Gen Asim Munir
ಅಸಿಮ್ ಮುನೀರ್

Operation Sindoor: ಸೋತರೂ, ಪಾಕ್ ಸೇನಾ ಮುಖ್ಯಸ್ಥ 'ಅಸಿಮ್ ಮುನೀರ್ ಗೆ 'ಫೀಲ್ಡ್ ಮಾರ್ಷಲ್' ಆಗಿ ಬಡ್ತಿ!

ಭಾರತದೊಂದಿಗಿನ ಇತ್ತೀಚಿನ ಸೇನಾ ಸಂಘರ್ಷದ ಸಂದರ್ಭದಲ್ಲಿ ಪಾಕ್ ಸಶಸ್ತ್ರ ಪಡೆಗಳನ್ನು 'ಯಶಸ್ವಿಯಾಗಿ' ಮುನ್ನಡೆಸಿದ್ದಕ್ಕಾಗಿ ಅಸಿಮ್ ಮುನೀರ್ ಗೆ ಬಡ್ತಿ ನೀಡಲಾಗಿದೆ ಎಂದು ಹೇಳಲಾಗಿದೆ.
Published on

ನವದೆಹಲಿ: ಭಾರತದೊಂದಿಗೆ 'ಆಪರೇಷನ್ ಸಿಂಧೂರ' ಸೇನಾ ಕಾರ್ಯಾಚರಣೆ ವೇಳೆಯಲ್ಲಿ ಸೋತರೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ಸೇನೆಯಲ್ಲಿನ ಅತ್ಯುನ್ನತ ಪದವಿ 'ಫೀಲ್ಡ್ ಮಾರ್ಷಲ್ 'ಆಗಿ ಬಡ್ತಿ ನೀಡಲಾಗಿದೆ.

ಸಾಮಾನ್ಯವಾಗಿ ಅಪರೂಪದ ಸಂದರ್ಭಗಳಲ್ಲಿ, ವೃತ್ತಿಜೀವನದಲ್ಲಿ ಅಗಾಧ ಸಾಧನೆಗಾಗಿ ಈ ಪದವಿ ನೀಡಲಾಗುತ್ತದೆ. ಭಾರತದೊಂದಿಗಿನ ಇತ್ತೀಚಿನ ಸೇನಾ ಸಂಘರ್ಷದ ಸಂದರ್ಭದಲ್ಲಿ ಪಾಕ್ ಸಶಸ್ತ್ರ ಪಡೆಗಳನ್ನು 'ಯಶಸ್ವಿಯಾಗಿ' ಮುನ್ನಡೆಸಿದ್ದಕ್ಕಾಗಿ ಅಸಿಮ್ ಮುನೀರ್ ಗೆ ಬಡ್ತಿ ನೀಡಲಾಗಿದೆ ಎಂದು ಹೇಳಲಾಗಿದೆ.

ಪ್ರಧಾನಿ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಧಾರ:

ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರಲ್ ಅಸೀಮ್ ಮುನೀರ್ ಅವರನ್ನು ದೇಶದ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡುವ ಮಹತ್ವದ ನಿರ್ಧಾರವನ್ನು ಸಂಪುಟ ಕೈಗೊಂಡಿದೆ.

ಭಾರತದೊಂದಿಗಿನ ಸಂಘರ್ಷದಲ್ಲಿ ಅವರ ಆದರ್ಶಪ್ರಾಯ ಪಾತ್ರಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪಿಟಿವಿ ವರದಿ ಮಾಡಿದೆ.

ಪಹಲ್ಗಾಮ್ ದಾಳಿಗೆ ಮುನೀರ್ ಪ್ರಚೋದನಾಕಾರಿ ಭಾಷಣ ಕಾರಣ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿ ಮತ್ತು 26 ಜನರ ಹತ್ಯೆಗೆ ಜನರಲ್ ಅಸಿಮ್ ಮುನೀರ್ ಅವರ ಪ್ರಚೋದಕನಾಕಾರಿ ಮತ್ತು ಆಘಾತಕಾರಿ ಧಾರ್ಮಿಕ ಪ್ರೇರಿತ ಭಾಷಣವೇ ಕಾರಣ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಪಾಕ್ ನೊಂದಿಗೆ ನಂಟು ಹೊಂದಿರುವ ನಿಷೇಧಿತ ಲಷ್ಕರ್-ಎ-ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿ ನಡೆಸಿತ್ತು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ 9 ಉಗ್ರರ ನೆಲೆ ಧ್ವಂಸ:

ಇದಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಡಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಿಖರವಾದ ಕ್ಷಿಪಣಿ ದಾಳಿಯ ಮೂಲಕ ಭಾರತ ನಾಶಪಡಿಸಿತ್ತು. 9 ಪ್ರಮುಖ ಉಗ್ರರ ಶಿಬಿರಗಳು ಮತ್ತಿತರ ಮೂಲಸೌಕರ್ಯಗಳನ್ನು ನಾಶಪಡಿಸಲಾಗಿತ್ತು.

ನಂತರ ಪಾಕ್ ಸೇನಾ ಮುಖ್ಯಸ್ಥರ ನಿರ್ದೇಶನದಂತೆ ಭಾರತದ ಸೇನಾ, ನಾಗರಿಕ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ನಡೆಸಿದ ಕ್ಷಿಪಣಿ, ಡ್ರೋನ್ ದಾಳಿಯನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಹೊಡೆದುರುಳಿಸಿತ್ತು.

 Gen Asim Munir
ಮೇ ಅಂತ್ಯದೊಳಗೆ ಸೇನಾಪಡೆ ಹಿಂಪಡೆಯಲು ಪಾಕಿಸ್ತಾನ, ಭಾರತ ಒಪ್ಪಿಗೆ: ಭದ್ರತಾ ಅಧಿಕಾರಿ ಮಾಹಿತಿ

8 ವಾಯನೆಲೆ ಧ್ವಂಸ, 13 ಪಾಕ್ ಸೈನಿಕರ ಸಾವು: ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 8 ವಾಯುನೆಲೆಗಳಿಗೆ ವ್ಯಾಪಕ ಹಾನಿಯಾಗಿತ್ತು. 13 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದರು. ಬಳಿಕ ಪಾಕಿಸ್ತಾನದ DGMO ಭಾರತದ DGMO ಗೆ ದೂರವಾಣಿ ಮೂಲಕ ಮಾತನಾಡಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ಬೇಡಿಕೊಂಡಿತ್ತು. ಅಲ್ಲದೇ ಭಾರತದ ದಾಳಿಯಿಂದ ಪಾಕಿಸ್ತಾನದಲ್ಲಿ ಆಗಿರುವ ನಷ್ಟದ ಕುರಿತು ವಿಡಿಯೋ, ಫೋಟೋಗಳೊಂದಿಗೆ ಪಾಕಿಸ್ತಾನ ಕೂಡಾ ಮಾಹಿತಿ ಹಂಚಿಕೊಂಡಿತ್ತು.

ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ: ಇಷ್ಟಾದರೂ ಈಗ 'ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬಂತೆ ಭಾರತದೊಂದಿಗಿನ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಸೇನೆ ಮುನ್ನಡೆಸಿದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಗೆ 'ಫೀಲ್ಡ್ ಮಾರ್ಷಲ್' ಆಗಿ ಬಡ್ತಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com