ಕಠ್ಮಂಡು: ವ್ಯಾಪಕ ಹಿಂಸಾಚಾರದ ನಡುವೆಯೇ ನೆರೆಯ ನೇಪಾಳದಲ್ಲಿ ನೂತನ ಸಂವಿಧಾನವನ್ನು ಭಾನುವಾರ ಜಾರಿಗೊಳಿಸಲಾಗಿದೆ.
ರಾಜಧಾನಿ ಕಠ್ಮಂಡುವಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ನೇಪಾಳ ರಾಷ್ಟ್ರಪತಿ ರಾಮ್ ಭರಣ್ ಯಾದವ್ ನೂತನ ಸಂವಿಧಾನವನ್ನು ಅಧಿಕೃತವಾಗಿ ಜಾರಿ ಮಾಡಿದರು. ಒಟ್ಟು 7 ರಾಜ್ಯಗಳನ್ನು ಹೊಂದಿರುವ ಪುಟ್ಟ ರಾಷ್ಟ್ರ ನೇಪಾಳ ನೂತನ ಸಂವಿಧಾನ ಜಾರಿ ಮೂಲಕ ಜಾತ್ಯಾತೀತ ಮತ್ತು ಸಂಯುಕ್ತ ಗಣರಾಜ್ಯ ರಾಷ್ಟ್ರವಾಗಿ ಮಾರ್ಪಟ್ಟಿದೆ. ಅತ್ತ ಕಠ್ಮಂಡುವಿನಲ್ಲಿ ನೂತನ ಸಂವಿಧಾನ ಜಾರಿ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ಕಳೆದ ಒಂದು ವಾರದಿಂದ ನಡೆಯುತ್ತಿರುವ ಹಿಂಸಾಚಾರ ತಾರಕ್ಕೇರಿದೆ. ಇಂದೂ ಕೂಡ ನೇಪಾಳ ಭದ್ರತಾ ಪಡೆಗಳ ಗುಂಡಿಗೆ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ತೆರಾಯ್ ನಲ್ಲಿ ಮುಂದುವರೆದ ಪ್ರತಿಭಟನೆ
ಇನ್ನು ನೂತನ ಸಂವಿಧಾನ ಜಾರಿಯನ್ನು ವಿರೋಧಿಸಿ ನೇಪಾಳದ ತೆರಾಯ್ ವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈ ವರೆಗೂ ಸುಮಾರು 45 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಎನ್ ಕೌಂಟರ್ ನಲ್ಲಿಯೇ ಸುಮಾರು 42 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಪ್ರತಿಭಟನಾ ನಿರತ ತೆರಾಯ್ ವಲಯ ಮತ್ತು ರಾಜಧಾನಿ ಕಠ್ಮಂಡುವಿನ ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಇನ್ನು ಬರ್ಗುಂಜ್ ನಗರದಲ್ಲಿಯೂ ಪ್ರತಿಭಟನೆ ಮುಂದುವರೆದಿದ್ದು, ಭದ್ರತಾ ಪಡೆಗಳು ಸಿಡಿಸಿದ ಗುಂಡಿಗೆ ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದಾನೆ.
ಪ್ರತಿಭಟನೆಗೆ ಬೆಂಬಲ ನೀಡಿರುವ ಮಾದೇಸಿ ಪಕ್ಷಗಳ ಮುಖಂಡರು, ತಾವು ಮುಂದಿಟ್ಟ ಬೇಡಿಕೆಗಳನ್ನು ಸಂವಿಧಾನದಲ್ಲಿ ಅಳವಡಿಸಿಲ್ಲ ಎಂದು ಆರೋಪಿಸಿದ್ದಾರೆ.
"ಹೊಸ ಸಂವಿಧಾನದಲ್ಲಿ ‘ಜಾತ್ಯತೀತ’ ಪದವನ್ನು ಕಿತ್ತುಹಾಕಿ ಈ ಹಿಂದಿನಂತೆ ‘ಹಿಂದೂ ರಾಷ್ಟ್ರ’ ಎಂಬ ಸ್ಥಾನಮಾನ ಉಳಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಹಿಂದೂ ಸಂಘಟನೆಗಳು ನೇಪಾಳ ಸರ್ಕಾರದ ಮುಂದಿಟ್ಟಿದ್ದವು. ಆದರೆ ಸಂಸದರು ಇದನ್ನು ತಿರಸ್ಕರಿಸಿದ್ದರು. ಇದರಿಂದ ಹೊಸ ಸಂವಿಧಾನ ಜಾರಿಗೆ ಹಲವರ ವಿರೋಧ ವ್ಯಕ್ತವಾಗಿದೆ. ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎನಿಸಿಕೊಂಡಿದ್ದ ನೇಪಾಳ 2008ರ ಮೇ ತಿಂಗಳಿನಲ್ಲಿ ಜಾತ್ಯತೀತ ಪದವನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡಿತ್ತು.
Advertisement