ಕೊಲಂಬೋ: ಶ್ರೀಲಂಕಾದ ಸಾಲ ಪುನ ರಚನೆ ಬೆಂಬಲಿಸುವುದಾಗಿ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶಕ್ಕೆ ಐಎಂಎಫ್ ನಿಂದ ಅಗತ್ಯವಿರುವ 2.9 ಬಿಲಿಯನ್ ಡಾಲರ್ ಬೇಲ್ ಔಟ್ (ಹಣಕಾಸಿನ ಬೆಂಬಲ) ಪ್ಯಾಕೇಜ್ ಪಡೆಯಲು ಇದ್ದ ದೊಡ್ಡ ಅಡಚಣೆಯನ್ನು ತೆರವುಗೊಳಿಸುವುದಾಗಿ ಚೀನಾ ಭರವಸೆ ನೀಡಿದೆ ಎಂದು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮಂಗಳವಾರ ಹೇಳಿದ್ದಾರೆ.
ಜನವರಿಯಲ್ಲಿ ಶ್ರೀಲಂಕಾ ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಜಾಗತಿಕ ಸಾಲದಾತರಿಂದ ಸಾಲ ಪಡೆಯುವ ದ್ವೀಪ ರಾಷ್ಟ್ರದ ಪ್ರಯತ್ನವನ್ನು ಭಾರತ ಬಲವಾಗಿ ಬೆಂಬಲಿಸಿತು.
ಚೀನಾದ ಎಕ್ಸಿಂ ಬ್ಯಾಂಕ್ ನಿಂದ ಹೊಸ ಪತ್ರವನ್ನು ಕಳೆದ ರಾತ್ರಿ ಸ್ವೀಕರಿಸಿದ್ದು, ಸೆಂಟ್ರಲ್ ಬ್ಯಾಂಕ್ ಗವರ್ನರ್ ಜೊತೆಗೆ ನಮ್ಮ ಉದ್ದೇಶದ ಪತ್ರಕ್ಕೆ ಸಹಿ ಹಾಕಿದ್ದೇವೆ. ಮತ್ತು ಅದನ್ನು ಕಳೆದ ರಾತ್ರಿಯೇ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಕಳುಹಿಸಿದ್ದೇವೆ ಎಂದು ಹಣಕಾಸು ಸಚಿವ ವಿಕ್ರಮಸಿಂಘೆ ಸಂಸತ್ತಿನಲ್ಲಿ ಹೇಳಿದರು.
ನಮ್ಮ ಬಾಧ್ಯತೆಗಳು ಈಗ ಪೂರ್ಣಗೊಂಡಿವೆ. ಈ ತಿಂಗಳ ಮೂರು ಅಥವಾ ನಾಲ್ಕನೇ ವಾರದೊಳಗೆ ಐಎಂಎಫ್ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತದೆ ಎಂದು ಭಾವಿಸಿದ್ದೇವೆ. ಇದರಿಂದ ವಿಶ್ವ ಬ್ಯಾಂಕ್ ಮತ್ತು ಎಡಿಬಿಯಿಂದ ಹಣ ಪಡೆಯಲು ಸಾಧ್ಯವಾಗಲಿದೆ ಎಂದರು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಐಎಂಎಫ್ ಶ್ರೀಲಂಕಾಕ್ಕೆ 2.9 ಶತಕೋಟಿ ಡಾಲರ್ ಬೇಲ್ಔಟ್ ಪ್ಯಾಕೇಜ್ ನ್ನು ಮಂಜೂರು ಮಾಡಿತ್ತು.
Advertisement