ಪಾಕಿಸ್ತಾನ ತನ್ನ ಸಾರ್ವಭೌಮತ್ವ ಕಾಪಾಡಲು ಬದ್ಧ: ರಾಜನಾಥ್ ಸಿಂಗ್ ಹೇಳಿಕೆ ಖಂಡಿಸಿದ ಪಾಕ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಯನ್ನು ಖಂಡಿಸಿದ ಪಾಕಿಸ್ತಾನ, ತನ್ನ ಸಾರ್ವಭೌಮತ್ವವನ್ನು ಕಾಪಾಡಲು ಬದ್ಧ ಮತ್ತು ಸಾಮರ್ಥ್ಯದಲ್ಲಿ ತಾನು ದೃಢವಾಗಿ ನಿಂತಿರುವುದಾಗಿ ಪಾಕಿಸ್ತಾನ ಶನಿವಾರ ಹೇಳಿದೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಇಸ್ಲಾಮಾಬಾದ್: ಉಗ್ರರು ಭಾರತದಲ್ಲಿ ದಾಳಿ ಮಾಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದರೆ, ಅಲ್ಲಿಗೆ ನುಗ್ಗಿ ಹೊಡೆಯುತ್ತೇವೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಯನ್ನು ಖಂಡಿಸಿದ ಪಾಕಿಸ್ತಾನ, ತನ್ನ ಸಾರ್ವಭೌಮತ್ವವನ್ನು ಕಾಪಾಡಲು ಬದ್ಧ ಮತ್ತು ಸಾಮರ್ಥ್ಯದಲ್ಲಿ ತಾನು ದೃಢವಾಗಿ ನಿಂತಿರುವುದಾಗಿ ಪಾಕಿಸ್ತಾನ ಶನಿವಾರ ಹೇಳಿದೆ.

“ನಿನ್ನೆ ಟಿವಿ ಸಂದರ್ಶನವೊಂದರಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೀಡಿದ ಪ್ರಚೋದನಕಾರಿ ಹೇಳಿಕೆಯನ್ನು ಪಾಕಿಸ್ತಾನ ಖಂಡಿಸುತ್ತದೆ. ಜನವರಿ 25, 2024 ರಂದು ಪಾಕಿಸ್ತಾನವು ಭಾರತದ ಕಾನೂನುಬಾಹಿರ ಹತ್ಯೆಗಳ ಬಗ್ಗೆ ಮಾತನಾಡಿದೆ ”ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದೇ ಆಕ್ರಮಣದ ವಿರುದ್ಧ ತನ್ನ ಸಾರ್ವಭೌಮತ್ವವನ್ನು ಕಾಪಾಡಲು ಬದ್ಧ ಮತ್ತು ಸಾಮರ್ಥ್ಯದಲ್ಲಿ ತಾನು ದೃಢವಾಗಿ ನಿಲ್ಲುವುದಾಗಿ ಪಾಕಿಸ್ತಾನ ಹೇಳಿದೆ.

ರಾಜನಾಥ್ ಸಿಂಗ್
ಉಗ್ರರು ಭಾರತದಲ್ಲಿ ದಾಳಿ ಮಾಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದರೆ, ಪಾಕ್ ಗೆ ನುಗ್ಗಿ ಹೊಡೆಯುತ್ತೇವೆ: ರಾಜನಾಥ್ ಸಿಂಗ್

2019 ರ ನಂತರ ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ ನಡೆಸಿವೆ ಎಂದು ಬ್ರಿಟಿಷ್ ಪತ್ರಿಕೆ "ದಿ ಗಾರ್ಡಿಯನ್" ವರದಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವರು, "ನೆರೆಯ ದೇಶದ ಭಯೋತ್ಪಾದಕರು ಭಾರತದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದರೆ ಅಥವಾ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದರೆ ನಾವು ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ" ಎಂದು ಹೇಳಿದ್ದರು.

ಭಾರತ ಎಂದಿಗೂ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ ಅಥವಾ ಅವರ ಪ್ರದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿಲ್ಲ ಎಂದು ಸಿಂಗ್ ಪುನರುಚ್ಚರಿಸಿದರು. ಆದರೆ ಯಾರಾದರೂ ಭಾರತಕ್ಕೆ ಅಥವಾ ಅದರ ಶಾಂತಿಗೆ ಧಕ್ಕೆ ತಂದರೆ ಅವರನ್ನು ಬಿಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಪಾಕಿಸ್ತಾನದ ವಿದೇಶಾಂಗ ಕಚೇರಿ ಇಂದು ಬಿಡುಗಡೆ ಮಾಡಿರುವ ಹೇಳಿಕೆಗೆ ಭಾರತ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com