

ಇಸ್ಲಾಮಾಬಾದ್: ಭಯೋತ್ಪಾದನೆ, ಹಿಂದೂ ದ್ವೇಷಗಳನ್ನೇ ಒಡಲಲ್ಲಿಟ್ಟುಕೊಂಡು ಭಾರತದಿಂದ ಬೇರ್ಪಟ್ಟ ಪಾಕಿಸ್ತಾನದಲ್ಲಿ ಹಿಂದೂ ಧರ್ಮದ ಎರಡು ಪ್ರಮುಖ ಅಂಶಗಳು ಸಕಾರಾತ್ಮಕವಾಗಿ ಸುದ್ದಿಯಾಗುತ್ತಿರುವುದು ಅಚ್ಚರಿ ಮೂಡಿಸಿದೆ.
ಅದರಲ್ಲೂ ಪಾಕಿಸ್ತಾನದ ಶೈಕ್ಷಣಿಕ ವಲಯದಿಂದ ಈ ಸುದ್ದಿ ಮತ್ತಷ್ಟು ಅಚ್ಚರಿ ಮೂಡಿಸುತ್ತಿದೆ. ಲಾಹೋರ್ ವಿಶ್ವವಿದ್ಯಾನಿಲಯದ ಮ್ಯಾನೇಜ್ಮೆಂಟ್ ಸೈನ್ಸಸ್ (LUMS) ತರಗತಿಯೊಳಗೆ ಮಹಾಭಾರತ ಮತ್ತು ಭಗವದ್ಗೀತೆಯ ಭಾಗಗಳನ್ನು ಒಳಗೊಂಡಂತೆ ಸಂಸ್ಕೃತ ಶ್ಲೋಕಗಳು ಕೇಳಿಬಂದಿದ್ದು ಸಂಸ್ಥೆಯು ಐತಿಹಾಸಿಕ ಕ್ರಮದಲ್ಲಿ ಸಂಸ್ಕೃತ ಭಾಷೆಯನ್ನು ಔಪಚಾರಿಕವಾಗಿ ಕಲಿಸಲು ಪ್ರಾರಂಭಿಸಿದೆ.
ಮಹಾಭಾರತ ಟಿವಿ ಸರಣಿಯ ಐಕಾನಿಕ್ ಥೀಮ್ ಹಾಡಾದ "ಹೈ ಕಥಾ ಸಂಗ್ರಾಮ್ ಕಿ" ನ ಉರ್ದು ನಿರೂಪಣೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಸಂಸ್ಕೃತದ ಪುನರುಜ್ಜೀವನವಾಗುತ್ತಿದ್ದು, ಭಾಷೆಯ ಕುರಿತು ಮೂರು ತಿಂಗಳ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ.
2027 ರ ವೇಳೆಗೆ ಇದನ್ನು ಪೂರ್ಣ ವರ್ಷವಿಡೀ ನೀಡುವ ಯೋಜನೆಗಳೊಂದಿಗೆ ಸಂಸ್ಕೃತ ಭಾಷೆ, ಮಹಾಭಾರತ ಕಲಿಕೆ ಈಗ ಪೂರ್ಣಪ್ರಮಾಣದ ವಿಶ್ವವಿದ್ಯಾಲಯ ಕೋರ್ಸ್ ಆಗಿ ವಿಕಸನಗೊಂಡಿದೆ.
ಸಂಸ್ಕೃತ ಪುನರುಜ್ಜೀವನದ ಪ್ರಯತ್ನಗಳಲ್ಲಿ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸಮಾಜಶಾಸ್ತ್ರವನ್ನು ಕಲಿಸುವ ಪ್ರೊಫೆಸರ್ ಶಾಹಿದ್ ರಶೀದ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದಿ ಟ್ರಿಬ್ಯೂನ್ನ ವರದಿಯೊಂದು ತಿಳಿಸಿದೆ. ದಕ್ಷಿಣ ಏಷ್ಯಾ ಪ್ರದೇಶದ ತತ್ವಶಾಸ್ತ್ರ, ಸಾಹಿತ್ಯ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ರೂಪಿಸಿದ ಭಾಷೆಯ ಗಂಭೀರ ಅಧ್ಯಯನವನ್ನು ಪುನರುಜ್ಜೀವನಗೊಳಿಸುವತ್ತ ಉದ್ದೇಶಿಸಿರುವ ಈ ನಡೆಯನ್ನು ರಶೀದ್ "ಸಣ್ಣ ಆದರೆ ಪ್ರಮುಖ ಹೆಜ್ಜೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಶೀದ್ "ನಾವು ಅದನ್ನು ಏಕೆ ಕಲಿಯಬಾರದು? ಇದು ಈ ಇಡೀ ಪ್ರದೇಶವನ್ನು ಆವರಿಸಿರುವ ಭಾಷೆಯಾಗಿದೆ. ಸಂಸ್ಕೃತ ವ್ಯಾಕರಣದ ಪಿತಾಮಹ ಪಾಣಿನಿಯ ಗ್ರಾಮ ಇದ್ದದ್ದು ಇಂದಿನ ಪಾಕಿಸ್ತಾನದ ಭೂ ಪ್ರದೇಶದಲ್ಲಿಯೇ. ಸಿಂಧೂ ಕಣಿವೆಯ ಅವಧಿಯಲ್ಲಿ ಇಲ್ಲಿ ಬಹಳಷ್ಟು ಬರೆಯಲಾಗಿದೆ. ನಾವು ಅದನ್ನು ಅಳವಡಿಸಿಕೊಳ್ಳಬೇಕು. ಸಂಸ್ಕೃತ ನಮಗೂ ಸೇರಿದೆ; ಇದು ಯಾವುದೇ ಒಂದು ಧರ್ಮಕ್ಕೆ ಮಾತ್ರ ಸಂಬಂಧಿಸಿಲ್ಲ" ಎಂದು ರಶೀದ್ ದಿ ಟ್ರಿಬ್ಯೂನ್ಗೆ ತಿಳಿಸಿದ್ದಾರೆ.
ಸಂಸ್ಕೃತ ವ್ಯಾಕರಣಜ್ಞ ಪಾಣಿನಿ ಇಂದಿನ ಖೈಬರ್ ಪಖ್ತುಂಖ್ವಾ ಪ್ರಾಂತ್ಯವಾದ ಗಾಂಧಾರದಲ್ಲಿ ವಾಸಿಸುತ್ತಿದ್ದರು. ವಿದ್ಯಾರ್ಥಿಗಳು ಆರಂಭದಲ್ಲಿ ಸಂಸ್ಕೃತ ಬೆದರಿಸುವಂತಿರುತ್ತದೆ ಎಂದು ಭಾವಿಸಿದ್ದರು. ಆದರೆ ಶೀಘ್ರದಲ್ಲೇ ಅದರೆಡೆಗೆ ಆಕರ್ಷಿತರಾದರು ಎಂದು ರಶೀದ್ ಹೇಳಿದರು. LUMS ನಲ್ಲಿ ತಮ್ಮ ಮೊದಲ ವಾರದ ಬೋಧನೆಯ ಘಟನೆಯನ್ನು ವಿವರಿಸುತ್ತಾ, ಪ್ರಾಧ್ಯಾಪಕರು, "ನಾನು 'ಸುಭಾಷಿತಗಳು' (ಬುದ್ಧಿವಂತಿಕೆಯ ಪದ್ಯಗಳು) ಕಲಿಸುತ್ತಿದ್ದಾಗ, ಸಂಸ್ಕೃತದಿಂದ ಉರ್ದು ಎಷ್ಟು ಆಳವಾಗಿ ಪ್ರಭಾವಿತವಾಗಿದೆ ಎಂಬುದನ್ನು ತಿಳಿದು ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದರು. ಸಂಸ್ಕೃತ ಹಿಂದಿಗಿಂತ ಭಿನ್ನವಾಗಿದೆ ಎಂದು ಕೆಲವರಿಗೆ ತಿಳಿದಿರಲಿಲ್ಲ." ಎಂದು ರಶೀದ್ ಹೇಳಿದ್ದಾರೆ.
ಆದಾಗ್ಯೂ, ವಿದ್ಯಾರ್ಥಿಗಳು ಅದರ ತಾರ್ಕಿಕ ರಚನೆಯನ್ನು ಅರ್ಥಮಾಡಿಕೊಂಡಾಗ, ಅವರು ಭಾಷೆಯನ್ನು ಆನಂದಿಸಲು ಪ್ರಾರಂಭಿಸಿದರು ಎಂದು ರಶೀದ್ ಹೇಳಿದರು.
ವಿಶ್ವವಿದ್ಯಾನಿಲಯದ ಗುರ್ಮಾನಿ ಕೇಂದ್ರದ ನಿರ್ದೇಶಕ ಡಾ. ಅಲಿ ಉಸ್ಮಾನ್ ಖಾಸ್ಮಿ, ಪಾಕಿಸ್ತಾನವು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ದಾಖಲೆಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ, ಆದರೆ ದಶಕಗಳಿಂದ ಅದು ಶಿಕ್ಷಣ ತಜ್ಞರಿಂದ ಮುಟ್ಟಲ್ಪಟ್ಟಿಲ್ಲ ಎಂದು ಒತ್ತಿ ಹೇಳಿದರು.
ಆದಾಗ್ಯೂ, ವಿಷಯಗಳು ಬದಲಾಗಲಿವೆ ಎಂದು ಖಾಸ್ಮಿ ಒತ್ತಿ ಹೇಳಿದರು ಮತ್ತು ವಿಶ್ವವಿದ್ಯಾನಿಲಯವು ಸ್ಥಳೀಯ ವಿದ್ವಾಂಸರಿಗೆ ಸಂಸ್ಕೃತದಲ್ಲಿ ತರಬೇತಿ ನೀಡಲು ಯೋಜಿಸಿದೆ. ಮುಂಬರುವ ತಿಂಗಳುಗಳಲ್ಲಿ ಈ ಉಪಕ್ರಮವು ಜನಪ್ರಿಯತೆಯನ್ನು ಗಳಿಸುತ್ತದೆ ಎಂದು ಅವರು ಆಶಿಸಿದರು.
"10-15 ವರ್ಷಗಳಲ್ಲಿ, ಪಾಕಿಸ್ತಾನದಿಂದ ಗೀತಾ ಮತ್ತು ಮಹಾಭಾರತದ ವಿದ್ವಾಂಸರು ಹೊರಹೊಮ್ಮುವುದನ್ನು ನಾವು ನೋಡಬಹುದು" ಎಂದು ಖಾಸ್ಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement