
ಪಾಕಿಸ್ತಾನವು ಭಾರತದ ಗಡಿಯಲ್ಲಿ ನಿರಂತರವಾಗಿ ಡ್ರೋನ್ ದಾಳಿಯಲ್ಲಿ ತೊಡಗಿದೆ. ಆದರೆ ಭಾರತೀಯ ಸೇನೆಯು ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡುತ್ತಿದೆ. ಇನ್ನು ಪಾಕಿಸ್ತಾನಕ್ಕೆ ಮತ್ತೊಂದು ಭಾಗದಲ್ಲೂ ದೊಡ್ಡ ಹೊಡೆತ ಬೀಳುತ್ತಿದೆ. ಹೌದು... ಬಲೂಚಿಸ್ತಾನದಲ್ಲಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನಿ ಸೇನೆಯ ವಿರುದ್ಧ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಬಲೂಚಿಸ್ತಾನದ 39 ವಿವಿಧ ಸ್ಥಳಗಳ ಮೇಲೆ ಬಿಎಲ್ಎ ದಾಳಿ ಮಾಡಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ವಕ್ತಾರ ಜಿಯಾಂಡ್ ಬಲೂಚ್ ಹೇಳಿಕೆ ನೀಡಿದ್ದಾರೆ. ಬಿಎಲ್ಎ ಪ್ರಕಾರ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಬಿಎಲ್ಎ ಪ್ರಮುಖ ಹೆದ್ದಾರಿಗಳನ್ನು ಗುರಿಯಾಗಿಸಿಕೊಂಡಿದೆ. ಪಾಕಿಸ್ತಾನಿ ಪೊಲೀಸ್ ಠಾಣೆಗಳು ಮತ್ತು ಪಾಕಿಸ್ತಾನಿ ಸೇನೆಯ ಮೇಲೆ ದಾಳಿ ನಡೆಸಲಾಗುತ್ತಿದೆ ಮತ್ತು ಅವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನಿ ಪೊಲೀಸ್ ಠಾಣೆಗಳು, ಪ್ರಮುಖ ಹೆದ್ದಾರಿಗಳು, ಸೇನಾ ಗೂಢಚಾರರು, ಪಾಕಿಸ್ತಾನಿ ಸೇನಾ ಶಸ್ತ್ರಾಸ್ತ್ರಗಳು ಮತ್ತು ಅವರ ಬೆಂಗಾವಲು ಪಡೆಗಳನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ ಎಂದು ಬಿಎಲ್ಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಮೂರು ದಿನಗಳಲ್ಲಿ (ಮೇ 7-9), ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಹಲವಾರು ಮಾರಕ ದಾಳಿಗಳನ್ನು ನಡೆಸಿದೆ. ಪಾಕಿಸ್ತಾನಿ ಸೇನೆಗೆ ಭಾರೀ ನಷ್ಟವಾಗಿದೆ.
ಮೇ 7ರಂದು, ಬೋಲನ್ನ ಮಾಚ್-ಕಚ್ಚಿ ಜಿಲ್ಲೆಯಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಬಿಎಲ್ಎ ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿ ನಡೆಸಿತು. ಇದರಲ್ಲಿ 12 ಸೈನಿಕರು ಸಾವನ್ನಪ್ಪಿದ್ದಾರೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಭಾಗಿಯಾಗಿದ್ದರು. ಮೇ 8 ರಂದು ಕ್ವೆಟ್ಟಾದಲ್ಲಿನ ಮಿಲಿಟರಿ ನೆಲೆಗಳು ಮತ್ತು ಭದ್ರತಾ ಠಾಣೆಗಳ ಮೇಲೆ ಬಿಎಲ್ಎ ಆರು ದಾಳಿಗಳನ್ನು ನಡೆಸಿತು. ಈ ದಾಳಿಗಳಲ್ಲಿ ಅನೇಕ ಸೈನಿಕರು ಸಾವನ್ನಪ್ಪಿದ್ದಾರೆ. ಬಲೂಚ್ ಜನರ ಮೇಲೆ ನಡೆದ ದೌರ್ಜನ್ಯದ ಪರಿಣಾಮ ನಮ್ಮ ಕ್ರಮ ಎಂದು ಬಿಎಲ್ಎ ಹೇಳುತ್ತದೆ.
ಪಾಕಿಸ್ತಾನ ಇಬ್ಬಾಗ?
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಬಲೂಚ್ ಬರಹಗಾರ ಮೀರ್ ಯಾರ್ ಬಲೂಚ್ ಅವರು ಪಾಕಿಸ್ತಾನದಿಂದ ಬಲೂಚಿಸ್ತಾನದ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾರೆ. ನವದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ತೆರೆಯಲು ಅವಕಾಶ ನೀಡಬೇಕೆಂದು ಅವರು ಭಾರತ ಸರ್ಕಾರವನ್ನು ಕೋರಿದ್ದಾರೆ. ಬಲೂಚ್ ಜನರ ಪರವಾಗಿ ವಕಾಲತ್ತು ವಹಿಸುವವರಿಗೆ ಹೆಸರುವಾಸಿಯಾದ ಮಿರ್ ಯಾರ್ ಬಲೂಚ್, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್ಗಳಲ್ಲಿ ಈ ಘೋಷಣೆ ಮಾಡಿದ್ದಾರೆ. ಬಲೂಚಿಸ್ತಾನಕ್ಕೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ಅವರು ವಿಶ್ವಸಂಸ್ಥೆಯನ್ನು ವಿನಂತಿಸಿದ್ದು ಪಾಕಿಸ್ತಾನಿ ಸೈನ್ಯವು ಆ ಪ್ರದೇಶವನ್ನು ತೊರೆಯಬೇಕೆಂದು ಒತ್ತಾಯಿಸಿದರು.
Advertisement