
ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ ಟೆಕ್ ವಲಯದ ದಿಗ್ಗಜರನ್ನು ನೀಡಿದ್ದರೆ, ಪಾಕಿಸ್ತಾನ ಉಗ್ರರನ್ನು ನೀಡಿದೆ. ಕಡಿಮೆ ದರ್ಜೆಯ ಚೀನೀ ಶಸ್ತ್ರಾಸ್ತ್ರಗಳೊಂದಿಗೆ ತನ್ನನ್ನು ತಾನು ಶಸ್ತ್ರಸಜ್ಜಿತಗೊಳಿಸುವಾಗ ವಿದೇಶದಲ್ಲಿ ಸಂತ್ರಸ್ತನ ಆಟವನ್ನು ಪಾಕಿಸ್ತಾನ ಆಡುತ್ತಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರಮೋದಿ ವಿರುದ್ಧದ ಭುಟ್ಟೋ ಟೀಕೆಗಳಿಗೆ ನೇರ ಪ್ರತಿಕ್ರಿಯೆ ನೀಡಿದರು. ಇದು ಈ ಎರಡು ದೇಶಗಳ ನಡುವೆ ಇರಬಹುದಾದಷ್ಟು ವ್ಯತ್ಯಾಸವಾಗಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಜಾಗತಿಕ ಮಾನ್ಯತೆ, ಮಿಲಿಟರಿ ಅವಲಂಬನೆಯನ್ನು ಅಣಕಿಸುವುದರೊದಿಗೆ ಭಾರತದ ಜಾಗತಿಕ ಸ್ಥಾನಮಾನವನ್ನು ಪ್ರತಿಪಾದಿಸಿದರು.
"ರಾಮ್ಜಿ ಯೂಸೆಫ್, 1993ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಬಾಂಬ್ ಹಾಕಿದ್ದ ಆರೋಪ, ಡೇವಿಡ್ ಕೋಲ್ಮನ್ ಹೆಡ್ಲಿ 26/11 ಪಿತೂರಿ ಆರೋಪವಿದೆ. ಇವರು ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ. ಈಗ ಭಾರತದ ಇಂದ್ರ ನೂಯಿ, ಸುಂದರ್ ಪಿಚೈ, ಅಜಯ್ ಬಂಗಾ, ಸತ್ಯ ನಾಡೆಲ್ಲಾ, ಕಾಶ್ ಪಟೇಲ್ ಅವರನ್ನು ನಾನು ಪರಿಚಯಿಸುವ ಅಗತ್ಯವಿಲ್ಲ. ಇದು ಅಮೆರಿಕಾದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯತ್ಯಾಸವಾಗಿದೆ. ಹೀಗಾಗಿ ಎರಡು ದಿನಗಳ ಟ್ರಿಪ್ ಗೆ ಬಂದಿರುವ ಭುಟ್ಟೋ, ಪಾಕಿಸ್ತಾನದ ಈ ಸಾಬೀತಾದ ದಾಖಲೆಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಅಲ್ಲಿಗೆ ಮಾತು ಮುಗಿಸದ ತೇಜಸ್ವಿ ಸೂರ್ಯ, ಕಡಿಮೆ ದರ್ಜೆಯ ಚೀನೀ ಶಸ್ತ್ರಾಸ್ತ್ರಗಳೊಂದಿಗೆ ತನ್ನನ್ನು ತಾನು ಶಸ್ತ್ರಸಜ್ಜಿತಗೊಳಿಸುವಾಗ ಪಾಕಿಸ್ತಾನವು ವಿದೇಶದಲ್ಲಿ ಸಂತ್ರಸ್ತನ ಆಟ ಆಡುತ್ತಿದೆ ಎಂದು ಅವರು ಆರೋಪಿಸಿದರು.
ಪಾಕಿಸ್ತಾನ ತನ್ನ ಮಿಲಿಟರಿ ಉಪಕರಣಗಳು ಸೇರಿದಂತೆ ಅಗ್ಗದ ಚೀನೀ ರಕ್ಷಣಾ ಸರಕುಗಳ ಆಮದನ್ನು ಅವಲಂಬಿಸಿದೆ. ಇದು ಯುದ್ಧಭೂಮಿಯಲ್ಲಿ ವಿಫಲವಾಗಿದೆ. "ಪಾಕಿಸ್ತಾನಕ್ಕೆ ಶೇ.81 ರಷ್ಟು ಮಿಲಿಟರಿ ಸಾಮಾಗ್ರಿಗಳು ಚೀನಾದಿಂದ ಬರುತ್ತದೆ. ಇದಕ್ಕೆ ಭಿನ್ನವಾಗಿ ಭಾರತದ ರಕ್ಷಣಾ ಆಮದುಗಳು ವೈವಿಧ್ಯಮಯವಾಗಿವೆ ಮತ್ತು ಸ್ಥಳೀಯವಾಗಿ ಬೆಳೆಯುತ್ತಿವೆ. ನಾವು ಯುನೈಟೆಡ್ ಸ್ಟೇಟ್ಸ್,, ಫ್ರಾನ್ಸ್ ಇಸ್ರೇಲ್ನಿಂದ ಖರೀದಿಸಿದ ಮಿಲಿಟರಿ ಸರಕುಗಳನ್ನು ಹೊಂದಿದ್ದೇವೆ. ಪ್ರಾಯೋಗಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಪಾಕಿಸ್ತಾನ ಶಾಂತಿ ಬಯಸುವ ರಾಷ್ಟ್ರವೆಂದು ಬಿಂಬಿಸುವ ಭುಟ್ಟೋ ಅವರ ಹೇಳಿಕೆಗೆ ತಿರುಗೇಟು ನೀಡಿದ ಸೂರ್ಯ, ಇದು ದೆವ್ವದ ಧರ್ಮಗ್ರಂಥಗಳಿಂದ ಉಲ್ಲೇಖಿಸಿದಂತಿದೆ. ಫೀಲ್ಡ್ ಜನರಲ್ಗಳನ್ನು ಫೀಲ್ಡ್ ಮಾರ್ಷಲ್ಗೆ ಉತ್ತೇಜಿಸುವ ಮೂಲಕ ನಕಲಿ ವೀರರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ದೇಶಕ್ಕೆ, ನಿಜವಾದ ನಾಯಕರು ಹೇಗಿದ್ದಾರೆಂದು ಅವರಿಗೆ ತಿಳಿದಿಲ್ಲ. ತಮ್ಮ ಭೇಟಿಯ ಇತ್ತೀಚಿನ ಎಲ್ಲಾ ರಾಜತಾಂತ್ರಿಕ ಸಭೆಗಳಲ್ಲಿ, "ಪಾಕಿಸ್ತಾನದ ಬಗ್ಗೆ ಸಂಪೂರ್ಣವಾಗಿ ಯಾವುದೇ ಸಹಾನುಭೂತಿ ಇರಲಿಲ್ಲ. ಭಾರತದ ನಿಲುವಿಗೆ ಬೆಂಬಲ ವ್ಯಕ್ತವಾಗಿರುವುದಾಗಿ ಹೇಳಿದರು.
Advertisement