ಮೈದುಗುರಿ: ಬೋಕೋ ಹರಾಮ್ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ನೈಜಿರಿಯಾ ಸೇನೆ ದೊಡ್ಡ ಪ್ರಮಾದ ಮಾಡಿಕೊಂಡಿದ್ದು, ಉಗ್ರರ ಕ್ಯಾಂಪ್ ಎಂದು ತಿಳಿದು ತನ್ನದೇ ಪ್ರಜೆಗಳಿರುವ ನಿರಾಶ್ರಿತ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದೆ.
ನೈಜಿರಿಯಾದ ಮೈದುಗುರಿ ಪಟ್ಟಣದ ಗಡಿಭಾಗದಲ್ಲಿರುವ ನಿರಾಶ್ರಿತ ಶಿಬಿರಗಳ ಮೇಲೆ ನೈಜಿರಿಯಾ ಸೇನೆ ಜೆಟ್ ವಿಮಾನದ ಮೂಲಕ ಬಾಂಬ್ ದಾಳಿ ನಡೆಸಿತ್ತು. ಈ ವೇಳೆ ಸುಮಾರು 100ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ದುರಂತವೆಂದರೆ ನಿರಾಶ್ರಿತ ಶಿಬಿರದಲ್ಲಿದ್ದ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರೂ ಕೂಡ ಬಾಂಬ್ ದಾಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದುರಂತದ ಬಳಿಕ ನೈಜಿರಿಯಾ ಸೇನೆಗೆ ತನ್ನ ಪ್ರಮಾದದ ಅರಿವಾಗಿದ್ದು, ಈ ಬಗ್ಗೆ ನೈಜಿರಿಯಾ ಸೇನೆಯ ಮುಖ್ಯಸ್ಥ ಮೇಜರ್ ಜನರಲ್ ಲಕ್ಕಿ ಇರಬೋರ್ ವಿಷಾಧ ವ್ಯಕ್ತಪಡಿಸಿದ್ದಾರೆ. ಪ್ರಮಾದ್ ವಶಾತ್ ನಿರಾಶ್ರಿತ ಶಿಬಿರವನ್ನು ಉಗ್ರರ ಶಿಬಿರವೆಂದು ತಿಳಿದು ಬಾಂಬ್ ದಾಳಿ ಮಾಡಲಾಗಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ಅಧಿಕಾರಿಗಳನ್ನು ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಿರಾಶ್ರಿತ ಶಿಬಿರದಲ್ಲಿರುವ ಪ್ರಜೆಗಳನ್ನು ಬೇರೊಂದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ನೈಜೀರಿಯಾದ ಜನರ ಸಂಪರ್ಕವೇ ಇಲ್ಲದಂತೆ ದೂರ ಎಲ್ಲೋ ಬದುಕುತ್ತಿದ್ದ ಈ ಜನರನ್ನು ಹೆಲಿಕಾಪ್ಟರ್ ನ ಸಹಾಯದಿಂದ ರಕ್ಷಿಸಿ ಇಲ್ಲಿ ಆಶ್ರಯ ನೀಡಲಾಗಿತ್ತು. ಇದನ್ನು ಅರಿಯದ ನೈಜಿರಿಯಾ ಸೇನೆ ಇವರನ್ನು ಉಗ್ರರು ಎಂದು ಭಾವಿಸಿ ಇವರ ಮೇಲೆ ವಾಯುದಾಳಿ ಮಾಡಿದೆ. ನೈಜೀರಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಲ್ಲಿನ ವಾಯುಪಡೆ ಇಂತಹದ್ದೊಂದು ದೊಡ್ಡ ಪ್ರಮಾದವನ್ನೆಸಗಿದೆ.
Advertisement