಂದ .....ಕೈ ಹಿಡಿದು ಶಾಂತಿಯಿಂದ ದಾಂಪತ್ಯ ಜೀವನ ನಡೆಸಲು ಸಾಧ್ಯವಿಲ್ಲ. ನಿನ್ನ ಮನ ನನ್ನೆಡೆ ತುಡಿಯುತ್ತದೆ. ನನ್ನ ಭವಿಷ್ಯದ ಯೋಚನೆ ನಿನ್ನದು. ನಾನಿಲ್ಲದ ಬದುಕು ನಿನಗೆ ಅಸಾಧ್ಯ. ನಿನ್ನ ಮುಂದಿನ ಭವಿಷ್ಯಕ್ಕೆ ಯಾವುದೇ ತೊಂದರೆ ಕೊಡಲು ನಾನು ಇಚ್ಛಿಸುವುದಿಲ್ಲ. ಅದಕ್ಕಾಗಿ ಬರೆಯುತ್ತಿರುವೆ ನಿನಗಾಗಿ ಕೊನೆಯ ಪತ್ರ. ಬರುವೆ... ಮತ್ತೆ ಬರುವೆ... ಸಾಧ್ಯವಾದರೆ ಮುಂದಿನ ಜನ್ಮದಲ್ಲಿ ಮತ್ತೆ ನೀ ನನಗೆ ಸಿಕ್ಕರೆ ನಾನಿನ್ನ ಪಡೆಯದೆ ಬಿಡುವುದಿಲ್ಲ.

-ವಿಶ್ವನಾಥ್ ಎಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com