
ಬರ್ಲಿನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಉದ್ವಿಗ್ನತೆ 'ಕಾಶ್ಮೀರದಲ್ಲಿನ ಸಂಘರ್ಷವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ರತಿಪಾದಿಸಿದ್ದಾರೆ. ಅಂತಹ ವಿವರಣೆಯು ಪಹಲ್ಗಾಮ್ ದಾಳಿಯ ಅಪರಾಧಿಗಳು ಮತ್ತು ಸಂತ್ರಸ್ತರನ್ನು ಒಂದೇ ಮಟ್ಟದಲ್ಲಿ ಇರಿಸಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ಬರ್ಲಿನ್ನಲ್ಲಿರುವ ಜರ್ಮನ್ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಜೈಶಂಕರ್, ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರವಾಸೋದ್ಯಮ ವಲಯವನ್ನು ನಾಶಪಡಿಸುವ, ಭಯವನ್ನು ಸೃಷ್ಟಿಸುವ ಮತ್ತು ಧರ್ಮಗಳ ನಡುವೆ ದ್ವೇಷ ಮೂಡಿಸುವ ಉದ್ದೇಶದೊಂದಿಗೆ ಭಯಾನಕ ರೀತಿಯಲ್ಲಿ ಪಹಲ್ಗಾಮ್ ದಾಳಿ ನಡೆಸಲಾಗಿದೆ ಎಂದರು.
ಕಾಶ್ಮೀರ ಸಂಘರ್ಷಕುರಿತು ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಮೊದಲನೆಯದಾಗಿ, ಇದು ಕಾಶ್ಮೀರದಲ್ಲಿ ನಡೆದ ಸಂಘರ್ಷವಲ್ಲ. ಇದು ಭಯೋತ್ಪಾದಕ ದಾಳಿಯಾಗಿದೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪ್ರದೇಶವನ್ನು ಮಾತ್ರವಲ್ಲದೆ ಭಾರತದ ಇತರ ಭಾಗಗಳನ್ನೂ ಗುರಿಯಾಗಿಸಿಕೊಂಡು ದಾಳಿಯ ಭಾಗವಾಗಿದೆ ಎಂದರು.
ಭಾರತ ಮತ್ತು ಪಾಕ್ ಬಿಕ್ಕಟ್ಟನ್ನು ಕಾಶ್ಮೀರದಲ್ಲಿನ ಸಂಘರ್ಷ ಎಂದು ಬಿಂಬಿಸಿದಾಗ, ನಿಜವಾಗಿಯೂ ಅಪರಾಧಿಗಳು ಮತ್ತು ಸಂತ್ರಸ್ತರನ್ನು ಒಂದೇ ಮಟ್ಟದಲ್ಲಿ ಇರಿಸಿದಂತೆ ಆಗುತ್ತದೆ. ಆದ್ದರಿಂದ ಇದು ಭಯಾನಕ, ವಿಶೇಷವಾಗಿ ಕ್ರೂರ ಭಯೋತ್ಪಾದಕ ದಾಳಿಯಾಗಿದೆ. ಏಕೆಂದರೆ, ಇದು ಭಯದ ಮನೋವಿಕಾರವನ್ನು ಸೃಷ್ಟಿಸಲು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಆರ್ಥಿಕತೆಯನ್ನು ನಾಶಮಾಡಿಸುವ ಉದ್ದೇಶ ಹೊಂದಿತ್ತು ಎಂದು ಅವರು ಹೇಳಿದರು.
ನೆದರ್ಲ್ಯಾಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿಯ ಮೂರು ರಾಷ್ಟ್ರಗಳ ಪ್ರವಾಸದ ಮೂರನೇ ಮತ್ತು ಅಂತಿಮ ಹಂತದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರು ಬರ್ಲಿನ್ನಲ್ಲಿದ್ದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಡಿ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿತು.
ಭಾರತದ ದಾಳಿ ನಂತರ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿ ವಿಫಲವಾಗಿತ್ತು. ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿತ್ತು.
Advertisement