ಸಾರ್ಕ್ ಸಭೆಯಲ್ಲಿ 'ಹೈಡ್ರಾಮಾ': ಜೈಶಂಕರ್ ಹೇಳಿಕೆ ಮುನ್ನ ಮಧ್ಯೆ ಎದ್ದು ಹೋದ ಪಾಕ್ ವಿದೇಶಾಂಗ ಸಚಿವ ಖುರೇಷಿ!
ನ್ಯೂಯಾರ್ಕ್: ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ಮುನ್ನ ಇಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಇಲಾಖೆ ಸಚಿವರ ಸಭೆಯಲ್ಲಿ ಮಧ್ಯದಿಂದಲೇ ಪಾಕ್ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಎದ್ದುಹೋದ ಘಟನೆ ನಡೆದಿದೆ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಭಾರತದ ಕ್ರಮವನ್ನು ಖಂಡಿಸಿ ವಿದೇಶಾಂಗ ಸಚಿವರು ನೀಡುವ ಹೇಳಿಕೆಯನ್ನು ಕೇಳಲು ಇಷ್ಟವಿಲ್ಲದೆ ತಾವು ಮಧ್ಯದಲ್ಲಿಯೇ ಎದ್ದುಹೋಗಿರುವುದಾಗಿ ಖುರೇಷಿ ನಂತರ ತಿಳಿಸಿದ್ದಾರೆ.
ಸಾರ್ಕ್ ಸಭೆಯಲ್ಲಿ ನಿನ್ನೆ ಏನಾಯಿತು?: ಸೌತ್ ಏಷಿಯಾ ಅಸೋಸಿಯೇಷನ್ ಫಾರ್ ರೀಜನಲ್ ಕೊಆಪರೇಷನ್ (SAARC) ದೇಶಗಳ ಈಗಿನ ಮುಖ್ಯಸ್ಥ ನೇಪಾಳದ ವಿದೇಶಾಂಗ ಸಚಿವರ ಅಧ್ಯಕ್ಷತೆಯಲ್ಲಿ ಭಾರತ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶಗಳ ವಿದೇಶಾಂಗ ಸಚಿವರುಗಳ ಸಮ್ಮುಖದಲ್ಲಿ ಸಭೆ ನಡೆಯುತ್ತಿತ್ತು. ಸುಮಾರು 45 ನಿಮಿಷಗಳ ಕಾಲ ಸಭೆಯಲ್ಲಿ ಹಾಜರಿದ್ದ ಖುರೇಷಿ ನಂತರ ಎದ್ದುಹೋದರು. ನಂತರ ಸಭೆಯಲ್ಲಿ ಜೈಶಂಕರ್ ಅವರು ಹೇಳಿಕೆ ನೀಡಿ ಹೋದ ನಂತರವೇ ಖುರೇಷಿ ವಾಪಸ್ಸಾಗಿದ್ದು.
ಯಾಕೆ ತಡವಾಗಿ ಬಂದಿರಿ ಎಂದು ಕೇಳಿದಾಗ ಕಾಶ್ಮೀರ ಸಮಸ್ಯೆಗೆ ಭಾರತ ವಿರುದ್ಧ ಪ್ರತಿಭಟನೆ ಭಾಗವಾಗಿ ಭಾರತದ ವಿದೇಶಾಂಗ ಸಚಿವರು ಇದ್ದ ಕಾರಣ ಸಭೆಗೆ ಬರಲಿಲ್ಲ ಎಂದರು. ಕೊನೆಗೂ ಭಾರತ ಮತ್ತು ಪಾಕ್ ವಿದೇಶಾಂಗ ಸಚಿವರು ಮುಖಾಮುಖಿಯಾಗಲೇ ಇಲ್ಲ.
ಇತ್ತ ಸಭೆಯಲ್ಲಿ ಹೇಳಿಕೆ ನೀಡಿ ಜೈಶಂಕರ್ ತಮ್ಮ ಪಾಡಿಗೆ ಎದ್ದು ಹೋದರು. ಮುಂದಿನ ಸಾರ್ಕ್ ಸಭೆಯನ್ನು ಇಸ್ಲಾಮಾಬಾದಿನಲ್ಲಿ ನಡೆಸಲು ಉದ್ದೇಶಿಸಿದ್ದು ಸ್ಥಳ ಮತ್ತು ದಿನಾಂಕ ನಿಗದಿಯಾಗಿಲ್ಲ. ಭಾರತ ಈ ತೀರ್ಮಾನಕ್ಕೆ ಮೌನವಾಗಿದೆ ಎಂದು ಖುರೇಷಿ ಸಭೆಯ ನಂತರ ಹೊರಗೆ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಸಭೆಯ ಬಳಿಕ ಟ್ವೀಟ್ ಮಾಡಿದ ಸಚಿವ ಜೈಶಂಕರ್, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಬಗ್ಗೆ ಭಾರತದ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಫಲಪ್ರದಾಯಕ ಸಹಕಾರಕ್ಕೆ ಮಾತ್ರವಲ್ಲದೆ ದಕ್ಷಿಣ ಏಷ್ಯಾ ಪ್ರದೇಶದ ಉಳಿವಿಗಾಗಿ ಎಲ್ಲಾ ರೀತಿಯಿಂದಲೂ ಭಯೋತ್ಪಾದನೆಯನ್ನು ನಿಗ್ರಹಿಸುವುದು ಒಂದು ಪೂರ್ವಭಾವಿ ಷರತ್ತು ಆಗಿದೆ. ಅದನ್ನು ಎಲ್ಲಾ ಸಾರ್ಕ್ ದೇಶಗಳು ಅನುಸರಿಸಲೇ ಬೇಕು ಎಂದರು.
ನಮಗೆ ಅವಕಾಶಗಳು ತಪ್ಪಿದ್ದಲ್ಲ, ಉದ್ದೇಶಪೂರ್ವಕವಾಗಿ ಅಡೆತಡೆಗಳನ್ನು ಮಾಡಲಾಗುತ್ತಿದೆ. ಭಯೋತ್ಪಾದನೆ ಅವುಗಳಲ್ಲಿ ಒಂದು. ನಮ್ಮ ದೃಷ್ಟಿಕೋನದಲ್ಲಿ ಫಲಪ್ರದಾಯಕ ಸಹಕಾರಕ್ಕೆ ಮಾತ್ರವಲ್ಲದೆ ದಕ್ಷಿಣ ಏಷ್ಯಾ ಪ್ರದೇಶದ ಉಳಿವಿಗಾಗಿ ಎಲ್ಲಾ ರೀತಿಯಿಂದಲೂ ಭಯೋತ್ಪಾದನೆಯನ್ನು ನಿಗ್ರಹಿಸುವುದು ಒಂದು ಪೂರ್ವಭಾವಿ ಷರತ್ತು ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ