ಸಿಂಗಾಪುರ: ಶಾಪಿಂಗ್ ಮಾಲ್ನ ಹೊರಗೆ ಮೆಟ್ಟಿಲ ಮೇಲಿಂದ ತಳ್ಳಿ ಭಾರತ ಮೂಲದ ವ್ಯಕ್ತಿ ಹತ್ಯೆ!
ಸಿಂಗಾಪುರ: ಸಿಂಗಾಪುರದ ಶಾಪಿಂಗ್ ಮಾಲ್ ನಲ್ಲಿ ದುರಂತ ಸಂಭವಿಸಿದ್ದು, ಮೆಟ್ಟಿಲ ಮೇಲಿಂದ ಕೆಳಗೆ ತಳ್ಳಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಸಿಂಗಾಪುರದ ಆರ್ಚರ್ಡ್ ರಸ್ತೆಯಲ್ಲಿರುವ ಕಾಂಕಾರ್ಡ್ ಶಾಪಿಂಗ್ ಮಾಲ್ನಲ್ಲಿ ಈ ಘಟನೆ ನಡೆದಿದ್ದು, ಭಾರತ ಮೂಲದ 34 ವರ್ಷದ ದೇವೇಂದ್ರನ್ ಷಣ್ಮುಗಂ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸ್ ಮೂಲಗಳು ತಿಳಿಸಿರುವಂತೆ 27 ವರ್ಷದ ಮುಹಮ್ಮದ್ ಅಜ್ಫಾರಿ ಅಬ್ದುಲ್ ಕಹಾ ಎಂಬಾತ ಷಣ್ಮುಗಂರನ್ನು ಮೆಟ್ಟಿಲ ಮೇಲಿಂದ ತಳ್ಳಿ ಕೆಳಗೆ ಬೀಳಿಸಿದ್ದಾರೆ.
ಈ ವೇಳೆ ಕೆಳಗೆ ಬಿದ್ದ ಷಣ್ಮುಗಂ ಪ್ರಜ್ಞಾಹೀನರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶುಕ್ರವಾರ ಮಂಡೈ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು ಹೇಳಲಾಗಿದೆ.
ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ಕೆಳಗೆ ಬಿದ್ದ ರಭಸಕ್ಕೆ ಷಣ್ಮುಗಂ ಅವರ ತಲೆಬುರುಡೆಯಲ್ಲಿ ಮೂಳೆ ಮುರಿತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
ಇನ್ನು ಸಿಂಗಾಪುರ ಕಾನೂನಿನ ಪ್ರಕಾರ ಆರೋಪಿ ಮುಹಮ್ಮದ್ ಅಜ್ಫಾರಿ ಅಬ್ದುಲ್ ಕಹಾಗೆ 10 ವರ್ಷಗಳ ಜೈಲು ಶಿಕ್ಷೆ ಜೊತೆಗೆ ದಂಡ ಕೂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ