ಸನಾ(ಯೆಮನ್): ಕಲಹಕ್ಕೀಡಾಗಿರುವ ಯೆಮೆನ್ ನಲ್ಲಿ ಮದರ್ ತೆರೆಸಾ ಮಿಷನರೀಸ್ ಆಫ್ ಚಾರಿಟಿ ನಡೆಸುತ್ತಿರುವ ವೃದ್ಧಾಶ್ರಮದ ಮೇಲೆ ಬಂದೂಕುಧಾರಿ ಉಗ್ರರು ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ ದಾದಿ ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ರಾತ್ರಿ ಸ್ಪಷ್ಟಪಡಿಸಿದೆ.
ಸಾವಿಗೀಡಾದ ನಾಲ್ವರು ದಾದಿಯರಲ್ಲಿ ಒಬ್ಬರು ಮಾತ್ರ ಭಾರತೀಯ ಮೂಲದವರು ಅವರೇ ಸೆಸಿಲಿಯಾ ಮಿನ್ಝ್ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ದಾಳಿಯಲ್ಲಿ ನಾಲ್ಕು ಮಂದಿ ಭಾರತೀಯ ಮೂಲದ ದಾದಿಯರು ಸಾವನ್ನಪ್ಪಿದ್ದು, ಯೆಮೆನ್ ನ ಅಪಘಾತ ವಲಯದಲ್ಲಿ ವಾಸಿಸುತ್ತಿರುವ ಭಾರತೀಯರು ಸ್ವದೇಶಕ್ಕೆ ಮರಳುವಂತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು. ಯೆಮೆನ್ ನಲ್ಲಿರುವ ನರ್ಸ್ ಗಳು ಭಾರತ ಸರ್ಕಾರದ ಸಲಹೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಸಹ ಹೇಳಿದ್ದರು.
ಯೆಮೆನ್ ನ ಬಂದರು ನಗರಿ ಅಡೆನ್ ನಲ್ಲಿರುವ ವೃದ್ಧಾಶ್ರಮವೊಂದಕ್ಕೆ ಇಬ್ಬರು ಬಂದೂಕುಧಾರಿಗಳು ಸುತ್ತುವರಿದು ಮತ್ತೆ ನಾಲ್ವರು ಕಟ್ಟಡದೊಳಗೆ ಪ್ರವೇಶಿಸಿದ್ದರು. ನಂತರ ಕೋಣೆಯಿಂದ ಕೋಣೆಗೆ ತೆರಳಿ ಕೆಲವರ ಮೂಗಿಗೆ ಕರ್ಚೀಫ್ ನ್ನು ಮುಚ್ಚಿ ನಂತರ ಅವರ ತಲೆಗೆ ಬಂದೂಕಿನಿಂದ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.
ಬಂದೂಕುಧಾರಿಗಳು ಪ್ರವೇಶಪಾಲಕನನ್ನು ಗುಂಡಿಕ್ಕಿ ಕೊಂದು ನಂತರ ಒಳ ಪ್ರವೇಶಿಸಿದ್ದಾರೆ. ತಮ್ಮ ಕೃತ್ಯ ನಡೆಸಿ ಅಲ್ಲಿಂದ ಕೂಡಲೇ ಪರಾರಿಯಾಗಿದ್ದಾರೆ. ಬದುಕುಳಿದ ಓರ್ವ ನರ್ಸ್ ಫ್ರಿಜ್ ಒಳಗೆ ಅವಿತುಕೊಂಡರು. ದಾದಿಯರೆಲ್ಲ ಮದರ್ ತೆರೆಸಾ ಮಿಷನರೀಸ್ ಚಾರಿಟಿಗೆ ಸೇರಿದವರಾಗಿದ್ದಾರೆ. ಈ ಹಿಂದೆ 1998ರಲ್ಲಿ ಸಹ ಯೆಮೆನ್ ನಲ್ಲಿ ಮಿಷನರೀಸ್ ಆಫ್ ಚಾರಿಟಿ ದಾಳಿಗೆ ಒಳಗಾಗಿತ್ತು. ಐಸಿಸ್ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
Advertisement