ಇಸ್ಲಾಮಾಬಾದ್: ಭಾರತದ ಕುಲಭೂಷಣ್ ಜಾದವ್ ರನ್ನು "ಗೂಢಚಾರಿ" ಎಂದು ಬಿಂಬಿಸುತ್ತಿರುವ ಪಾಕಿಸ್ತಾನ ಆತ ವಿಚಾರಣೆ ವೇಳೆ ದೇಶದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳ ಕುರಿತು ಮಾಹಿತಿ ನೀಡಿದ್ದಾನೆ ಎಂದು ಹೇಳಿದೆ.
ಈ ಬಗ್ಗೆ ಪ್ರಮುಖ ಸುದ್ದಿ ಸಂಸ್ಥೆ ಡಾನ್ ಗೆ ಸಂದರ್ಶನ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ನಫೀಸ್ ಝಕಾ, ಕುಲಭೂಷಣ್ ಜಾದವ್ ಭಾರತದ ಗೂಢಚಾರಿ ಎಂದು ಹೇಳಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಈ ಹಿಂದೆ ವಿಚಾರಣೆ ವೇಳೆ ಕುಲಭೂಷಣ್ ಜಾದವ್ ಪಾಕಿಸ್ತಾನದಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳ ಕುರಿತು ಮಾಹಿತಿ ನೀಡಿದ್ದ. ಇದರಿಂದಲೇ ಆತ ಓರ್ವ ಗೂಢಚಾರಿ ಎಂದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಣೆ ನೀಡಲು ಝಕಾ ನಿರಾಕರಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಇನ್ನು ಈಗಾಗಲೇ ಜಾದವ್ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದೆಯಾದರೂ, ಪಾಕಿಸ್ತಾನ ಮಾತ್ರ ಈ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ನ್ಯಾಯಾಲಯದ ಆದೇಶಕ್ಕೆ ತಾವು ಮಾನ್ಯತೆ ನೀಡುವುದಿಲ್ಲ ಎಂದು ವಾದಿಸಿದೆ. ಏತನ್ಮಧ್ಯೆ ಪಾಕಿಸ್ತಾನ ಸರ್ಕಾರದ ಅಟಾರ್ನಿ ಜನರಲ್ ಅಶ್ತಾರ್ ಔಸುಫ್ ಅವರು ತಮ್ಮ ಬಳಿ ಕುಲಭೂಷಣ್ ಜಾದವ್ ಓರ್ವ ಗೂಢಚಾರಿ ಎಂದು ಹೇಳಲು ಸಾಕಷ್ಟು ಸಾಕ್ಷ್ಯಾಧಾರಗಳು ಇವೆ. ಇವುಗಳನ್ನು ಮುಂದಿನ ವಿಚಾರಣೆಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Advertisement