ನವದೆಹಲಿ: ಸಿಂಗಾಪುರದ ಕೋವಿಡ್-19 ಹೊಸ ತಳಿ ಕಂಡುಬಂದಿದೆ ಎಂಬ ವದಂತಿಯನ್ನು ಸಿಂಗಾಪುರ ಆರೋಗ್ಯ ಸಚಿವಾಲಯ ತಳ್ಳಿಹಾಕಿದೆ.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಂಗಾಪುರಕ್ಕೆ ಹೋಗುವ ವಿಮಾನ ಸೇವೆಯನ್ನು ಬಂದ್ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿರುವ ಸುದ್ದಿ ವರದಿಯಾದ ಬೆನ್ನಲ್ಲೇ ಸಿಂಗಾಪುರ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ಸಿಂಗಾಪುರ ವಿಮಾನವನ್ನು ರದ್ದುಗೊಳಿಸಿ, ಸಿಂಗಾಪುರದಲ್ಲಿ ಕೋವಿಡ್ ಹೊಸ ರೂಪಾಂತರಿ ಕಂಡುಬಂದಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೆ ಸಂಬಂಧಪಟ್ಟಂತೆ ಇದರಲ್ಲಿ ಯಾವುದೇ ಸತ್ಯವಿಲ್ಲ, ಸಿಂಗಾಪುರ ರೂಪಾಂತರಿ ಕೊರೋನಾ ಪತ್ತೆಯಾಗಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಇತ್ತೀಚಿನ ವಾರಗಳಲ್ಲಿ ಅನೇಕ ಕೋವಿಡ್-19 ಪ್ರಕರಣಗಳಲ್ಲಿ ಪ್ರಚಲಿತದಲ್ಲಿರುವ ತಳಿ ಬಿ.1.617.2 ರೂಪಾಂತರವಾಗಿದೆ, ಇದು ಭಾರತದಲ್ಲಿ ಹುಟ್ಟಿಕೊಂಡಿತು. ಫೈಲೋಜೆನೆಟಿಕ್ ಪರೀಕ್ಷೆಯು ಈ ಬಿ .1.617.2 ರೂಪಾಂತರವನ್ನು ಸಿಂಗಾಪುರದ ಹಲವಾರು ಕ್ಲಸ್ಟರ್ಗಳೊಂದಿಗೆ ಸಂಯೋಜಿಸಿದೆ ಎಂದು ತೋರಿಸಿದೆ.
ಸಿಂಗಾಪುರದಲ್ಲಿ ಕಂಡುಬರುವ ಹೊಸ ಕೋವಿಡ್ ರೂಪಾಂತರಿ ಮಕ್ಕಳಿಗೆ ಅಪಾಯಕಾರಿ. ಇದು ಮೂರನೇ ಅಲೆಯನ್ನು ಭಾರತಕ್ಕೆ ತರುವ ಸಾಧ್ಯತೆಯಿದೆ, ಹೀಗಾಗಿ ಸಿಂಗಾಪುರಕ್ಕೆ ವಿಮಾನಯಾನ ಸೇವೆಯನ್ನು ನಿಲ್ಲಿಸಿ ಎಂದು ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಟ್ವೀಟ್ ಮಾಡಿದ್ದರು. ಮಕ್ಕಳಿಗೆ ಶೀಘ್ರದಲ್ಲಿಯೇ ಕೊರೋನಾಗೆ ಲಸಿಕೆ ಬಿಡುಗಡೆ ಮಾಡಬೇಕೆಂದು ಸಹ ಕೇಜ್ರಿವಾಲ್ ಒತ್ತಾಯಿಸಿದ್ದರು.
Advertisement