ಲಾಹೋರ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿವಾಸದ ಬಳಿ ನೆರೆದಿರುವ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ತೋಷಖಾನ ಪ್ರಕರಣದಲ್ಲಿ ಇಮ್ರಾನ್ ಖಾನ್ ಬಂಧನಕ್ಕೊಳಗಾಗುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಇಮ್ರಾನ್ ಖಾನ್ ನಿವಾಸದ ಎದುರು ಬೆಂಬಲಿಗರು ನೆರೆದಿದ್ದರು.
ಪೊಲೀಸರು ಬೆಂಬಲಿಗರನ್ನು ತಡೆಯಲು ಜಮಾನ್ ಪಾರ್ಕ್ ನಿವಾಸದ ಬಳಿ ಅಶ್ರುವಾಯು ಸಿಡಿಸಿದರು.
ತೋಷಖಾನ ಪ್ರಕರಣದಲ್ಲಿ ಇಮ್ರಾನ್ ನ್ನು ಬಂಧಿಸಲು ಪೊಲೀಸ್ ತಂಡ ಆಗಮಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್: ಕೋರ್ಟ್ ಆದೇಶದ ನಂತರ ಬಂಧನದ ಕಾರ್ಯಾಚರಣೆ ನಿಲ್ಲಿಸಿದ ಪೊಲೀಸರು
ಪಾಕ್ ಪ್ರಧಾನಿಯಾಗಿದ್ದಾಗ ಸ್ವೀಕರಿಸಿದ್ದ ಉಡುಗೊರೆಗಳನ್ನು ಮಾರಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ನಡುವೆ ಇಮ್ರಾನ್ ಖಾನ್ ತಮ್ಮ ಬೆಂಬಲಿಗರಿಗೆ ವೀಡಿಯೋ ಸಂದೇಶದಲ್ಲಿ ಅವರನ್ನು ಬಂಧಿಸಲು ಪೊಲೀಸರು ಆಗಮಿಸಿದ್ದರಿಂದ ನಿಜವಾದ ಸ್ವಾತಂತ್ರ್ಯಕ್ಕಾಗಿ ಬೆಂಬಲಿಗರು ಹೊರಬರಬೇಕು ಎಂದು ಕರೆ ನೀಡಿದ್ದರು.
ನನ್ನ ಬಂಧನದ ನಂತರ ದೇಶ ನಿದ್ದೆ ಮಾಡಲಿದೆ ಎಂದು ಅವರು ಭಾವಿಸಿದ್ದಾರೆ, ಅವರು ಭಾವಿಸಿರುವುದು ತಪ್ಪು ಎಂದು ನೀವು ಸಾಬೀತು ಮಾಡಿ ಎಂದು ಖಾನ್ ವಿಡಿಯೋ ಸಂದೇಶದಲ್ಲಿ ಕರೆ ನೀಡಿದ್ದರು.
ನನ್ನನ್ನು ಜೈಲಿಗೆ ಹಾಕಿದರೆ ಅಥವಾ ಹತ್ಯೆ ಮಾಡಿದರೆ, ನೀವು ಇಮ್ರಾನ್ ಖಾನ್ ಇಲ್ಲದೇ ಹೋರಾಡುತ್ತೀರಿ, ಹಾಗೂ ಈ ಕಳ್ಳರ, ದೇಶಕ್ಕಾಗಿ ನಿರ್ಧಾರ ಕೈಗೊಳ್ಳುತ್ತಿರುವ ಒಬ್ಬ ವ್ಯಕ್ತಿಯ ಗುಲಾಮರಾಗಿರಲು ಒಪ್ಪುವುದಿಲ್ಲ ಎಂಬುದನ್ನು ಸಾಬೀತುಪಡಿಸಬೇಕೆಂದು ಬೆಂಬಲಿಗರಿಗೆ ಇಮ್ರಾನ್ ಖಾನ್ ಹೇಳಿದ್ದಾರೆ.
Advertisement