

ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಇಂಡೋನೇಷ್ಯಾದಲ್ಲಿದ್ದಾರೆ. ಇಂದು ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರನ್ನು ಶ್ಲಾಘಿಸಿದರು. ಇಂಡೋನೇಷ್ಯಾದ ಸ್ವಾತಂತ್ರ್ಯದಲ್ಲಿ ಬಿಜು ಪಟ್ನಾಯಕ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹೀಗಾಗಿ ಭಾರತ ಮತ್ತು ಇಂಡೋನೇಷ್ಯಾವನ್ನು ಹತ್ತಿರ ತರುವಲ್ಲಿ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಹಳೆಯ ಘಟನೆಯನ್ನು ನೆನಪಿಸಿಕೊಂಡರು. ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪೈಲಟ್ ಆಗಿದ್ದ ಪಟ್ನಾಯಕ್, ಇಂಡೋನೇಷ್ಯಾದ ಅಂದಿನ ಪ್ರಧಾನಿ ಸುತಾನ್ ಸ್ಜಹ್ರಿರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಡಚ್ ನಿಯಂತ್ರಿತ ಜಾವಾದಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತಂದರು. ಇನ್ನು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಆದೇಶದ ಮೇರೆಗೆ ಬಿಜು ಪಟ್ನಾಯಕ್ ಈ ಕಾರ್ಯಾಚರಣೆಯನ್ನು ನಡೆಸಿದರು.
ಜಕಾರ್ತಾದಲ್ಲಿ ಇಂಡೋನೇಷ್ಯಾ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎರಡೂ ದೇಶಗಳು ಬಹುತೇಕ ಏಕಕಾಲದಲ್ಲಿ ಸ್ವಾತಂತ್ರ್ಯವನ್ನು ಸಾಧಿಸಿವೆ ಎಂದು ಗಮನಿಸಿದರು. ಇಂಡೋನೇಷ್ಯಾ 1945 ರಲ್ಲಿ ಮತ್ತು ಭಾರತ 1947 ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು. ಸ್ವತಂತ್ರ ದೇಶವಾಗಿ ಸಾರ್ವಭೌಮತ್ವವನ್ನು ಸಾಧಿಸಿದ ನಂತರ, ಭಾರತವು ಇಂಡೋನೇಷ್ಯಾವನ್ನು ಬೆಂಬಲಿಸುವ ಬಲವಾದ ಧ್ವನಿಯಾಯಿತು. ವಿಶ್ವಸಂಸ್ಥೆಯಲ್ಲಿ ಭಾರತವೂ ಇಂಡೋನೇಷ್ಯಾದ ಧ್ವನಿ ಎತ್ತಿದೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ ಬಿಜು ಪಟ್ನಾಯಕ್ ವಹಿಸಿದ ಪಾತ್ರವು ಉಭಯ ದೇಶಗಳನ್ನು ಹತ್ತಿರ ತರುವಲ್ಲಿ ನಿರ್ಣಾಯಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
1947ರಲ್ಲಿ ಡಚ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ದೇಶದ ಹೋರಾಟದ ಸಮಯದಲ್ಲಿ ಬಿಜು ಪಟ್ನಾಯಕ್ ಅವರ ಧೈರ್ಯಶಾಲಿ ಕಾರ್ಯಾಚರಣೆಗಾಗಿ ಇಂಡೋನೇಷ್ಯಾದಲ್ಲಿ ಅವರನ್ನು ಸ್ಮರಿಸಲಾಗುತ್ತದೆ. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಕೋರಿಕೆಯ ಮೇರೆಗೆ, ಡಚ್ ಸೇನೆಯಿಂದ ಗೃಹಬಂಧನದಲ್ಲಿ ಇರಿಸಲ್ಪಟ್ಟಿದ್ದ ಇಂಡೋನೇಷ್ಯಾದ ಪ್ರಧಾನಿ ಮತ್ತು ಅಧ್ಯಕ್ಷರನ್ನು ರಕ್ಷಿಸಲು ಅವರು ರಹಸ್ಯ ಕಾರ್ಯಾಚರಣೆಯನ್ನು ನಡೆಸಿದರು. ಅವರ ಸಹ-ಪೈಲಟ್ ಪತ್ನಿ ಜ್ಞಾನವತಿ ಪಟ್ನಾಯಕ್ ಅವರೊಂದಿಗೆ, ಅವರು ಡೌಗ್ಲಾಸ್ ಸಿ -47 ಡಕೋಟಾ ವಿಮಾನವನ್ನು ಇಂಡೋನೇಷ್ಯಾದ ವಾಯುಪ್ರದೇಶಕ್ಕೆ ಹಾರಿಸಿದರು. ಕಾರ್ಯಾಚರಣೆಯ ಸಮಯದಲ್ಲಿ, ವಿಮಾನವನ್ನು ಹೊಡೆದುರುಳಿಸುವ ಬೆದರಿಕೆ ಹಾಕಲಾಯಿತು. ಈ ಬೆದರಿಕೆಯ ಹೊರತಾಗಿಯೂ, ಕಾರ್ಯಾಚರಣೆ ಯಶಸ್ವಿಯಾಯಿತು. ಇಬ್ಬರು ನಾಯಕರನ್ನು ಸಿಂಗಾಪುರಕ್ಕೆ ಸಾಗಿಸಲಾಯಿತು. ನಂತರ ಅವರು ಜುಲೈ 24, 1947 ರಂದು ನವದೆಹಲಿಗೆ ಆಗಮಿಸಿದರು. ಇಂಡೋನೇಷ್ಯಾದ ಸ್ವಾತಂತ್ರ್ಯ ಚಳವಳಿಯತ್ತ ಜಾಗತಿಕ ಗಮನ ಸೆಳೆದರು.
ಮೂರು ರಾಷ್ಟ್ರಗಳ ಪ್ರವಾಸದ ಅಂಗವಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಮೋದಿ ಅವರಿಗೆ, ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ 'ಬಿಂಟಾಂಗ್ ಆದಿಪೂರ್ಣ' ಪ್ರಶಸ್ತಿ, ನೀಡಿ ಸನ್ಮಾನಿಸಲಾಗಿದೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಈ ಪ್ರಶಸ್ತಿ ನೀಡಿ ಸನ್ಮಾನಿಸಿದರು.