ಭಾರತದ ಒತ್ತಡಕ್ಕೆ ಮಣಿದ ಪಾಕ್: ನಾಳೆ ಅಭಿನಂದನ್ ಬಿಡುಗಡೆ - ಇಮ್ರಾನ್ ಖಾನ್ ಘೋಷಣೆ

ಪಾಕಿಸ್ತಾನ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಹೇಳಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಹೇಳಿಕೆ ನೀಡಿದೆ.

ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಕೊನೆಗೂ ಪಾಕಿಸ್ತಾನ ಮಣಿದಿದ್ದು, ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಪ್ರಕಟಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗಡಾಯಿಸಿರುವ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಮೊಹಮ್ಮದ್ ಖುರೇಷಿ ಹೇಳಿದ ಕೆಲ ತಾಸುಗಳಲ್ಲೇ  ಇಮ್ರಾನ್ ಖಾನ್  ಈ ಹೇಳಿಕೆ ನೀಡಿದ್ದು, ಶಾಂತಿಯ ಸಂಕೇತವಾಗಿ ಅಭಿನಂದನ್ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.

ಶಾಂತಿಗಾಗಿ ನಾವು ಬಯಸುತ್ತೇವೆ. ನಾಳೆ ಭಾರತದ ವಾಯುಪಡೆ ಪೈಲಟ್ ಬಿಡುಗಡೆ ಮಾಡಿ ಮೊದಲ ಹಂತವಾಗಿ ಮಾತುಕತೆ ನಡೆಸುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಭಿನಂದನ್ ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಲಿದ್ದಾರೆ.
ನಿನ್ನೆ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಜೆಟ್ ಪತನಗೊಂಡು ವಿಂಗ್ ಕಮಾಂಡರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಕ್ಷಿತವಾಗಿ ಇಳಿದಿದ್ದರು.ನಂತರ ಅಲ್ಲಿನ ಜನತೆ ಅವರನ್ನು ಹಿಡಿದು ಥಳಿಸಿ ಪಾಕ್ ಸೇನೆ ವಶಕ್ಕೆ ನೀಡಿದ್ದರು.

ಅಭಿನಂದನ್  ಪಾಕಿಸ್ತಾನದ ವಶಕ್ಕೆ ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಭಾರತದಾದ್ಯಂತ ಪಾಕಿಸ್ತಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಭಿನಂದನ್ ಸುರಕ್ಷಿತವಾಗಿ ಬಿಡುಗಡೆಯಾಗಲಿ ಎಂದು ಜನತೆ ಪ್ರಾರ್ಥಿಸುತ್ತಿದ್ದರು.

ಅಭಿನಂದನ್ ವರ್ತಮಾನ್ ಭಾರತಕ್ಕೆ ಹಿಂತಿರುಗುವವರೆಗೂ ಪಾಕಿಸ್ತಾನದ ಜೊತೆಗೆ ಯಾವುದೇ ಮಾತುಕತೆ ಇಲ್ಲ ಎಂದು ಭಾರತ ದೃಢ ನಿಲುವು ತಾಳಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಿನ ಬಿಕ್ಕಟ್ಟು ಬಗೆಹರಿದು ಸದ್ಯದಲ್ಲೇ ಎರಡೂ ದೇಶಗಳೂ ಒಂದು ಸಿಹಿ ಸುದ್ದಿ ನಿಡಲಿವೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com