

ಕಠ್ಮಂಡು: ಭೀಕರ ಭೂಕುಸಿತ ಹಾಗೂ ಹಠಾತ್ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ, ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಹೊತ್ತು ತೆರಳಿದ್ದ ಭಾರತೀಯ ಮಾನವೀಯ ಸೇವಾ ಸಂಸ್ಥೆಯ ತಂಡವನ್ನು ನೇಪಾಳ ಅಧಿಕಾರಿಗಳು ಗಡಿಯಲ್ಲೇ ತಡೆದು ವಾಪಸ್ ಕಳುಹಿಸಿರುವ ಘಟನೆ ವರದಿಯಾಗಿದೆ.
ಹೌದು.. ಮೋಹಾಲಿ ಮೂಲದ ಸಿಖ್ ಮಾನವೀಯ ಸೇವಾ ಸಂಘಟನೆಯೊಂದರ ತಂಡವೊಂದು ನೇಪಾಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ದಿನಸಿ ಸಾಮಗ್ರಿಗಳು, ಔಷಧಿಗಳು ಸೇರಿದಂತೆ ಅಗತ್ಯ ಪರಿಹಾರ ವಸ್ತುಗಳನ್ನು ಹೊತ್ತು ತೆರಳಿತ್ತು ಎನ್ನಲಾಗಿದೆ.
ಟಾರ್ಪಾಲಿನ್ಗಳು, ಸೊಳ್ಳೆ ಪರದೆಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ವಾಹನಗಳಲ್ಲಿ ತುಂಬಿಕೊಂಡು ತಂಡವು ನೇಪಾಳದ ಗಡಿಯವರೆಗೆ ತಲುಪಿತ್ತು ಎಂದು ವರದಿಗಳು ತಿಳಿಸಿವೆ.
ಆದರೆ, ಗಡಿಯಲ್ಲಿ ಅಧಿಕಾರಿಗಳು ವಾಹನಗಳನ್ನು ತಡೆದು ನೇಪಾಳದೊಳಗೆ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ಪರಿಹಾರ ಸಾಮಗ್ರಿಗಳನ್ನು ನೇಪಾಳದಲ್ಲೇ ಖರೀದಿಸಿ
ಇನ್ನೂ ಆಘಾತಕಾರಿ ಅಂಶವೆಂದರೆ ಪರಿಹಾರ ತುಂಬಿದ್ದ ವಾಹನಗಳನ್ನು ತಡೆದ ಅಧಿಕಾರಿಗಳು, ಪರಿಹಾರ ವಸ್ತುಗಳನ್ನು ನೇಪಾಳದಲ್ಲೇ ಖರೀದಿಸಿ ವಿತರಿಸುವಂತೆ ಸೂಚಿಸಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಈ ಬೆಳವಣಿಗೆಯ ಹಿಂದೆ ನೇಪಾಳದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ನಿರ್ದಿಷ್ಟ ವ್ಯವಸ್ಥೆಯಡಿ ಸಮನ್ವಯಗೊಳಿಸುವ ಪ್ರಯತ್ನ ಇರಬಹುದು ಎಂದು ಹೇಳಲಾಗುತ್ತಿದೆ.
ನೇಪಾಳದ ನಡೆಗೆ ಕಾರಣವೇನು?
ವಿಪತ್ತು ಸಂದರ್ಭಗಳಲ್ಲಿ ಪರಿಹಾರ ಸಾಮಗ್ರಿಗಳ ವಿತರಣೆ ಸಮರ್ಪಕವಾಗಿ ನಡೆಯಲು ಮತ್ತು ಒಂದೇ ಪ್ರದೇಶಕ್ಕೆ ಅಗತ್ಯಕ್ಕಿಂತ ಹೆಚ್ಚು ಸಾಮಗ್ರಿ ತಲುಪುವುದನ್ನು ತಪ್ಪಿಸಲು ಸರ್ಕಾರಗಳು ಕೆಲವೊಮ್ಮೆ ಕೇಂದ್ರಿತ ವ್ಯವಸ್ಥೆ ಜಾರಿಗೆ ತರುತ್ತವೆ.
ಆದರೆ, ಖಾಸಗಿ ಮಾನವೀಯ ಸಂಘಟನೆಗಳು ಸ್ವಯಂಪ್ರೇರಿತವಾಗಿ ಸಂಗ್ರಹಿಸಿ ತಂದಿರುವ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಗಡಿಯಲ್ಲೇ ತಡೆದಿರುವುದಾದರೆ, ಇಂತಹ ನಿರ್ಧಾರವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವಿಶೇಷವಾಗಿ ಪ್ರವಾಹದಿಂದ ಮನೆ, ರಸ್ತೆ, ಸೇತುವೆಗಳನ್ನು ಕಳೆದುಕೊಂಡು ನೆರವಿಗಾಗಿ ಕಾಯುತ್ತಿರುವ ಜನರಿಗೆ ತುರ್ತು ಸಹಾಯದ ಅಗತ್ಯವಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಆಗಸ್ಟ್ 26ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ನೇಪಾಳದ ಹಲವು ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅನೇಕರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಸಾವಿರಾರು ಜನರು ಮನೆ ಕಳೆದುಕೊಂಡಿದ್ದು, ಆಹಾರ, ಕುಡಿಯುವ ನೀರು, ಔಷಧ, ತಾತ್ಕಾಲಿಕ ವಸತಿ ಸೇರಿದಂತೆ ಮೂಲಭೂತ ಅಗತ್ಯಗಳಿಗಾಗಿ ಪರದಾಡುತ್ತಿದ್ದಾರೆ.