ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರ ಮೇಲೆ ಹೀನ ಕೃತ್ಯಗಳು ಮುಂದುವರಿದಿವೆ. ಈ ಮಧ್ಯೆ ಹಿಂದೂ ದೇವಸ್ಥಾನಕ್ಕೆ ಕನ್ನ ಹಾಕಿರೋ ದರೋಡೆಕೋರರು ನಗದು, ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ. ಭಕ್ತರು ಕಾಣಿಕೆಯಾಗಿ ನೀಡಿದ್ದ 3 ಬೆಳ್ಳಿ ಸರ ಹಾಗೂ ನಗದು ದೋಚಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಹಿಂದೂಗಳ ಪಾಲಿನ ಅತೀ ದೊಡ್ಡ ಹಬ್ಬ ದೀಪಾವಳಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಸಿಂಧ ಪ್ರಾಂತ್ಯದ ಕೊಟ್ರಿ ನಗರದಲ್ಲಿ ಈ ಕಳ್ಳತನ ನಡೆದಿದೆ. ಖದೀಮರ ಕೃತ್ಯಕ್ಕೆ ಗುರಿಯಾಗಿದ್ದು 'ದೇವಿ ಮಾ' ದೇಗುಲ. ದೇವಿಯ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿದ ಖದೀಮರು, 10 ತೊಲ ಬೆಳ್ಳಿ ಸರ ಜೊತೆಗೆ ಕಾಣಿಕೆ ಹುಂಡಿಯಲ್ಲಿದ್ದ 25 ಸಾವಿರ ರೂಪಾಯಿ ನಗದು ಕದ್ದು ಕಾಲ್ಕಿತ್ತಿದ್ದಾರೆ.
ಪ್ರಕರಣದ ಕುರಿತು ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಭಗವಾನ್ ದಾಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಸಿಂಧ್ ಪ್ರಾಂತ್ಯದಲ್ಲಿ ಕೃಷ್ಣನ ದೇವಸ್ಥಾನದ ಮೇಲೆ ಬಹುಸಂಖ್ಯಾತರಾಗಿರುವ ಮುಸ್ಲಿಂರು ದಾಳಿ ನಡೆಸಿ, ದೇವರ ವಿಗ್ರಹಗಳನ್ನು ಭಗ್ನಗೊಳಿಸಿದ್ದರು. ಅಲ್ಲದೆ, ದೇವಸ್ಥಾನದ ಕಟ್ಟಡಕ್ಕೆ ಹಾಗೂ ಪೀಠೋಪಕರಣಗಳಿಗೆ ಅಪಾರ ಹಾನಿ ಮಾಡಿದ್ದರು.
Advertisement