ಥಿಂಫು(ಭೂತಾನ್): ಭೂತಾನ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನ್ ನ ಭವಿಷ್ಯದ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯಗಳಿವೆ ಎಂದಿದ್ದಾರೆ. ಅಂತರಿಕ್ಷ ಮತ್ತು ಡಿಜಿಟಲ್ ಪೇಮೆಂಟ್ ನಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಸಾಕಷ್ಟು ಸಹಕಾರಕ್ಕೆ ಇದೇ ಸಂದರ್ಭದಲ್ಲಿ ಅವರು ಪ್ರಸ್ತಾವನೆ ಮುಂದಿಟ್ಟರು.
ಭೂತಾನ್ ನ ರಾಯಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಕಷ್ಟು ಶ್ರಮ ಹಾಕಿ ಶ್ರದ್ಧೆಯಿಂದ ಕೆಲಸ ಮಾಡಿ ಹಿಮಾಲಯ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಒಯ್ಯುವಂತೆ ಕರೆ ನೀಡಿದರು.
ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳು ಇಂದು ವಿಶ್ವದಲ್ಲಿ ತೆರೆದುಕೊಂಡಿದೆ. ನಿಮ್ಮಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಸಾಕಷ್ಟಿದೆ. ಅದು ಭವಿಷ್ಯದ ತಲೆಮಾರಿನ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಮನಸ್ಸಿಗೆ ಹತ್ತಿರವಾದುದನ್ನು ಪೂರ್ಣ ಆಸಕ್ತಿಯಿಂದ, ಇಚ್ಛೆಯಿಂದ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಮುಂದೆ ನಿಮಗೆ ಸಾಕಷ್ಟು ಸವಾಲುಗಳು ಬರುತ್ತವೆ, ಪ್ರತಿ ಸವಾಲುಗಳಿಂದ ಹೊರಬರಲು ನಮ್ಮಲ್ಲಿ ಕ್ರಿಯಾಶೀಲ ಪರಿಹಾರಗಳನ್ನು ಕಂಡುಕೊಳ್ಳಲು ಯುವ ಸಮುದಾಯಗಳಿವೆ. ಯಾವುದೇ ಇತಿಮಿತಿಗಳು ನಿಮ್ಮನ್ನು ತಡೆಯದಿರಲಿ, ಈಗಿರುವ ಸಮಯಕ್ಕಿಂತ ಉತ್ತಮ ಸಮಯ ಮತ್ತು ಅವಕಾಶ ಯುವ ಸಮುದಾಯಕ್ಕೆ ಬೇರೆ ಇಲ್ಲ ಎಂದು ನಾನು ಹೇಳಲು ಬಯಸುತ್ತೇನೆ ಎಂದರು.
ಎರಡನೇ ಬಾರಿಗೆ ಪ್ರಧಾನಿಯಾದ ನಂತರ ಭೂತಾನ್ ಗೆ ಮೋದಿಯವರು ಭೇಟಿ ಕೊಡುತ್ತಿರುವುದು ಇದು ಎರಡನೇ ಬಾರಿ.
ಮೋದಿ ಭಾರತದ ಬಗ್ಗೆ ಭೂತಾನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು ಹೀಗೆ: ಭೂತಾನ್ ನ ಯುವಸಮೂಹ ತಮ್ಮ ಪಯಣದಲ್ಲಿ ಮುಂದುವರಿಯುತ್ತಿರುವಾಗ ನಿಮ್ಮ 1.3 ಶತಕೋಟಿ ಭಾರತೀಯರು ನಿಮ್ಮ ಜೊತೆ ಕೇವಲ ಸಂತೋಷದಲ್ಲಿ ಮಾತ್ರ ಭಾಗಿಯಾಗುತ್ತಿಲ್ಲ, ಅವರು ನಿಮ್ಮ ಸಹಭಾಗಿಗಳಾಗಿ ನಿಮ್ಮ ಜೊತೆ ಹಂಚಿಕೊಂಡು ನಿಮ್ಮಿಂದ ಕೆಲವನ್ನು ಕಲಿಯುತ್ತಾರೆ.
ವಿಸ್ತಾರವಾದ ವಲಯಗಳಲ್ಲಿ ಭಾರತ ಐತಿಹಾಸಿಕ ಬದಲಾವಣೆಗಳನ್ನು ಕಾಣುತ್ತಿದೆ. ಶಾಲೆಗಳಿಂದ ಹಿಡಿದು ಅಂತರಿಕ್ಷ, ಡಿಜಿಟಲ್ ಪಾವತಿಯಿಂದ ಹಿಡಿದು ವಿಪತ್ತು ನಿರ್ವಹಣೆಯವರೆಗೆ ಸಾಕಷ್ಟು ಹೊಸ ಆಯಾಮಗಳಲ್ಲಿ ಸಹಕರಿಸಲು ಭಾರತ ಉತ್ಸುಕವಾಗಿದೆ.
ಸೌತ್ ಏಷಿಯಾ ಸ್ಯಾಟಲೈಟ್ ನ ಥಿಂಪು ಗ್ರೌಂಡ್ ಸ್ಟೇಷನ್ ನ್ನು ಉದ್ಘಾಟಿಸಿ ನಮ್ಮ ಅಂತರಿಕ್ಷ ಸಹಕಾರವನ್ನು ವಿಸ್ತರಿಸಿದ್ದೇವೆ. ಸ್ಯಾಟಲೈಟ್ ಮೂಲಕ ಟೆಲಿ ಮೆಡಿಸಿನ್, ದೂರ ಶಿಕ್ಷಣ, ಸಂಪನ್ಮೂಲ ಕ್ರೋಢೀಕರಣ, ಹವಾಮಾನ ವರದಿ, ನೈಸರ್ಗಿಕ ವಿಪತ್ತುಗಳಿಗೆ ಮುನ್ನೆಚ್ಚರಿಕೆಗಳು ಕುಗ್ರಾಮಗಳಿಗೆ ಸಹ ತಲುಪುತ್ತದೆ.
ಭೂತಾನ್ ನ ಸ್ವದೇಶಿ ಸ್ಯಾಟಲೈಟ್ ಉಡಾಯಿಸಲು ಅಲ್ಲಿನ ಯುವ ವಿಜ್ಞಾನಿಗಳು ಭಾರತಕ್ಕೆ ಬರುತ್ತಿರುವುದು ಹರ್ಷದ ವಿಷಯ.
ಭಾರತ ಮತ್ತು ಭೂತಾನ್ ಹಲವು ದಶಕಗಳಿಂದ ಸಹಕಾರ, ಸಹವಾಸವನ್ನು ಹೊಂದಿವೆ. ಭೌಗೋಳಿಕವಾಗಿ ಮಾತ್ರವಲ್ಲದೆ ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಧಾರ್ಮಿಕ ಸಂಪ್ರದಾಯಗಳು ಎರಡೂ ದೇಶಗಳ ಜನರ ನಡುವೆ ವಿಶಿಷ್ಟ ಸಂಬಂಧ ಬೆಳೆಸಲು ಸಹಕರಿಸಿದೆ.
ನಾನು ಬರೆದ ಎಕ್ಸಾಮ್ ವಾರಿಯರ್ ಪುಸ್ತಕದಲ್ಲಿ ಬರವಣಿಗೆಗೆ ಬೌದ್ಧರ ಬೋಧನೆಗಳಿಂದ ಪ್ರೇರಣೆ ಪಡೆದಿದ್ದೇನೆ. ಧನಾತ್ಮಕವಾಗಿ ಯೋಚಿಸುವುದು, ಭಯ, ಆತಂಕಗಳಿಂದ ಹೊರಬರುವುದು, ಸ್ವಂತಿಕೆಯಿಂದ ಬದುಕುವುದು, ವರ್ತಮಾನದಲ್ಲಿ ಬದುಕುವುದು ಮತ್ತು ಪ್ರಕೃತಿ ಮಾತೆಯೊಂದಿಗೆ ಸಂಬಂಧ ಹೊಂದುವುದು ಇವೆಲ್ಲವೂ ಬುದ್ಧನ ಬೋಧನೆಗಳಲ್ಲಿವೆ.
20ನೇ ಶತಮಾನದಲ್ಲಿ ಭಾರತದಿಂದ ಭೂತಾನ್ ಗೆ ಹಲವರು ಶಿಕ್ಷಕರಾಗಿ ಬಂದಿದ್ದರು.
ತಮ್ಮ ಭಾಷಣದ ಬಳಿಕ ಪ್ರಧಾನಿ ಮೋದಿ ಮೂರನೇ ಡ್ರುಕ್ ಗಯಾಲ್ಪೋ ಅವರ ಗೌರವಾರ್ಥದ ರಾಷ್ಟ್ರೀಯ ಚೊರ್ಟನ್ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
Advertisement