
ಕಚ್ಚಿ: ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ಹೈರಾಣಾಗಿ ಹೋಗಿರುವ ಪಾಕಿಸ್ತಾನ ಸೇನೆಗೆ ಅತ್ತ ಬಲೂಚಿಸ್ತಾನದಲ್ಲೂ ಭಾರಿ ಆಘಾತ ಎದುರಾಗಿದ್ದು, ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ನಡೆಸಿದ ಐಇಡಿ ದಾಳಿಯಲ್ಲಿ ಬರೊಬ್ಬರಿ 14 ಸೈನಿಕರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು, ಮಾತ್ರವಲ್ಲದೇ ದಾಳಿಯ ವೀಡಿಯೊ ಕೂಡ ಬಿಡುಗಡೆ ಮಾಡಿದೆ.
ಬಲೂಚಿಸ್ತಾನದ ಕಚ್ಚಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾ ಸೈನಿಕರ ವಾಹನವು ಕಣಿವೆಯಲ್ಲಿ ಚಲಿಸುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಲಾಗಿದೆ.
ಈ ವೇಳೆ ವಾಹನದಲ್ಲಿದ್ದ 14 ಮಂದಿ ಪಾಕಿಸ್ತಾನ ಸೈನಿಕರು ಸ್ಫೋಟದಲ್ಲಿ ಛದ್ರಗೊಂಡಿದ್ದಾರೆ. ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಬೆಂಗಾವಲು ವಾಹನವೇ ಟಾರ್ಗೆಟ್
ಇನ್ನು ಕಚ್ಚಿಯಲ್ಲಿ ಪಾಕಿಸ್ತಾನ ಸೇನಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡ ಬಿಎಲ್ಎ ಈ ದಾಳಿ ನಡೆಸಿದೆ. "ಕಚ್ಚಿ ಜಿಲ್ಲೆಯ ಮಾಚ್ನ ಸಾಮಾನ್ಯ ಪ್ರದೇಶದಲ್ಲಿ ಬಲೂಚಿಸ್ತಾನ ಲಿಬರೇಶನ್ ಆರ್ಮಿಗೆ ಸೇರಿದ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನದೊಂದಿಗೆ ಭದ್ರತಾ ಪಡೆಗಳ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು" ಎಂದು ಪಾಕಿಸ್ತಾನ ಸೇನೆ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇಡೀ ವಾಹನವೇ ಸ್ಫೋಟ, ದೇಹಗಳು ಛಿದ್ರ.. ಛಿದ್ರ
ಇನ್ನು ವಿಡಿಯೋದಲ್ಲಿರುವಂತೆ 14 ಮಂದಿ ಸೈನಿಕರನ್ನು ಹೊತ್ತು ಸಾಗುತ್ತಿದ್ದ ಪಾಕ್ ಸೇನಾ ಬೆಂಗಾವಲು ವಾಹನವನ್ನು ಗುರಿಯಾರಿಸಿಕೊಂಡು ಬಿಎಲ್ ಐಇಡಿ ದಾಳಿ ನಡೆಸಿದೆ. ವಾಹನವು ತಿರುವಿನಲ್ಲಿ ಚಲಿಸುತ್ತಿದ್ದಂತೆಯೇ ಐಇಡಿ ಬಾಂಬ್ ಸ್ಫೋಟಗೊಂಡಿದ್ದು ವಾಹನದಲ್ಲಿದ್ದ 14 ಮಂದಿ ಪಾಕ್ ಸೈನಿಕರ ದೇಹ ಛಿದ್ರಗೊಂಡಿದೆ. ಸ್ಫೋಟದ ತೀವ್ರತೆಗೆ ವಾಹನದಲ್ಲಿದ್ದ ಎಲ್ಲ 14 ಮಂದಿ ಸೈನಿಕರು ಹತರಾಗಿದ್ದಾರೆ. ಸತ್ತವರಲ್ಲಿ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಪಾಕ್ ಸೇನೆಯಿಂದ ಕಾರ್ಯಾಚರಣೆ
ಇತ್ತ ಬಲೂಚಿಸ್ತಾನ ದಾಳಿಯಿಂದ ಕೆರಳಿ ಕೆಂಡವಾಗಿರುವ ಪಾಕಿಸ್ತಾನ ಸೇನೆ ಇದೀಗ ಬಿಎಲ್ಎ ವಿರುದ್ಧ ಆಪರೇಷನ್ ಸ್ಯಾನಿಟೈಸೇಷನ್ ಆರಂಭಿಸಿದೆ. ಈ ಪ್ರದೇಶದಲ್ಲಿ ಉಳಿದಿರುವ ಯಾವುದೇ ಉಗ್ರರನ್ನು ನಿರ್ಮೂಲನೆ ಮಾಡಲು ಪಾಕಿಸ್ತಾನ ಸೇನೆಯು ಆ ಪ್ರದೇಶದಲ್ಲಿ ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಹೇಳಿದೆ.
ಪಾಕಿಸ್ತಾನದ ಭದ್ರತಾ ಪಡೆಗಳು ಕೆಚ್ ಮತ್ತು ಜಿಯಾರತ್ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಬಲೂಚಿಸ್ತಾನದಲ್ಲಿ 10 ಭಯೋತ್ಪಾದಕರನ್ನು ಕೊಂದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ. ಪ್ರಾಂತ್ಯದಲ್ಲಿ ಉಗ್ರಗಾಮಿ ಗುಂಪುಗಳ ವಿರುದ್ಧ ವ್ಯಾಪಕವಾದ ದಮನ ಕಾರ್ಯಾಚರಣೆಯ ಭಾಗವಾಗಿ ಈ ಹತ್ಯೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BLA ಹಿಂಸಾತ್ಮಕ ದಾಳಿ ಇತಿಹಾಸ
ಬಿಎಲ್ಎ ಹಿಂಸಾತ್ಮಕ ದಾಳಿಯ ಇತಿಹಾಸ ಹೊಂದಿದೆ. ಈ ಹಿಂದೆ ಹಲವಾರು ಇದೇ ರೀತಿಯ ದಾಳಿಗಳನ್ನು ನಡೆಸಿದೆ. ಮಾರ್ಚ್ನಲ್ಲಿ, ಬಿಎಲ್ ಎ ಗುಂಪು ಕ್ವೆಟ್ಟಾದಿಂದ ಪೇಶಾವರಕ್ಕೆ 440 ಜನರೊಂದಿಗೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ಎಂಬ ಪ್ರಯಾಣಿಕ ರೈಲನ್ನು ಅಪಹರಿಸಿತು. ಈ ಘಟನೆಯ ಪರಿಣಾಮವಾಗಿ 21 ನಾಗರಿಕರು ಮತ್ತು ನಾಲ್ವರು ಪಾಕ್ ಸೈನಿಕರು ಸಾವನ್ನಪ್ಪಿದರು. ಬಲೂಚಿಸ್ತಾನವು ಸುಮಾರು 20 ವರ್ಷಗಳಿಂದ ನಿರಂತರ ಅಶಾಂತಿಯನ್ನು ಎದುರಿಸುತ್ತಿದೆ. ಪಾಕಿಸ್ತಾನದ ಫೆಡರಲ್ ಸರ್ಕಾರವು ಈ ಪ್ರದೇಶದಲ್ಲಿ ನ್ಯಾಯಯುತ ಪರಿಹಾರ ಅಥವಾ ಅಭಿವೃದ್ಧಿಯಿಲ್ಲದೆ ಪ್ರಾಂತ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಣೆ ಮಾಡುತ್ತಿದೆ ಎಂದು ಜನಾಂಗೀಯ ಬಲೂಚ್ ಗುಂಪುಗಳು ಆರೋಪಿಸಿವೆ.
Advertisement