ಯುದ್ಧ ಘೋಷಣೆಯಾಗುತ್ತಿದ್ದಂತೆಯೇ ತನ್ನ ಸಾವವನ್ನೂ ಅಷ್ಟೇ ಖಚಿತವಾಗಿರಿಸಿಕೊಂಡಿದ್ದರೇನೋ ಎಂಬಂತಿದೆ ವಿಜಯಂತ್ ಥಾಪರ್ ತಮ್ಮ ಪೋಷಕರಿಗೆ ಬರೆದ ಪತ್ರ. ಅಷ್ಟೇ ಅಲ್ಲದೇ, ಸಾವನ್ನು ಎದುರುಹಾಕಿಕೊಂಡರೂ ದೇಶಕ್ಕಾಗಿ ಹೋರಾಡಬೇಕೆಂಬ ವಿಜಯಂತ್ ಥಾಪರ್ ಅವರ ಮನಸ್ಥಿತಿ ಈ ದೇಶದ ಯೋಧರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಎಂದು ಅನ್ನಿಸದೇ ಇರದು. "ಈ ಪತ್ರ ನಿಮಗೆ ತಲುಪುವಷ್ಟರಲ್ಲಿ ನಾನು ನಿಮ್ಮನ್ನು ಆಗಸದಿಂದ ನೋಡುತ್ತಿರುತ್ತೇನೆ" ಎಂದೇ ಪ್ರಾರಂಭವಾಗುವ ಪತ್ರದ ಒಕ್ಕಣೆ, ಯೋಧರ ಬಗ್ಗೆ ನೆನೆದಾಗ ಎಂಥವರೂ ಕಣ್ಣೀರಾಗಬೇಕು ಹಾಗಿದೆ. ಅಷ್ಟೇ ಅಲ್ಲದೇ, ಈ ಪತ್ರ ನಿಮ್ಮ ಕೈ ಸೇರುವುದರ ವೇಳೆಗೆ ಮೇಲಿನಿಂದ ನಿಮ್ಮನ್ನು ನೋಡುವ ನಾನು ಅಪ್ಸರೆಯರಿಂದ ಆತಿಥ್ಯ ಸ್ವೀಕರಿಸುತ್ತಿರುತ್ತೇನೆ. ಮತ್ತೊಂದು ಮನುಷ್ಯ ಜನ್ಮವೆಂದಿದ್ದರೆ ಮತ್ತೆ ಭಾರತೀಯ ಸೇನೆಗೆ ಸೇರುತ್ತೇನೆ, ನಿಮ್ಮ ನಾಳೆಗಳಿಗಾಗಿ ಭಾರತೀಯ ಸೇನೆ ಹೋರಾಡಿದ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಿ, ಮುಂದಿನ ಪೀಳಿಗೆಗೆ ಭಾರತೀಯ ಯೋಧರ ಬಲಿದಾನದ ಬಗ್ಗೆ ತಿಳಿಸಿ" ಎಂದು ಯುದ್ಧ ಘೋಷಣೆಯಾದ ಬೆನ್ನಲ್ಲೇ ಸಾವು ತನ್ನ ಬೆನ್ನ ಹಿಂದಿದೆ ಎಂಬುದನ್ನು ಅರಿತೂ ನಿರ್ಲಿಪ್ತವಾಗಿ ದೇಶಕ್ಕಾಗಿ ಹೋರಾಡಿದ ವಿಜಯಂತ್ ಥಾಪರ್ ನ ಸಾಹಸಗಾಥೆಗಳನ್ನು ನೆನೆಸಿಕೊಂಡರೆ, ಕಣ್ಣಂಚು ತೇವವಾಗುತ್ತದೆ. ಭಾರತೀಯ ಯೋಧರ ಬಗ್ಗೆ ಇರುವ ಗೌರವ ನೂರ್ಮಡಿಯಾಗುತ್ತದೆ. ಯೋಧರ ತ್ಯಾಗ ಬಲಿದಾನಗಳಿಗೆ ನಾವು ನತಮಸ್ತಕರಾಗಿ ನಿಲ್ಲಲು ಅಷ್ಟೇ ಸಾಧ್ಯ ಎನಿಸುತ್ತದೆ.