ಅಕ್ಕರೆಯ ಅಕ್ಕನೇ ಸ್ಫೂರ್ತಿ
ಭಗವಂತನಿಲ್ಲದ ತಾನವಿಲ್ಲ ಸ್ಫೂರ್ತಿ ಇಲ್ಲದ ಸ್ಥಳವಿಲ್ಲ ಎಂದು ನಂಬಿರುವವನು ನಾನು. ಮಹಿಳೆ ಎನ್ನುವ ಒಂದು ಶಕ್ತಿ ಹಲವಾರು ರೀತಿಯಲ್ಲಿ ಸ್ಫೂರ್ತಿ ತುಂಬುತ್ತಲೇ ಬರುತ್ತಾರೆ. ನನ್ನ ಜೀವನದಲ್ಲಿ ನನ್ನ ಅಕ್ಕ ನನಗೆ ದೊಡ್ಡ ಸ್ಪೂರ್ತಿಯ ಶರಧಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪದವಿ ಮುಗಿಸಿ ದಾರಿ ಕಾಣದಾಗಿದೆ ರಾಘವೇಂದ್ರನೆ ಅನ್ನುವ ರೀತಿಯಲ್ಲಿ ಅಲೆದಾಡುತ್ತಿದ್ದಾಗ.. ನೀನು ಕಂಪ್ಯೂಟರ್ ಕಲಿ ಅವಕಾಶಗಳು ಬರುತ್ತವೆ ಎಂದು ತನಗೆ ಬರುತ್ತಿದ್ದ ಸಣ್ಣ ಮೊತ್ತದ ವೇತನದಲ್ಲಿ ಉಳಿಸಿ ನನ್ನನ್ನು ಒಂದು ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಸೇರಿಸಿದಳು. ಅಂದು ಶುರುವಾದ ನನ್ನ ಜೀವನದ ಏರು ಹಾದಿ ಅಡೆ ತಡೆಯಿಲ್ಲದೆ ಸಾಗುತ್ತಲೇ ಇದೆ. ಇಂದು ನಾನು ನಾನಾಗಿದ್ದೇನೆ ಎಂದರೆ ಅದು ನನ್ನ ಅಕ್ಕ ಕೊಟ್ಟ ಭಿಕ್ಷೆ.
ತನ್ನ ಜೀವನದಲ್ಲಿ ನಡೆದ ಅನೇಕ ಕಹಿ ಘಟನೆಗಳನ್ನು ಲೆಕ್ಕಿಸದೆ ಆನೆ ನಡೆದದ್ದೇ ಹಾದಿ ಎನ್ನುವಂತೆ ಅವಾಗ ಇವಾಗ ಉಳಿಸಿದ ಬೆಳೆಸಿದ ಹಣವನ್ನು ಒಟ್ಟು ಗೂಡಿಸಿ ಒಂದು ನಿವೇಶನವನ್ನು ಕೊಂಡುಕೊಂಡಳು. ನನ್ನ ಅಪ್ಪನ ಕನಸು ಕರುನಾಡಿನ ರಾಜಧಾನಿಯಲ್ಲಿ ನನ್ನ ವಂಶಕ್ಕೆ ಒಂದು ತಾಣ ಬೇಕೆಂಬುದು. ಆ ಬೃಹತ್ ಕನಸನ್ನು ನನಸು ಮಾಡಲು ನನ್ನ ಅಕ್ಕ ಎಲ್ಲಾ ಅಡೆ ತಡೆಗಳನ್ನು ಎದುರಿಸಿ ಹೆಬ್ಬಂಡೆಯಂತೆ ನಿಂತು ಕಳೆದ ವರ್ಷ ಅಪ್ಪನ ಕನಸನ್ನು ಸಾಕಾರಗೊಳಿಸಿದಳು.
ಆ ಮನೆಗೆ ಇಟ್ಟ ಹೆಸರು "ಅನುಗ್ರಹ ಸದನ"
ಇಂದು ನಾ ಸ್ಫೂರ್ತಿ ಎಂದು ಅಲ್ಲಿ ಇಲ್ಲಿ ಹುಡುಕುವುದೇ ಇಲ್ಲ.. ನನ್ನ ಅಕ್ಕ ನನಗೆ ದೊಡ್ಡ ಸ್ಫೂರ್ತಿ. ಸೊನ್ನೆಗೆ ಬೆಲೆಯನ್ನು ಕಂಡು ಹಿಡಿದ ನಮ್ಮ ದೇಶದಲ್ಲಿ.. ನನಗೆ ಸಿಗುವ ಮೊದಲ ಸ್ಫೂರ್ತಿ ನನ್ನ ಅಕ್ಕ. ಶೂನ್ಯದಲ್ಲಿ ಯಕ್ಷಿಣಿ ಮಾಡಿ ಬೇಕಾದ ವಸ್ತುವನ್ನು ತೆಗೆದು ಕೊಡುವ ಹಾಗೆ ನನ್ನ ಅಕ್ಕ ತನ್ನ ಜೀವನ ಶೂನ್ಯವಾಗಿದೆ ಎಂದು ಕೊಳ್ಳದೆ ಅ ಶೂನ್ಯದ ಹಿಂದಕ್ಕೆ ಕೆಲವು ಅಂಕಿಗಳನ್ನು ಹಾಕಿ ಅದಕ್ಕೆ ಬೆಲೆಯನ್ನು ತಂದು ಕೊಟ್ಟ ಛಲಗಾತಿ.
ಇಂದು ಸ್ಫೂರ್ತಿ ಎಂದರೆ ನನಗೆ ಅಕ್ಕ ಮತ್ತು ಅವಳ ಸಾಧನೆ ಮಾಡಿದ ಮಾರ್ಗ!!!
-ಶ್ರೀಕಾಂತ್ ಮಂಜುನಾಥ್