

ಮುಜಾಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಪಾಕಿಸ್ತಾನ ಸರ್ಕಾರದ ವಿರುದ್ಧದ ಪ್ರತಿಭಟನೆ ಗುರುವಾರ 24ನೇ ದಿನಕ್ಕೆ ಕಾಲಿಟ್ಟಿದ್ದು, ರಾವಲಕೋಟ್ನ ಈದ್ಗಾ ಮೈದಾನದಲ್ಲಿ 80,000 ಕ್ಕೂ ಹೆಚ್ಚು ಪ್ರತಿಭಟನಾಕಾರರು ಜಮಾಯಿಸಿದ್ದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಂಟಿ ಅವಾಮಿ ಕ್ರಿಯಾ ಸಮಿತಿ(ಜೆಎಎಸಿ) ನಾಯಕ ಸರ್ದಾರ್ ಅಮನ್ ಖಾನ್, ಪಾಕಿಸ್ತಾನ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಮೂಲಸೌಕರ್ಯಗಳನ್ನು ಹೊಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಶ್ಮೀರಿಗಳಿಗೆ ಮೂಲತಃ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು ಪಾಕಿಸ್ತಾನದ ಮಿಲಿಟರಿ ಎಂದು ಖಾನ್ ಆರೋಪಿಸಿದ್ದಾರೆ. ಅಲ್ಲದೆ ಈಗ ಅವರನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಿದೆ. ಪಾಕಿಸ್ತಾನ ಸೇನೆಯೇ ಶಸ್ತ್ರಾಸ್ತ್ರಗಳನ್ನು ಸ್ಥಳೀಯರಿಗೆ ಹಸ್ತಾಂತರಿಸಿದೆ ಎಂದು ಹೇಳಿದ್ದಾರೆ.
"ಕಾಶ್ಮೀರಿಗಳಿಗೆ ಬಂದೂಕುಗಳನ್ನು ಹಸ್ತಾಂತರಿಸಿದ್ದು ಪಾಕಿಸ್ತಾನ ಸೇನೆಯೇ. ಆದರೆ ಇಂದು ನಮ್ಮನ್ನು ಭಯೋತ್ಪಾದಕರು ಎಂದು ಕರೆಯುವ ಧೈರ್ಯ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಜೈಶ್-ಎ-ಮೊಹಮ್ಮದ್ ಕಾರ್ಯಕ್ರಮವನ್ನು ಉಲ್ಲೇಖಿಸಿದ ಖಾನ್, ಈ ಕಾರ್ಯಕ್ರಮದಲ್ಲಿ ಶಸ್ತ್ರಸಜ್ಜಿತವಾಗಿ ಭಾಗವಹಿಸಿದ್ದ ಜನ ಎಕೆ-47 ಮತ್ತು ಕತ್ತಿಗಳಂತಹ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ನಗರದ ಮೂಲಕ ಮೆರವಣಿಗೆ ನಡೆಸಿದರು ಎಂದರು.
ರಾವಲಕೋಟ್ನ ಉಪ ಆಯುಕ್ತರು, ಈ ರ್ಯಾಲಿಗೆ ಅವಕಾಶ ನೀಡಿದರು ಮತ್ತು ಭದ್ರತೆಯನ್ನು ಒದಗಿಸಿದರು ಎಂದು ಅವರು ಹೇಳಿದರು.
"ರಾವಲ್ಕೋಟ್ ಉಪ ಆಯುಕ್ತರೇ, ನೀವು ಇಲ್ಲಿ ಬಂದೂಕು ಮತ್ತು ಕತ್ತಿಗಳನ್ನು ಹಿಡಿದು ರ್ಯಾಲಿಗಳನ್ನು ಆಯೋಜಿಸುತ್ತಿದ್ದಿರಿ. ನಿಮಗೆ ನೆನಪಿದೆಯೇ? ಮತ್ತು ನೀವು ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತೀರಿ. ಈ ಎಲ್ಲಾ ಜನ(ಪ್ರತಿಭಟನಾಕಾರರು) ಈ ಭೂಮಿಯ ಉತ್ತರಾಧಿಕಾರಿಗಳು" ಎಂದು ಖಾನ್ ಗುಡುಗಿದರು.
ಆರ್ಥಿಕ ಸಂಕಷ್ಟ, ಹಣದುಬ್ಬರ, ಬೆಲೆ ಏರಿಕೆ ಮತ್ತು ಪಾಕಿಸ್ತಾನದ ದಬ್ಬಾಳಿಕೆ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯ ಖಂಡಿಸಿ ಪಿಒಕೆಯಲ್ಲಿ ಜೂನ್ 9 ರಿಂದ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಮುಜಾಫರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಆಕ್ರೋಶಿತ ಪ್ರತಿಭಟನಾಕಾರರು ಪಾಕ್ ಸರ್ಕಾರಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.