'ನನ್ನ ದೇಶ, ಮನೆ ಯಾವುದೂ ಇಲ್ಲ, ಎಲ್ಲವೂ ಸುಟ್ಟುಹೋಗಿದೆ; ನನ್ನ ಹತ್ಯೆಗೂ ಸಂಚು': ಶೇಖ್ ಹಸೀನಾ
ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಕಳೆದ ಆಗಸ್ಟ್ನಲ್ಲಿ ದೇಶದಿಂದ ಪಲಾಯನ ಮಾಡುವಾಗ ತಾವು ಮತ್ತು ತಮ್ಮ ಸಹೋದರಿ ರೆಹಾನಾ ಅವರು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಬಗ್ಗೆ ಮಾತನಾಡಿರುವ ಆಡಿಯೋವನ್ನು ಅವರ ಅವಾಮಿ ಲೀಗ್ ಪಕ್ಷ ಆನ್ಲೈನ್ನಲ್ಲಿ ಹಂಚಿಕೊಂಡಿದೆ.
ರೆಕಾರ್ಡಿಂಗ್ನಲ್ಲಿ, 77 ವರ್ಷದ ನಾಯಕಿ ತನ್ನ ಜೀವ ಉಳಿಸಿದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ತನ್ನ ರಾಜಕೀಯ ವಿರೋಧಿಗಳು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.
"ರೆಹಾನಾ ಮತ್ತು ನಾನು ಬದುಕುಳಿದೆವು - ಕೇವಲ 20-25 ನಿಮಿಷಗಳ ಅಂತರದಲ್ಲಿ, ನಾವು ಸಾವಿನಿಂದ ಪಾರಾಗಿದ್ದೇವೆ," ಕಳೆದ ವರ್ಷ ನಡೆದ ಹತ್ಯೆ ಪ್ರಯತ್ನವು ನನ್ನ ವಿರುದ್ಧ ನಡೆದ ಮೊದಲ ಪಿತೂರಿಯಲ್ಲ. ತಮ್ಮ ಜೀವನದುದ್ದಕ್ಕೂ ಹಲವಾರು ಇಂತಹ ಹತ್ಯೆ ಪ್ರಯತ್ನಗಳು ನಡೆದಿವೆ ಎಂದು ಮಾಜಿ ಪ್ರಧಾನಿ ದೂರಿದ್ದಾರೆ.
"ಆಗಸ್ಟ್ 21 ರಂದು ನಡೆದ ಹತ್ಯೆಗಳಿಂದ ಬದುಕುಳಿಯುವುದು ಅಥವಾ ಆಗಸ್ಟ್ 5, 2024 ರಂದು ಕೋಟಲಿಪಾರದಲ್ಲಿ ನಡೆದ ಬೃಹತ್ ಬಾಂಬ್ನಿಂದ ಬದುಕುಳಿಯುವುದು ಅಲ್ಲಾಹನ ಇಚ್ಛೆಯಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ನಾನು ಬದುಕುಳಿಯುತ್ತಿರಲಿಲ್ಲ." "ಅವರು ನನ್ನನ್ನು ಕೊಲ್ಲಲು ಹೇಗೆ ಯೋಜಿಸಿದ್ದರು ಎಂಬುದನ್ನು ನೀವು ನಂತರ ನೋಡಿದ್ದೀರಿ" ಎಂದು ಹಸೀನಾ ಹೇಳಿದ್ದಾರೆ.
"ಆದಾಗ್ಯೂ, ನಾನು ಇನ್ನೂ ಜೀವಂತವಾಗಿರುವುದು ಅಲ್ಲಾಹನ ಕೃಪೆಯಿಂದ ಎಂದು ತೋರುತ್ತದೆ. ಏಕೆಂದರೆ ಅಲ್ಲಾಹನು ನಾನು ಇನ್ನೂ ಏನಾದರೂ ಮಾಡಬೇಕೆಂದು ಬಯಸುತ್ತಾನೆ" ಎಂದಿದ್ದಾರೆ.
ಪ್ರಸ್ತುತ ಭಾರತದಲ್ಲಿರು ಹಸೀನಾ ತಮ್ಮ ಸಂದೇಶದಲ್ಲಿ ಗಡಿಪಾರು ಕುರಿತು ಭಾವನಾತ್ಮಕ ಆಲೋಚನೆಗಳನ್ನು ಹಂಚಿಕೊಂಡಿದ್ದು, "ನಾನು ನನ್ನ ದೇಶವಿಲ್ಲದೆ ಇದ್ದೇನೆ. ನನ್ನ ಮನೆಯಿಲ್ಲದೆ ಇದ್ದೇನೆ. ಎಲ್ಲವೂ ಸುಟ್ಟುಹೋಗಿದೆ" ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಶೇಖ್ ಹಸೀನಾ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದೆ. ಅವರನ್ನು ವಾಂಟೆಡ್ ಎಂದು ಘೋಷಿಸಲಾಗಿದೆ. ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಭಾರತವನ್ನು ಕೋರಿದೆ. ಜನವರಿ 6 ರಂದು ಬಾಂಗ್ಲಾದೇಶದ ನ್ಯಾಯಾಲಯವು 77 ವರ್ಷದ ಹಸೀನಾ ವಿರುದ್ಧ ಎರಡನೇ ಬಂಧನ ವಾರಂಟ್ ಹೊರಡಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ