"ಭಾರತದ ಬಲೆ": ವಿವಾದದ ಕಿಡಿ ಹೊತ್ತಿಸಿದ ಇಟಾಲಿಯನ್ ನೌಕಾಪಡೆ ಸಿಬ್ಬಂದಿ ಪುಸ್ತಕ! 

2012 ರ ಫೆ.15 ರಂದು ಕೇರಳದ ಕಡಲತೀರದಲ್ಲಿ ಭಾರತೀಯ ಮೀನುಗಾರರನ್ನು ಇಟಲಿಯ ಹಡಗಿನ ಸಿಬ್ಬಂದಿಗಳು ಹತ್ಯೆ ಮಾಡಿದ್ದ ಪ್ರಕರಣ ನಿಮಗೆಲ್ಲರಿಗೂ ನೆನಪಿರಬಹುದು.
ಇಟಾಲಿಯನ್ ನೌಕಾಪಡೆ ಸಿಬ್ಬಂದಿ ಪುಸ್ತಕ
ಇಟಾಲಿಯನ್ ನೌಕಾಪಡೆ ಸಿಬ್ಬಂದಿ ಪುಸ್ತಕ

ತಿರುವನಂತಪುರಂ: 2012 ರ ಫೆ.15 ರಂದು ಕೇರಳದ ಕಡಲತೀರದಲ್ಲಿ ಭಾರತೀಯ ಮೀನುಗಾರರನ್ನು ಇಟಲಿಯ ಹಡಗಿನ ಸಿಬ್ಬಂದಿಗಳು ಹತ್ಯೆ ಮಾಡಿದ್ದ ಪ್ರಕರಣ ನಿಮಗೆಲ್ಲರಿಗೂ ನೆನಪಿರಬಹುದು. ಈ ಪ್ರಕರಣದ ವಿಚಾರಣೆಯನ್ನು ರೋಮ್ ಗೆ ವರ್ಗಾವಣೆ ಮಾಡಿ ಅಲ್ಲಿ ತೀರಾ ಇತ್ತೀಚೆಗೆ ಅಂದರೆ 2022 ರ ಜನವರಿಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು. ಸರಿ ಇಷ್ಟೆಲ್ಲಾ ಆದ ನಂತರ ಈಗ ಏನು ಹೊಸ ವಿವಾದ ಅಂತೀರಾ? 

ಆ ಹಡಗಿನಲ್ಲಿದ್ದ ಲಾಟೋರ್ ಮತ್ತು ಸಾಲ್ವಟೋರ್ ಗಿರೋನ್ ಎಂಬ ಸಿಬ್ಬಂದಿಗಳ ಪೈಕಿ ಒಬ್ಬರು ಪುಸ್ತಕ ಬರೆದಿರುವುದು ಈಗ ವಿವಾದದ ಕಿಡಿ ಹೊತ್ತಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಈಗಿನ ತಾಜಾ ಸುದ್ದಿ. ಅವರ ಪಾಡಿಗೆ ಅವರೇನೋ ಪುಸ್ತಕ ಬರೆದುಕೊಂಡಿದ್ದಿದ್ದರೆ ಅದಕ್ಕೆ ಯಾವುದೇ ವಿವಾದವೂ ತಗುಲುತ್ತಿರಲಿಲ್ಲ. ಆದರೆ ಆರೋಪಿ ತನ್ನ ಪುಸ್ತಕದಲ್ಲಿ ಭಾರತ ತಮ್ಮನ್ನು ಸಿಲುಕಿಸಲೆಂದೇ ಬಲೆ ಬೀಸಿತ್ತು ಎಂದು ನೌಕಾ ಪಡೆಯ ಸಿಬ್ಬಂದಿಗಳ ಅಪಹರಣ ಎಂಬ ಪುಸ್ತಕದಲ್ಲಿ ಬರೆದಿದ್ದಾನೆ. 

ಪುಸ್ತಕದಲ್ಲಿ ತನ್ನ 10 ವರ್ಷಗಳ ಕಷ್ಟ ಕಾರ್ಪಣ್ಯಗಳ ಬಗ್ಗೆ ವಿವರಿಸಿರುವ ಲಾಟೋರ್, ಮೀನುಗಾರರನ್ನು ಗುಂಡಿಕ್ಕಿ ಹತ್ಯೆ ಮಾಡುವುದಕ್ಕೂ ಮುನ್ನ ಹಾಗೂ ನಂತರದ ಘಟನೆಗಳ ಬಗ್ಗೆ ಬರೆದಿದ್ದಾರೆ. ಆದರೆ ಮತ್ತೋರ್ವ ಆರೋಪಿ ಸಾಲ್ವಟೋರ್ ಗಿರೋನ್ ತನಗೂ ಈ ಪುಸ್ತಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. 

ಇಟಲಿಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವನ್ನೇ ಪುಸ್ತಕವನ್ನಾಗಿಸಿರುವ ಲಾಟೋರ್, ಕಡಲ್ಗಳ್ಳರ ದೋಣಿಯನ್ನು ಎದುರುಗೊಂಡಿದ್ದು ಹಾಗೂ ತಮ್ಮನ್ನು ಬಂದರಿಗೆ ಕರೆತಂದು ಬಂಧಿಸಿ ವಶಕ್ಕೆ ಪಡೆಯುವ ಭಾರತೀಯರ ಬಲೆಯ ಬಗ್ಗೆ ಪ್ರಸ್ತಾಪಿಸಿದೆ. ಪುಸ್ತಕದ ಒಂದು ಇಡೀ ಅಧ್ಯಾಯವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಮೀನುಗಾರರನ್ನು ಹತ್ಯೆ ಮಾಡುವುದೂ ಅಲ್ಲದೇ ಭಾರತದ ಟ್ರ್ಯಾಪ್ ಗೆ ತಾವು ಸಿಲುಕಿಕೊಂಡೆವು ಎಂಬ ಮೊಂಡುತನದ ವಾದ ಮಂಡಿಸಿರುವ ಹಡಗು ಸಿಬ್ಬಂದಿ ತನ್ನನ್ನು ವಾಪಸ್ ಭಾರತಕ್ಕೆ ಕಳಿಸಿ ಅಲ್ಲಿ ಗಲ್ಲು ಶಿಕ್ಷೆಯ ಬೆದರಿಕೆಯನ್ನು ಎದುರಿಸುವಂತೆ ಮಾಡಿದ ತನ್ನ ಸರ್ಕಾರದ ಲೋಪಗಳಿಗೆ ತಾನು ಪರಿಹಾರ ಪಡೆಯುವುದಕ್ಕೆ ಅರ್ಹ ಎಂದೂ ವಾದಿಸಿದ್ದಾನೆ. 

ನನ್ನ ಕರ್ತವ್ಯವನ್ನು ನಿರ್ವಹಿಸಿದ್ದಕ್ಕೆ ಹಾಗೂ ನನ್ನದಲ್ಲದ ತಪ್ಪಿಗೆ ನಾನು ಎದುರಿಸಿದ್ದನ್ನು ಕಥೆಯ ರೂಪದಲ್ಲಿ ಹೇಳಲು ಈ ಪುಸ್ತಕವನ್ನು ಹೊರತಂದಿರುವುದಾಗಿ ಲಾಟೋರ್ ಹೇಳಿದ್ದಾನೆ. ನ.11 ರಂದು ಈ ಪುಸ್ತಕ ಬಿಡುಗಡೆಯಾಗಿದ್ದು, ಅಮೇಜಾನ್ ನಲ್ಲಿ ಈ ಪುಸ್ತಕ ಎರಡು ಬಾರಿ ಸ್ಟಾಕ್ ಮುಕ್ತಾಯದ ಬೋರ್ಡ್ ನ್ನು ಕಂಡಿದೆ. 

ನ.15 ರಂದು ಲಾಟೋರ್ ಹಾಗೂ ಸಂದರ್ಶನ ಕ್ಯಾಪನ್ನಾ ಇಟಾಲಿಯನ್ ಸಂಸತ್ತಿನ ಕೆಳಮನೆಯ ಚೇಂಬರ್ ಆಫ್ ಡೆಪ್ಯೂಟೀಸ್ನ ಪತ್ರಿಕಾ ಕೊಠಡಿಗೂ ಈ ಪುಸ್ತಕವನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com