ನವದೆಹಲಿ: ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿದ್ದ ಏಳು ಭಾರತೀಯರ ಪೈಕಿ ಆರು ಮಂದಿಯ ಶವಗಳು ಪತ್ತೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಯೆಮೆನ್ ಕಳ್ಳ ತೈಲ ಸಾಗಾಟಗಾರರನ್ನು ಗುರಿ ಇರಿಸಿ ಕಳೆದ ವಾರ ಸೌದಿ ಅರೇಬಿಯ ವಾಯು ದಾಳಿ ನಡೆಸಿದ್ದ ವೇಳೆ ಇಪ್ಪತ್ತು ಭಾರತೀಯರು ಮೃತಪಟ್ಟಿದ್ದರೆಂದು ಮೊದಲು ವರದಿಯಾಗಿತ್ತು. ಆದರೆ ಅನಂತರದ ವರದಿಗಳ ಪ್ರಕಾರ 20 ಮಂದಿ ಭಾರತೀಯರಲ್ಲಿ 13 ಮಂದಿ ಸುರಕ್ಷಿತರಾಗಿದ್ದು ಉಳಿದ 7 ಮಂದಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿತ್ತು.
ಆದರೆ ಈಗ ಬಂದಿರುವ ವರದಿಗಳ ಪ್ರಕಾರ, ನಾಪತ್ತೆಯಾಗಿದ್ದ 7 ಮಂದಿ ಭಾರತೀಯರ ಪೈಕಿ 6 ಮಂದಿಯ ಶವಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಯೆಮೆನ್ನ ಅಲ್ ಹುದೈದಾ ಬಂದರಿನ ಬಳಿ ವಾಯು ದಾಳಿ ನಡೆದಿತ್ತು. ಎರಡು ದೋಣಿಗಳು ಧ್ವಂಸ ಗೊಂಡಿದ್ದವು. 12 ಶಿಯಾ ಬಂಡುಕೋರರು ಮೃತಪಟ್ಟಿದ್ದರು.
ನಿನ್ನೆ ರಾತ್ರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಲಭ್ಯವಾಗಿದ್ದು, 6 ಮೃತದೇಹಗಳನ್ನು ಮಿಲಿಟರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈಗಾಗಲೇ ಮೃತಪಟ್ಟವರ ಕುಟುಬಂಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಅಂತರ್ಯುದ್ಧ ಪೀಡಿತ ಯೆಮೆನ್ನಲ್ಲಿ ಹುತಿ ಬಂಡು ಕೋರರು ಮತ್ತು ಸೌದಿಯಲ್ಲಿ ಆಶ್ರಯ ಪಡೆದಿರುವ ಯೆಮೆನ್ ಅಧ್ಯಕ್ಷ ಅಬೆದ್ರಬ್ಬೊ ಹದಿ ಅವರ ನಿಷ್ಠ ಪಡೆಗಳ ನಡುವೆ ಕಳೆದೊಂದು ವರ್ಷದಿಂದ ಕಾಳಗ ನಡೆದಿದೆ. ಈ ಹಿನ್ನೆಲೆಯಲ್ಲಿ ಸುಮಾರು 5 ಸಾವಿರ ಭಾರತೀಯರನ್ನು ಭಾರತ ಸರ್ಕಾರ ತೆರವುಗೊಳಿಸಿತ್ತು. ಆದರೂ ಭಾರತ ಸರ್ಕಾರದ ಮನವಿ ಆಲಿಸದೇ ಕೆಲ ಭಾರತೀಯರು ಯೆಮೆನ್ನಲ್ಲೇ ಉಳಿದುಕೊಂಡಿದ್ದಾರೆ.
Advertisement