ಕಠ್ಮಂಡು: ನೂತನ ಸಂವಿಧಾನ ಜಾರಿ ಬಳಿಕ ನೇಪಾಳದಲ್ಲಿ ಉಂಟಾಗಿರುವ ತೀವ್ರ ಹೋರಾಟದ ಬೆನ್ನಲ್ಲಿಯೇ ನೇಪಾಳದ ವಿಮಾನ ಸಂಸ್ಥೆಗೆ ಬಾಂಗ್ಲಾದೇಶದ ಖಾಸಗಿ ಸಂಸ್ಥೆ ಇಂಧನ ಪೂರೈಕೆ ಮಾಡಲು ಮುಂದಾಗಿದೆ.
ಇಂಧನ ಕೊರತೆಯಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ್ದ ನೇಪಾಳ ಇದೀಗ ಬಾಂಗ್ಲಾದೇಶದ ಖಾಸಗಿ ಇಂಧನ ಪೂರೈಕೆದಾರರಿಂದ ಇಂಧನ ಖರೀದಿಗೆ ಮುಂದಾಗಿದ್ದು, ಸದ್ಯಕ್ಕೆ ವಿಮಾನ ಹಾರಾಟ ಅಬಾಧಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂತನ ಸಂವಿಧಾನ ಜಾರಿ ವಿರೋಧಿಸಿ ಮಾದೇಸಿ ಸಮುದಾಯದ ಪ್ರತಿಭಟನೆಯ ಹಿನ್ನೆಲೆಯಲ್ಲಿ ನೇಪಾಳಕ್ಕೆ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ವಿಮಾನಯಾನ ಸಂಸ್ಥೆಗಳು ಇಂಧನ ಕೊರತೆ ಎದುರಿಸುತ್ತಿವೆ.
ನೇಪಾಳಕ್ಕೆ ಭಾರತದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇಂಧನ ಪೂರೈಕೆ ಮಾಡುತ್ತಿತ್ತಾದರೂ, ಪ್ರತಿಭಟನೆಯ ಹಿನ್ನಲೆಯಲ್ಲಿ ಪೂರೈಕೆ ಸ್ಥಗಿತಗೊಂಡಿತ್ತು. ಹೀಗಾಗಿ ನೇಪಾಳದಲ್ಲಿ ತೀವ್ರ ಇಂಧನ ಕೊರತೆ ಎದುರಾಗಿತ್ತು. ಸದ್ಯದ ಮಟ್ಟಿಗೆ ವಿಮಾನ ಹಾರಾಟ ಸ್ಥಗಿತಗೊಳಿಸಲು ನೇಪಾಳ ವಿಮಾನಯಾನ ಸಂಸ್ಥೆ ನಿರ್ಧರಿಸಿತ್ತು. ಇದೀಗ ನೇಪಾಳ ಸರ್ಕಾರ ಬಾಂಗ್ಲಾದೇಶದಿಂದ ಇಂಧನ ಖರೀದಿಗೆ ಮುಂದಾಗಿದ್ದು, ಬಾಂಗ್ಲಾದೇಶದ ಖಾಸಗಿ ಇಂಧನ ಪೂರೈಕೆದಾರರೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನೇಪಾಳದಲ್ಲಿ ವಿಮಾನ ಹಾರಾಟ ಸರಾಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಸಂವಿಧಾನ ಜಾರಿ ವಿರೋಧಿಸಿ ಮಾದೇಶಿ ಸಮುದಾಯ ಪ್ರತಿಭಟನೆ ಚುರುಕುಗೊಳಿಸಿದ್ದು, ಭಾರತದ ಗಡಿ ಭಾಗದಲ್ಲಿ ಅಗತ್ಯ ವಸ್ತುಗಳ ಸರಕು ಸಾಗಣೆಯನ್ನು ತಡೆದು, ಪ್ರತಿಭಟಿಸುತ್ತಿದೆ.
Advertisement