ಇಸ್ಲಾಮಾಬಾದ್: ವಿಶ್ವಸಂಸ್ಥೆಯ 71 ನೇ ಮಹಾಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್ ಗೆ ತೆರಳಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭಾರತದೊಂದಿಗೆ ಕಾಶ್ಮೀರ ವಿವಾದದ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಬಯಸುತ್ತಿದ್ದಾರೆ ಎಂಬ ವರದಿಗಳು ಪ್ರಕಟವಾಗಿವೆ.
ವಿಶ್ವಸಂಸ್ಥೆ ಎದುರು ಭಾರತ-ಪಾಕಿಸ್ತಾನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನವಾಜ್ ಷರೀಫ್ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅವರೊಂದಿಗೂ ನವಾಜ್ ಷರೀಫ್ ದೂರವಾಣಿ ಮೂಲಕ ಚರ್ಚಿಸಿದ್ದಾರಂತೆ.
ಸೇನಾ ಮುಖ್ಯಸ್ಥರೊಂದಿಗಿನ ಮಾತುಕತೆ ವೇಳೆ, ಕಾಶ್ಮೀರದಲ್ಲಿ ನಡೆದ ದಾಳಿಯ ಪರಿಣಾಮವಾಗಿ ಉಭಯ ದೇಶಗಳ ನಡುವೆ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯ ಬಗ್ಗೆಯೂ ನವಾಜ್ ಷರೀಫ್ ಚರ್ಚಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಚರ್ಚೆಯಲ್ಲಿ ಭಾರತ- ಪಾಕ್ ನಡುವೆ ಉಂಟಾಗಿರುವ ಬಿರುಕನ್ನು ಸರಿಪಡಿಸಿಕೊಂಡು ಕಾಶ್ಮೀರ ವಿವಾದದ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದನ್ನು ಪರಿಗಣಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
Advertisement