

ಇಸ್ಲಾಮಾಬಾದ್: ಅಮೆರಿಕಾ ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ಅವರು ಇರಾನ್ ಜೊತೆ ನಡೆದ ಇತ್ತೀಚಿನ ಮಾತುಕತೆಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದು, ಶಾಂತಿ ಮಾತುಕತೆಯಲ್ಲಿ ಪ್ರಗತಿ ಸಾಧಿಸಿದ್ದೇವೆ, ಮುಂದಿನ ನಿರ್ಧಾರ ಇರಾನ್ ಕೈಯಲ್ಲಿದೆ ಎಂದು ಹೇಳಿದ್ದಾರೆ.
ವಾರಾಂತ್ಯದಲ್ಲಿ ಇಸ್ಲಾಮಾಬಾದ್ನಲ್ಲಿ ಸುಮಾರು 21 ಗಂಟೆಗಳ ಕಾಲ ನಡೆದ ಉನ್ನತ ಮಟ್ಟದ ಮಾತುಕತೆಗಳು ಅಂತಿಮ ಒಪ್ಪಂದವಿಲ್ಲದೇ ಮುಕ್ತಾಯವಾದರೂ, ಎರಡೂ ರಾಷ್ಟ್ರಗಳ ನಡುವೆ ಕೆಲವೊಂದು ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿವೆ ಎಂದು ವಾನ್ಸ್ ಹೇಳಿದ್ದಾರೆ.
ಶಾಂತಿ ಮಾತುಕತೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ವಿಷಯಗಳಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಇರಾನ್ ನಮ್ಮ ದಿಕ್ಕಿನಲ್ಲಿ ಸ್ವಲ್ಪ ಮುನ್ನಡೆದಿದೆ, ಆದರೆ ಇನ್ನಷ್ಟು ಮುಂದುವರಿಯಬೇಕಿದೆ ಎಂದು ತಿಳಿಸಿದ್ದಾರೆ.
ಈ ಮಾತುಕತೆಗಳಲ್ಲಿ ಅಮೆರಿಕಾ ಪರವಾಗಿ ವಾನ್ಸ್ ನೇತೃತ್ವದ ತಂಡದಲ್ಲಿ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಹಾಗೂ ಜಾರೆಡ್ ಕುಶ್ನರ್ ಭಾಗವಹಿಸಿದ್ದರೆ, ಇರಾನ್ ಪರವಾಗಿ ಸಂಸತ್ ಅಧ್ಯಕ್ಷ ಮೊಹಮ್ಮದ್ ಬಾಘರ್ ಘಾಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಭಾಗವಹಿಸಿದ್ದರು.
ಆದರೆ, ಅಂತಿಮ ನಿರ್ಧಾರ ಕೈಗೊಳ್ಳಲು ಇರಾನ್ ಪ್ರತಿನಿಧಿಗಳು ತಮ್ಮ ನಾಯಕತ್ವದ ಅನುಮತಿ ಪಡೆಯಬೇಕಾದ ಕಾರಣ ಒಪ್ಪಂದ ಸಾಧ್ಯವಾಗಲಿಲ್ಲ ಎಂದು ವಾನ್ಸ್ ವಿವರಿಸಿದ್ದಾರೆ.
ಇರಾನ್ ಅಣ್ವಸ್ತ್ರ ಕುರಿತು ಅಮೆರಿಕಾ ಸ್ಪಷ್ಟ ನಿಲುವನ್ನು ಮುಂದಿಟ್ಟಿದೆ. ಅವುಗಳಿಗೆ ಇರಾನ್ ಒಪ್ಪಿದ್ದೇ ಆದರೆ, ಶಾಂತಿ ಒಪ್ಪಂದ ಮತ್ತಷ್ಟು ಫಲಪ್ರದವಾಗಲಿದೆ ಎಂದೂ ತಿಳಿಸಿದ್ದಾರೆ.
ನಾವು ಸಾಕಷ್ಟು ಪ್ರಸ್ತಾವನೆಗಳನ್ನು ಇರಾನ್ ಮುಂದಿಟ್ಟಿದ್ದೇವೆ. ಇರಾನ್ ಇನ್ನಷ್ಟು ಹೆಜ್ಜೆ ಇಟ್ಟರೆ, ಇದು ಎರಡೂ ದೇಶಗಳಿಗೆ ಲಾಭದಾಯಕ ಒಪ್ಪಂದವಾಗಬಹುದು, ಮುಂದಿನ ನಿರ್ಧಾರಗಳು ಇರಾನ್ ಅಂಗಳದಲ್ಲಿದೆ ಎಂದು ಹೇಳಿದ್ದಾರೆ.
ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಅಣ್ವಸ್ತ್ರಗಳನ್ನು ಹೊಂದುವುದನ್ನು ಸಂಪೂರ್ಣವಾಗಿ ತಡೆಯಬೇಕೆಂಬ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
ಇರಾನ್ ಜಾಗತಿಕ ಮಟ್ಟದಲ್ಲಿ ಒತ್ತಡ ಸೃಷ್ಟಿಸುತ್ತಿರುವ ಸಂದರ್ಭದಲ್ಲಿ, ಅದು ಅಣ್ವಸ್ತ್ರ ಹೊಂದಿದರೆ ಪರಿಣಾಮಗಳು ಗಂಭೀರವಾಗುತ್ತವೆ ಎಂದು ವಾನ್ಸ್ ಎಚ್ಚರಿಸಿದ್ದಾರೆ.
ಇದೇ ವೇಳೆ ಜಾಗತಿಕ ಇಂಧನ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವುದನ್ನು ಒಪ್ಪಿಕೊಂಡ ವಾನ್ಸ್, ಮಾತುಕತೆಗಳ ಮೂಲಕ ಪರಿಸ್ಥಿತಿ ಸುಧಾರಿಸಲು ಅಮೆರಿಕಾ ತೀವ್ರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ. ಜನರು ಸಂಕಷ್ಟದಲ್ಲಿದ್ದಾರೆ, ಅದಕ್ಕಾಗಿ ನಾವು ಪರಿಣಾಮಕಾರಿ ರೀತಿಯಲ್ಲಿ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಮೆರಿಕಾ ಇರಾನ್ ಮೇಲೆ ಒತ್ತಡ ಹೆಚ್ಚಿಸಲು ಎಲ್ಲಾ ಬಂದರುಗಳನ್ನು ತಡೆಹಿಡಿಯುವ ಕ್ರಮ ಕೈಗೊಂಡಿದ್ದು, ಹಾರ್ಮುಜ್ ಸಮುದ್ರ ಮಾರ್ಗ ತೆರೆಯಲು ಮತ್ತು ಶಾಂತಿ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಒತ್ತಾಯಿಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಪರ್ಷಿಯನ್ ಗಲ್ಪ್ ಮತ್ತು ಓಮಾನ್ ಗಲ್ಪ್ ಪ್ರದೇಶದ ಬಂದರುಗಳ ಮೇಲೆ ಬೆದರಿಕೆ ಹಾಕಿದ್ದು, ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸಿದೆ.
Advertisement