ಕಠ್ಮಂಡು: ಭಾರತದೊಂದಿಗೆ ಇತ್ತೀಚೆಗೆ ಸಹಿ ಮಾಡಿದ ದೀರ್ಘಾವಧಿಯ ವಿದ್ಯುತ್ ಒಪ್ಪಂದದ ವಿಚಾರಕ್ಕೆ ಸಂಬಂಧಿಸಿದಂತೆ ನೇಪಾಳದ ಸುಪ್ರೀಂ ಕೋರ್ಟ್ ಅಲ್ಲಿನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಭಾರತ-ನೇಪಾಳ ನಡುವಿನ ದೀರ್ಘಾವಧಿಯ ವಿದ್ಯುತ್ ಒಪ್ಪಂದದ ವಿಚಾರಕ್ಕೆ ಸಂಬಂಧಿಸಿದಂತೆ ನೇಪಾಳ ಸರ್ಕಾರಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಒಪ್ಪಂದಕ್ಕೆ ಬಹುಪಾಲು ಸಂಸತ್ ಸದಸ್ಯರ ಅನುಮೋದನೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ. ಷೋಕಾಸ್ ನೋಟಿಸ್ನಲ್ಲಿ, ಒಪ್ಪಂದವು ನೈಸರ್ಗಿಕ ಸಂಪನ್ಮೂಲಗಳ ವಿತರಣೆ ಮತ್ತು ಅವುಗಳ ಬಳಕೆಗೆ ಸಂಬಂಧಿಸಿದೆಯೇ ಮತ್ತು ಸಂಸತ್ತಿನ ಬಹುಪಾಲು ಸದಸ್ಯರ ಅನುಮೋದನೆಯ ಅಗತ್ಯವಿದ್ದರೆ ಅದನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿದೆ. ಅಲ್ಲಗೆ ಮಧ್ಯಂತರ ಆದೇಶಗಳನ್ನು ನೀಡಬೇಕೆ ಎಂದು ನಿರ್ಧರಿಸಲು ಸುಪ್ರೀಂ ಕೋರ್ಟ್ ಎರಡೂ ಕಡೆಯಿಂದ ವಿಚಾರಣೆಗೆ ಕರೆದಿದೆ.
ಮುಂದಿನ ಹತ್ತು ವರ್ಷಗಳಲ್ಲಿ ಭಾರತಕ್ಕೆ 10,000 ಮೆಗಾವ್ಯಾಟ್ ವಿದ್ಯುತ್ ರಫ್ತು ಮಾಡಲು ಅನುಕೂಲವಾಗುವಂತೆ ನೇಪಾಳ ವಿದ್ಯುತ್ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು. ಜನವರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹಿಮಾಲಯ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದೀಗ ನೇಪಾಳ ಸರ್ಕಾರದ ಮಾಜಿ ಕಾರ್ಯದರ್ಶಿ ಸೂರ್ಯ ನಾಥ್ ಉಪಾಧ್ಯಾಯ ಅವರು ಸಲ್ಲಿಸಿದ ರಿಟ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಹಕುಲ್ ಸುಬೇದಿ ಅವರ ಏಕ ಪೀಠವು ಮಂಗಳವಾರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ಸುಪ್ರೀಂ ಕೋರ್ಟ್ನ ವಕ್ತಾರ ವೇದ್ ಪ್ರಸಾದ್ ಉಪ್ರೇತಿ ತಿಳಿಸಿದ್ದಾರೆ.
ನೇಪಾಳ-ಭಾರತದ ಶ್ರೇಷ್ಠ ವ್ಯಕ್ತಿಗಳ ಗುಂಪಿನ ಸದಸ್ಯರೂ ಆದ ಉಪಾಧ್ಯಾಯ ಅವರು ಸಂಸತ್ತಿನ ಮೂಲಕ ದ್ವಿಪಕ್ಷೀಯ ಒಪ್ಪಂದವನ್ನು ಅನುಮೋದಿಸುವ ಅಗತ್ಯವನ್ನು ಒತ್ತಿ ಹೇಳಿದರು.
Advertisement