ಖಲಿಸ್ತಾನಿ ಉಗ್ರನೊಂದಿಗೆ ಕೆನಡಾ ಪ್ರಧಾನಿ, ಘಟನೆ ಹಿಂದೆ ಭಾರತದ ಕೈವಾಡ ಆರೋಪಕ್ಕೆ ಟ್ರುಡೋ ಸಮ್ಮತಿ!

ಖಲಿಸ್ತಾನಿ ಭಯೋತ್ಪಾದಕನೊಬ್ಬ ಅವರ ಜೊತೆ ಕಾಣಿಸಿಕೊಂಡಿರುವ ಘಟನೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾದ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಯ ಹೇಳಿಕೆಗೆ ಟ್ರುಡೋ ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಒಟ್ಟಾವಾ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಭಾರತ ಪ್ರವಾಸದ ವೇಳೆ, ಖಲಿಸ್ತಾನಿ ಭಯೋತ್ಪಾದಕನೊಬ್ಬ ಅವರ ಜೊತೆ ಕಾಣಿಸಿಕೊಂಡಿರುವ ಘಟನೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾದ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಯ ಹೇಳಿಕೆಗೆ ಟ್ರುಡೋ ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಕೆನಡಾದ ಮಣ್ಣಿನಲ್ಲಿ ಸಿಖ್ ಪ್ರತ್ಯೇಕತಾವಾದಿ ಚಟುವಟಿಕೆಗಳು ನಡೆಯುತ್ತಿರುವ ವಿಷಯದಲ್ಲಿ, ಕೆನಡಾ ಪ್ರಧಾನಿಯನ್ನು ಮುಜುಗರಕ್ಕೆ ಗುರಿಪಡಿಸಲು ಭಾರತದ ‘ಕಪಟ’ ಶಕ್ತಿಗಳು ಈ ಘಟನೆಯನ್ನು ಏರ್ಪಡಿಸಿವೆ ಎಂದು ಕೆನಡಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಡೇನಿಯಲ್ ಜೀನ್ ಆರೋಪಿಸಿದ್ದರು. ಈ ಬಗ್ಗೆ ಕೆನಡಾದ ರಾಜಕೀಯ ಪಕ್ಷಗಳು ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಸ್ತಾಪಿಸಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳುತ್ತಿರುವ ‘ಪಿತೂರಿ ಸಿದ್ಧಾಂತ’ವನ್ನು ಟ್ರುಡೋ ಒಪ್ಪುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದವು.
ಇದಕ್ಕೆ ಉತ್ತರಿಸಿರುವ ಪ್ರಧಾನಿ ಜಸ್ಟಿನ್ ಟ್ರುಡೋ, ಹೌದು..ಭದ್ರತಾ ಅಧಿಕಾರಿಗಳು ಸುಖಾಸುಮ್ಮನೆ ಏನನ್ನೂ ಹೇಳುವುದಿಲ್ಲ. ನಮ್ಮ ಉನ್ನತ ರಾಜತಾಂತ್ರಿಕರು ಮತ್ತು ಭದ್ರತಾ ಅಧಿಕಾರಿಗಳು ಕೆನಡಿಯನ್ನರಿಗೆ ಏನಾದರೂ ಹೇಳುತ್ತಾರೆಂದರೆ, ಅದು ಸರಿ ಎನ್ನುವುದು ಅವರಿಗೆ ಖಾತರಿಯಾಗಿದೆ ಎಂದು ನಾವು ಭಾವಿಸಬೇಕು’’ ಎಂದು ಹೇಳಿದರು.
ಕಳೆದ ತಿಂಗಳು ಭಾರತ ಪ್ರವಾಸ ಕೈಗೊಂಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಭಾರತದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸಿಖ್ ಭಯೋತ್ಪಾದಕ ಜಸ್ಪಾಲ್ ಅತ್ವಾಲ್ ಭೇಟಿಯಾಗಲು ಆಗಮಿಸಿದ್ದ. ಅಲ್ಲದೆ ಅವರ ಪತ್ನಿಯೊಂದಿಗೆ ಫೋಟೋಗೂ ಪೋಸ್ ನೀಡಿದ್ದ. ಭಾರತದಲ್ಲಿರುವ ಕೆನಡದ ರಾಯಭಾರಿ ಹೊಸದಿಲ್ಲಿಯಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ಅತ್ವಾಲ್‌ನನ್ನು ಆಹ್ವಾನಿಸಲಾಗಿತ್ತು ಎಂಬುದು ಬಹಿರಂಗಗೊಂಡ ಬಳಿಕ ಟ್ರುಡೋ ಮುಜುಗರಕ್ಕೆ ಒಳಗಾಗಿದ್ದರು.
ಈ ಘಟನೆ ಬಳಿಕ ದೆಹಲಿಯಲ್ಲಿ ಕೆನಡಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಯೊಬ್ಬರು, ‘‘ಜಸ್ಪಾಲ್ ಅತ್ವಾಲ್" ಇರುವುದು ಭಾರತದಲ್ಲಿ ಹಾಗೂ ಭಾರತ ಸರ್ಕಾರವು ಆತನನ್ನು ‘ಕಪ್ಪು ಪಟ್ಟಿ’ಯಿಂದ ತೆಗೆದಿರುವುದು ಆಕಸ್ಮಿಕವಲ್ಲ ಎಂದು ಹೇಳುವ ಮೂಲಕ  ಆತನ ಆಗಮನವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com