
ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಮತ್ತಷ್ಟು ಉಗ್ವಿಗ್ನತೆ ನಡುವೆ ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದಾರೆ. ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಸೇರಿದಂತೆ ಪಾಕಿಸ್ತಾನದ ಕ್ಷಿಪಣಿ ಶಸ್ತ್ರಾಸ್ತ್ರಗಳು ಮತ್ತು 130 ಪರಮಾಣು ಬಾಂಬ್ ಗಳನ್ನು ಭಾರತಕ್ಕಾಗಿ ಮಾತ್ರ ಇಡಲಾಗಿದೆ ಎಂದು ಹೇಳಿಕೊಂಡಿದ್ದು ಅವರ ಮಾತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
26 ಜನರ ಸಾವಿಗೆ ಕಾರಣವಾದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಇತ್ತೀಚಿನ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಅಬ್ಬಾಸಿ ಈ ಬೆದರಿಕೆಯನ್ನು ಒಡ್ಡಿದ್ದಾರೆ.
ಭಾರತವು ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ನಿರ್ಧರಿಸಿದರೆ, ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಅಬ್ಬಾಸಿ ಬಹಿರಂಗವಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕೇವಲ ಸಾಂಕೇತಿಕವಾಗಿಲ್ಲ ದೇಶಾದ್ಯಂತ ಇರಿಸಲ್ಪಟ್ಟಿವೆ ಮತ್ತು ಬಳಸಲು ಸಿದ್ಧವಾಗಿವೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರ ನಮಗೆ ನೀರು ಸರಬರಾಜನ್ನು ನಿಲ್ಲಿಸಿದರೆ, ಅವರು ಯುದ್ಧಕ್ಕೆ ಸಿದ್ಧರಾಗಿರಬೇಕು. ನಮ್ಮಲ್ಲಿರುವ ಮಿಲಿಟರಿ ಉಪಕರಣಗಳು, ನಮ್ಮಲ್ಲಿರುವ ಕ್ಷಿಪಣಿಗಳು, ಅವು ಪ್ರದರ್ಶನಕ್ಕೆ ಅಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆ ಎಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಅವೆಲ್ಲವೂ ನಿಮ್ಮ ಮೇಲೆ ಗುರಿಯಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ದುರಂತ ಪಹಲ್ಗಾಮ್ ದಾಳಿಗೆ ಭಾರತ ತೆಗೆದುಕೊಂಡ ಪ್ರತಿಕ್ರಮಗಳ ನಂತರ ಅಬ್ಬಾಸಿಯವರ ಈ ತೀಕ್ಷ್ಣವಾದ ಬೆದರಿಕೆಗಳನ್ನು ಒಡ್ಡಿದ್ದಾರೆ.
ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಉಂಟಾದ ಅಡಚಣೆಯನ್ನು ಉಲ್ಲೇಖಿಸಿದ ಅಬ್ಬಾಸಿ, ಕೇವಲ ಎರಡು ದಿನಗಳಲ್ಲಿ ಭಾರತೀಯ ವಾಯುಯಾನದಲ್ಲಿ ಉಂಟಾದ ಅವ್ಯವಸ್ಥೆಯನ್ನು ಎತ್ತಿ ತೋರಿಸಿದರು, ಇನ್ನೂ 10 ದಿನಗಳ ಕಾಲ ಹೀಗೆ ಮುಂದುವರಿದರೆ, ಭಾರತದ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ತನ್ನದೇ ಆದ ಭದ್ರತಾ ಲೋಪಗಳನ್ನು ಸರಿಪಡಿಸುವ ಬದಲು ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ ಎಂದು ಅಬ್ಬಾಸಿ ಟೀಕಿಸಿದರು. ಭಾರತವು ವ್ಯಾಪಾರ ಮತ್ತು ನೀರು ಸರಬರಾಜನ್ನು ಸ್ಥಗಿತಗೊಳಿಸಿದ ನಂತರದ ಸಂಭವನೀಯ ಆರ್ಥಿಕ ಪರಿಣಾಮಗಳಿಗೆ ಪಾಕಿಸ್ತಾನ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ ಎಂದಿದ್ದಾರೆ.
ಈ ಮಧ್ಯೆ, ಪಾಕಿಸ್ತಾನ ಸೇನೆಯು ಸತತ ಮೂರನೇ ರಾತ್ರಿ ನಿಯಂತ್ರಣ ರೇಖೆಯಾದ್ಯಂತ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯ ಪಡೆಗಳು ಅವರಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡಿವೆ.
Advertisement