ನವದೆಹಲಿ: ಜಾಗತಿಕ ಮಟ್ಟದಲ್ಲಿ ಮುಖಭಂಗ ಎದುರಿಸಿ ಭಾರತದ ಮುಂದೆ ಮಂಡಿಯೂರುವಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ.
ಪುಲ್ವಾಮ ದಾಳಿ ಬಗ್ಗೆ ಸಾಕ್ಷ್ಯ ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದ ಪಾಕಿಸ್ತಾನ ಈಗ ವರಸೆ ಬದಲಿಸಿದ್ದು, ಪುಲ್ವಾಮ ದಾಳಿಗೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಕಾರಣವಲ್ಲ ಎಂದು ಹೇಳಲು ಪ್ರಾರಂಭಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಸಮರ್ಥಿಸಿಕೊಂಡಿದೆ. ಪುಲ್ವಾಮ ದಾಳಿಯ ಕೆಲವೇ ಕ್ಷಣಗಳಲ್ಲಿ ದಾಳಿಗೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿತ್ತು. ಆದರೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಮಾತ್ರ ಪುಲ್ವಾಮ ದಾಳಿಯಲ್ಲಿ ಜೈಶ್-ಉಗ್ರ ಸಂಘಟನೆಯ ಕೈವಾಡ ಇಲ್ಲ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪುಲ್ವಾಮ ದಾಳಿಗೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಎಲ್ಲಿಯೂ ಹೊಣೆ ಹೊತ್ತುಕೊಂಡಿಲ್ಲ ಎಂದು ಹೇಳಿರುವ ಖುರೇಷಿ, "ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಯಕರನ್ನು ಸಂಪರ್ಕಿಸಿದಾಗ ಅವರು ಇಲ್ಲ ಎಂದು ಹೇಳಿದ್ದರು, ಇದು ಗೊಂದಲಕ್ಕೆ ಕಾರಣವಾಗಿದೆ. ಪುಲ್ವಾಮ ದಾಳಿಗೆ ಹೊಣೆ ಹೊತ್ತಿರುವ ಬಗ್ಗೆ ಗೊಂದಲಗಳಿವೆ. ಪಾಕಿಸ್ತಾನ ಹೇಳುವುದನ್ನು ಭಾರತ ಕೇಳಿದಿದ್ದರೆ ಉಭಯ ರಾಷ್ಟ್ರಗಳ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಭಾರತ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿದರೆ ಮಾತ್ರ ನಾವು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಾವು ಸಹಕಾರ ನೀಡಲು ಸಿದ್ದರಿದ್ದೇವೆ, ಮಾತುಕತೆ ನಡೆಸೋಣ, ಇದೇ ನಮ್ಮ ಮುಂದಿರುವ ಅತ್ಯುತ್ತಮವಾದ ಆಯ್ಕೆ ಎಂದು ಖುರೇಷಿ ಹೇಳಿದ್ದಾರೆ.