ಲಂಡನ್: ಭಾರತಕ್ಕೆ ಬೇಕಾಗಿರುವ, ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಶುಕ್ರವಾರ ಬ್ರಿಟನ್ ಗೃಹ ಸಚಿವಾಲಯ ಅಂಕಿತ ಹಾಕಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಗಡಿಪಾರು ಆದೇಶಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಸಹಿ ಹಾಕಿದ್ದಾರೆ.
ಕಳೆದ ಫೆಬ್ರವರಿ 25 ರಂದು ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಉದ್ಯಮಿ ನೀರವ್ ಮೋದಿ ಗಡಿಪಾರಿಗೆ ಆದೇಶ ನೀಡಿತ್ತು.
ನೀರವ್ ಮೋದಿಯವರಿಗೆ ಭಾರತೀಯ ನ್ಯಾಯಾಲಯಗಳಲ್ಲಿ ಉತ್ತರಿಸಲು ಒಂದು ಪ್ರಕರಣವಿದೆ. ಆದರೆ ಭಾರತದಲ್ಲಿ ಅವರ ನ್ಯಾಯಯುತ ವಿಚಾರಣೆ ನಡೆಯುವುದಿಲ್ಲ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಬ್ರಿಟನ್ ಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ನೀರವ್ ಮೋದಿ ಮುಂಬೈನ ಆರ್ಥರ್ ಜೈಲಿನ 'ಬ್ಯಾರಕ್ 12'ನಲ್ಲಿರುವುದಕ್ಕೆ ಸಮರ್ಥರಾಗಿದ್ದಾರೆ, ಅವರು ಅಲ್ಲಿಯೇ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯಬಹುದು" ಎಂದು ಬ್ರಿಟನ್ ಕೋರ್ಟ್ ನ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಆದೇಶ ಪ್ರಕಟಿಸಿದ್ದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.
Advertisement