'ನಿಮಗೂ ಇದೇ ಗತಿ ಬರಲಿದೆ': ಟೈಲರ್ ಹತ್ಯೆಯ ವಿಡಿಯೋ ಕಳಿಸಿ ಬಿಜೆಪಿ ಉಚ್ಚಾಟಿತ ನಾಯಕ ನವೀನ್ ಜಿಂದಾಲ್ ಗೆ ಬೆದರಿಕೆ

ಪ್ರವಾದಿ ಬಗ್ಗೆ ಟ್ವೀಟ್ ಮಾಡಿದ್ದ ನವೀನ್ ಕುಮಾರ್ ಜಿಂದಾಲ್ ಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. 
ನವೀನ್ ಜಿಂದಾಲ್ (ಸಂಗ್ರಹ ಚಿತ್ರ)
ನವೀನ್ ಜಿಂದಾಲ್ (ಸಂಗ್ರಹ ಚಿತ್ರ)

ನವದೆಹಲಿ: ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯ್ ಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರೆ, ಇತ್ತ ಪ್ರವಾದಿ ಬಗ್ಗೆ ಟ್ವೀಟ್ ಮಾಡಿದ್ದ ನವೀನ್ ಕುಮಾರ್ ಜಿಂದಾಲ್ ಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. 

ನವೀನ್ ಕುಮಾರ್ ಜಿಂದಾಲ್ ದೆಹಲಿ ಬಿಜೆಪಿ ಮಾಧ್ಯಮ ವಿಭಾದ ಮಾಜಿ ಮುಖ್ಯಸ್ಥರಾಗಿದ್ದರು. ಆದರೆ ಪ್ರವಾದಿ ಮೊಹಮ್ಮದ್ ಬಗ್ಗೆ ಇವರು ಮಾಡಿದ್ದ ಟ್ವೀಟ್ ಆಕ್ಷೇಪಾರ್ಹವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. 

ಇತ್ತ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಟೈಲರ್ ಕನ್ಹಯ್ಯ ಲಾಲ್ ನ್ನು ಕತ್ತು ಸೀಳಿ ಹತ್ಯೆ ಮಾಡಿದ ಬೆನ್ನಲ್ಲೇ ಅದರ ವಿಡಿಯೋವನ್ನು ಇ-ಮೇಲ್ ಮೂಲಕ ಕಳಿಸಿ ತಮಗೆ ಜೀವ ಬೆದರಿಕೆ ಹಾಕಲಾಗಿದ್ದು, ತಮಗೆ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ. 

ಕನ್ಹಯ್ಯ ಲಾಲ್ ಗೆ ಕತ್ತು ಸೀಳಿದಂತೆ ನನಗೆ ಮತ್ತು ನನ್ನ ಕುಟುಂಬದವರಿಗೂ ಕತ್ತು ಸೀಳಲಾಗುತ್ತದೆ ಎಂಬ ಇ-ಮೇಲ್ ಇಂದು ಬೆಳಿಗ್ಗೆ (ಜೂ.29) ರಂದು ಕನ್ಹಯ್ಯ ಲಾಲ್ ಹತ್ಯೆಯ ವಿಡಿಯೋ ಸಹಿತ ಬಂದಿತ್ತು ಎಂದು ನವೀನ್ ಜಿಂದಾಲ್ ಹೇಳಿದ್ದಾರೆ. 

ನನಗೆ ಈಗಾಗಲೇ ನೂರಾರು ಜೀವ ಬೆದರಿಕೆ ಬಂದಿದೆ. ಈ ರೀತಿ ಬಂದಿರುವ ಬೆದರಿಕೆಗಳ ಬಗ್ಗೆ ಹಲವು ಬಾರಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದೇನೆ. ಆದರೆ  ಈ ಹಿಂದೆಯೇ ಕಡಿಮೆ ಮಾಡಿದ್ದ ಭದ್ರತೆಯನ್ನು ಹೆಚ್ಚಿಸಿಲ್ಲ. ವೈ+ ಇದ್ದ ಭದ್ರತೆಯನ್ನು ಕಳೆದ ಸೆಪ್ಟೆಂಬರ್ ನಲ್ಲಿ ಇಳಿಕೆ ಮಾಡಿ ಇಬ್ಬರು ಪೊಲೀಸರನ್ನಷ್ಟೇ ನಿಯೋಜಿಸಲಾಗಿದೆ. 

ನಾನು ಭಯದಿಂದ ನನ್ನ ಮಕ್ಕಳನ್ನು ಬೇರೆಡೆ ಇರಿಸಿದ್ದೇನೆ. ನಾನು ಹೊರಗೆ ಹೋದಾಗ ಒಬ್ಬರು ಪೊಲೀಸ್ ಸಿಬ್ಬಂದಿ ನನ್ನೊಂದಿಗೆ ಬರುತ್ತಾರೆ. ಮತ್ತೊಬ್ಬರು ನನ್ನ ಮನೆಯ ಭದ್ರತೆಗೆ ಇರುತ್ತಾರೆ ಎಂದು ನವೀನ್ ಕುಮಾರ್ ಜಿಂದಾಲ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com