ಢಾಕಾ: ಬಾಂಗ್ಲಾದೇಶದಲ್ಲಿನ ಹಿಂದೂ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 62 ವರ್ಷದ ವೃದ್ಧನನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇತ್ತೀಚೆಗೆ ಹಿಂದೂ ಪೂಜಾರಿಯನ್ನು ಕೊಲೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಾಂಗ್ಲಾದ ಶ್ರೀ ಠಾಕೂರ್ ಅನುಕೂಲ್ಚಂದ್ರ ಆಶ್ರಮದ ನಿತ್ಯರಂಜನ್ ಪಾಂಡೆ ಎಂಬ ಕೆಲಸಗಾರನನ್ನು ಶುಕ್ರವಾರ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆ.
ನಿತ್ಯರಂಜನ್ ಪಾಂಡೆ ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದಾಗ ಕೆಲವು ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ನಂತರ ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಇವರು ಶ್ರೀ ಠಾಕೂರ್ ಅನುಕೂಲ್ಚಂದ್ರ ಆಶ್ರಮದಲ್ಲಿ 40 ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಇತ್ತೀಚೆಗೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜತೆಗೆ ಕೆಲವನ್ನು ಕೊಲೆ ಸಹ ಮಾಡಲಾಗಿದೆ. ಇತ್ತೀಚೆಗೆ ನಡೆದ ಹತ್ಯೆಗಳ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಬಾಂಗ್ಲಾದೇಶದಲ್ಲಿ ಶೇ. 90ರಷ್ಟು ಮುಸ್ಲಿಂ ಧರ್ಮದವರಿದ್ದು, ಶೇ. 8 ರಷ್ಟು ಮಾತ್ರ ಹಿಂದು ಧರ್ಮದವರು ವಾಸಿಸುತ್ತಿದ್ದಾರೆ.
Advertisement