ವಾಷಿಂಗ್ಟನ್: ಭಾರತದಲ್ಲಿ ಭಯೋತ್ಪಾದನೆಗೆ ಪುಸಲಾಯಿಸುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕ ಛೀಮಾರಿ ಹಾಕಿದೆ. ಉಗ್ರರ ತವರೂರಾದ ಪಾಕಿಸ್ತಾನ ಭಯೋತ್ಪಾದನೆಯನ್ನು ತಡೆಯುವ ವಿಷಯದಲ್ಲಿ ವಿಫಲ ರಾಷ್ಟ್ರ ಎಂಬ ಸರ್ಟಿಫಿಕೇಟ್ ನೀಡಿದೆ.
ಪಾಕ್ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆ ಸಂಘಟನೆಗಳು ಇಂದಿಗೂ ನಿರಂತರವಾಗಿ ಭಾರತವನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಿವೆ. ಅಂತಹ ಸಂಘಟನೆಗಳ ಮೇಲೆ ಪಾಕ್ ಸರ್ಕಾರ ಲಗಾಮು ಹಾಕುವಲ್ಲಿ ವಿಫಲವಾಗಿದೆ ಎಂದು ಯುಎಸ್ ಸ್ಟೇಟ್ ಇಲಾಖೆಯ'' ಕಂಟ್ರಿ ರಿಪೋರ್ಟ್ಸ್ ಆನ್ ಟೆರರಿಸಂ-2020 ವರದಿಯಲ್ಲಿ ಉಲ್ಲೇಖಿಸಿದೆ.
2008ರ ಮುಂಬೈ ದಾಳಿ ಮತ್ತು 2019ರ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಗಳಾದ ಜೈಶ್ -ಎ- ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ ಮತ್ತು ಲಷ್ಕರ್ -ಎ- ತೊಯ್ಬಾದ ಸಾಜಿದ್ ಮಿರ್ ಅವರಂಥ ಕ್ರಿಮಿಗಳು ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಈ ಉಗ್ರರು ಸೇರಿದಂತೆ ಯಾವುದೇ ಭಯೋತ್ಪಾದಕರನ್ನು ಶಿಕ್ಷಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದಕರ ಬಗ್ಗೆ ಪಾಕ್ ನಿಲುವು: ಪಾಕಿಸ್ತಾನ ತಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಕೆಟ್ಟ ಭಯೋತ್ಪಾದನೆ ಅಂತಾ ಕರೆದ್ರೆ, ತಮ್ಮ ದೇಶದಿಂದ ವಿದೇಶಗಳಲ್ಲಿ ನಡೆಯುವ ಭಯೋತ್ಪಾದನೆಯನ್ನು ಒಳ್ಳೆಯ ಭಯೋತ್ಪಾದನೆ ಅನ್ನುತ್ತದೆ. ಪಾಕಿಸ್ತಾನದ ಆಶಾಂತಿಗೆ ಕಾರಣರಾಗಿರುವ ತೆಹ್ರೀಕ್ -ಎ- ತಾಲಿಬಾನ್ , ಐಎಸ್ ಐಎ-ಕೆ, ಮತ್ತು ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯಂತಹ ಸಂಘಟನೆಗಳ ವಿರುದ್ಧ ಪಾಕ್ ಸೇನೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಆದರೆ, ಪಾಕ್ ನೆಲದಿಂದ ಭಾರತದಲ್ಲಿ ಭಯೋತ್ಪಾದನೆ ಹರಡುತ್ತಿರುವವರು ಒಳ್ಳೆಯ ಭಯೋತ್ಪಾದಕರು ಎಂಬ ದ್ವಂದ್ವ ನಿಲುವನ್ನು ಪಾಕಿಸ್ತಾನ ಹೊಂದಿದೆ.
ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ನೀಡಿರುವ ವರದಿಯಲ್ಲಿ, ಪಾಕಿಸ್ತಾನ ತನ್ನ 2015ರ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕ್ರಿಯಾ ಯೋಜನೆಯಲ್ಲಿ ಬಹಳ ಸೀಮಿತ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದೆ. ವಿಶೇಷವಾಗಿ ಪಾಕಿಸ್ತಾನ ಯಾವುದೇ ತಾರತಮ್ಯ ಮತ್ತು ತಕ್ಷಣ ಕ್ರಮ ತೆಗೆದುಕೊಳ್ಳುವ ಮೂಲಕ ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ತೊಡೆದು ಹಾಕುವಲ್ಲಿ ವಿಫಲವಾಗಿದೆ ಎಂದು ಆನ್ ಟೆರರಿಸಂ -2020 ವರದಿಯಲ್ಲಿ ಹೇಳಿದೆ.
Advertisement