

ಢಾಕಾ: ಮಾನವ ಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT-BD) ದೋಷಿ ಎಂದು ತೀರ್ಪು ನೀಡಿದ್ದು ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ತ್ರಿಸದಸ್ಯ ನ್ಯಾಯಪೀಠವು ಶೇಖ್ ಹಸೀನಾ ಅವರ ಮೇಲಿರುವ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದ್ದು ಶೇಖ್ ಹಸೀನಾ ಮಾನವ ಹಕ್ಕುಗಳ ಅಪರಾಧ ಎಸಗಿದ್ದಾರೆ. ಇದು ಗರಿಷ್ಠ ಶಿಕ್ಷೆಗೆ ಅರ್ಹವಾಗಿರುವ ಪ್ರಕರಣ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ದೇಶವ್ಯಾಪಕವಾಗಿ ಭುಗಿಲೆದ್ದ ದಂಗೆಗಳ ಮೇಲಿನ ‘ಮಾರಕ ದಮನ’ಕ್ಕೆ ಹಸೀನಾ ನೇರ ಸೂಚನೆ ನೀಡಿದ್ದಾಗಿ ನ್ಯಾಯಾಲಯವು ಹೇಳಿದೆ. ಶೇಖ್ ಹಸೀನಾ ಅವರ ಈ ನಡೆಯಿಂದ ಬಾಂಗ್ಲಾದೇಶದಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ನೂರಾರು ಪ್ರಜೆಗಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಶೇಖ್ ಹಸೀನಾರನ್ನು ಪ್ರಮುಖ ಆರೋಪಿಯಾಗಿಸಲಾಗಿತ್ತು.
ಈ ಆದೇಶಗಳನ್ನು ಹೊರಡಿಸುವ ಮೂಲಕ ಶೇಖ್ ಹಸೀನಾ ಮತ್ತು ಪೊಲೀಸ್ ಐಜಿ ಅವರ ನಿಷ್ಕ್ರಿಯತೆಯ ಮೂಲಕ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆಗಳು ಪ್ರಧಾನಿ ಶೇಖ್ ಹಸೀನಾ ಅವರ ಆದೇಶ ಮತ್ತು ಅವರ ಅರಿವುನಲ್ಲೇ ನಡೆದಿದೆ. ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಕೋರ್ಟ್ ಹೇಳಿದೆ.
ಇದೀಗ ತಿಂಗಳುಗಳ ಕಾಲ ನಡೆದ ವಿಚಾರಣೆಯಲ್ಲಿ ಉತ್ಪಾದಿಸಲಾದ ಸಾಕ್ಷ್ಯಗಳು, ಭದ್ರತಾ ಸಿಬ್ಬಂದಿಯ ಹೇಳಿಕೆಗಳು ಮತ್ತು ತನಿಖಾ ವರದಿಗಳ ಆಧಾರದಲ್ಲಿ ನ್ಯಾಯಾಲಯವು ಹಸೀನಾ ಅವರ ಪಾತ್ರವನ್ನು ಉಲ್ಲೇಖಿಸಿದೆ. ಪ್ರತಿಭಟನೆಗಳನ್ನು ಕುಂಠಿತಗೊಳಿಸುವ ಹೆಸರಿನಲ್ಲಿ ಭದ್ರತಾ ಪಡೆಗಳು ಅತಿಯಾದ ಬಲಪ್ರಯೋಗಕ್ಕೆ ಮುಂದಾಗಿದ್ದವು ಎಂಬ ವಿಚಾರವನ್ನು ನ್ಯಾಯಾಲಯ ವಿಶೇಷವಾಗಿ ಉಲ್ಲೇಖಿಸಿದೆ.
ಶೇಖ್ ಹಸೀನಾ ಮಾತ್ರವಲ್ಲದೇ ಅವರ ಆಪ್ತರಾಗಿದ್ದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರನ್ನೂ ಕೋರ್ಟ್ ದೋಷಿ ಎಂದು ಹೇಳಿದೆ.
ಐಸಿಟಿ ನೀಡಿರುವ ವರದಿ ಪ್ರಕಾರ, 2024ರ ಜುಲೈನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಹಸೀನಾ ಸರ್ಕಾರವು ಭದ್ರತಾ ಪಡೆಗಳಿಗೆ ಅತಿಯಾದ ಬಲಪ್ರಯೋಗಕ್ಕೆ ಅನುಮತಿ ನೀಡಿರುವುದು ದಾಖಲಾಗಿದೆ. ಈ ಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಪ್ರತಿಭಟನೆಗಳ ದಮನದ ಕ್ರಮ ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ದಂಗೆಯ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಕೈಗೊಂಡಿದ್ದ ಐಸಿಟಿ ಹಲವು ತಿಂಗಳ ವಿಚಾರಣೆಯ ನಂತರ ಇಂದು ಅಂತಿಮ ತೀರ್ಪು ಪ್ರಕಟಿಸಿದೆ.
ಪಿತೂರಿ ಎಂದ ಅವಾಮಿ ಲೀಗ್
ಇನ್ನು ಈ ತೀರ್ಪಿನ ವಿರುದ್ಧ ಕೆಂಡಕಾರಿರುವ ಅವಾಮಿ ಲೀಗ್ ಪಕ್ಷ ಹಸೀನಾ ವಿರುದ್ಧದ ಪ್ರಕರಣಗಳನ್ನು ಪಿತೂರಿ ಎಂದು ಕರೆದಿದೆ. ಹಸೀನಾ ಮತ್ತು ಖಾನ್ ವಿಚಾರಣೆಗೆ ಹಾಜರಾಗದ ಕಾರಣ 54 ಸಾಕ್ಷ್ಯಗಳನ್ನು ಪರಿಶೀಲಿಸಿ, ಆರೋಪಿಗಳ ಅನುಪಸ್ಥಿತಿಯಲ್ಲೇ ಅಕ್ಟೋಬರ್ 23ರಂದು ವಿಚಾರಣೆ ಪೂರ್ಣಗೊಳಿಸಲಾಗಿತ್ತು. ಆರೋಪಿಗಳಿಗೆ ಮರಣ ದಂಡನೆಯನ್ನೇ ವಿಧಿಸಬೇಕು ಎಂದು ನ್ಯಾಯ ಮಂಡಳಿಯ ವಕೀಲರು ವಾದ ಮಂಡಿಸಿದ್ದರು. ತೀರ್ಪು ಪ್ರಕಟವಾದ ನಂತರ ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Advertisement