ಭಾರತೀಯ ಸೇನೆ ಇಬ್ಬರು ಬಂಧಿತ ರೈತರನ್ನು ಉಗ್ರರು ಎಂದು ತಪ್ಪಾಗಿ ಬಿಂಬಿಸುತ್ತಿದೆ: ಪಾಕ್ ಸೇನೆ
ಇಸ್ಲಾಮಾಬಾದ್: ಭಾರತೀಯ ಸೇನೆ ಬಂಧಿತ ಇಬ್ಬರು ಪಾಕಿಸ್ತಾನದ ರೈತರನ್ನು ಉಗ್ರರು ಎಂದು ತಪ್ಪಾಗಿ ಬಿಂಬಿಸುತ್ತಿದೆ ಎಂದು ಪಾಕಿಸ್ತಾನ ಸೇನೆ ಶನಿವಾರ ಹೇಳಿದೆ.
ಪಾಕಿಸ್ತಾನದ ಇಬ್ಬರು ರೈತರು ಅಜಾಗರೂಕತೆಯಿಂದ ಗಡಿ ನಿಯಂತ್ರಣ ರೇಖೆ ದಾಟಿದ್ದಾರೆ. ಅವರನ್ನು ಬಂಧಿಸಿರುವ ಭಾರತ, ಅವರು ನಿಷೇಧಿತ ಉಗ್ರ ಸಂಘಟನೆಯ ಸದಸ್ಯರು ಎಂದು ತಪ್ಪಾಗಿ ಬಿಂಬಿಸುತ್ತಿರುವುದಾಗಿ ಇಂದು ಪಾಕಿಸ್ತಾನ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಶ್ಮೀರದಲ್ಲಿ ಬಂಧನಕ್ಕೊಳಗಾಗಿರುವ 30 ವರ್ಷದ ಖಲಿಲ್ ಮತ್ತು 21 ವರ್ಷದ ನಜೀಮ್ ಇಬ್ಬರೂ ಪಾಕಿಸ್ತಾನ ಆಕ್ರಮಿತ ಪ್ರದೇಶ ರೈತರು ಎಂದು ಪಾಕ್ ಸ್ಪಷ್ಟಪಡಿಸಿದೆ. ಆದರೆ ಭಾರತೀಯ ಸೇನೆ ಈ ಇಬ್ಬರು ಎಲ್ ಇಟಿ ಉಗ್ರ ಸಂಘಟನೆಗೆ ಸೇರಿದ ಸದಸ್ಯರಾಗಿದ್ದು, ಪಾಕ್ ಸೇನೆಯ ಸಹಾಯದಿಂದ ಗಡಿ ನುಸುಳಿದ್ದಾರೆ ಎಂದು ಹೇಳಿದೆ.
ಈ ಇಬ್ಬರು ವಿಚಾರಣೆ ವೇಳೆ ತಾವು ಲಷ್ಕರ್ ಭಯೋತ್ಪಾದನೆಯ ಸದಸ್ಯರು ಎಂಬುದನ್ನು ಒಪ್ಪಿಕೊಂಡಿದ್ದಾರೆ. ತಾವು ಪಾಕ್ ನಿವಾಸಿಗಳು ಎಂದು ಅವರು ಖಚಿತಪಡಿಸಿರುವುದಾಗಿ ಹಾಗೂ ಪಾಕ್ ಸರ್ಕಾರ ಮತ್ತು ಸೇನೆಯ ಸಹಾಯದಿಂದ ತಾವು ಕಾಶ್ಮೀರಕ್ಕೆ ಬಂದಿರುವುದಾಗಿ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನು ಭಾರತೀಯ ಸೇನೆ ಇತ್ತೀಚಿಗೆ ಬಿಡುಗಡೆ ಮಾಡಿತ್ತು.