

ಢಾಕಾ: ಬಾಂಗ್ಲಾದೇಶದಲ್ಲಿ ಭಗವಾನ್ ಶ್ರೀರಾಮನ ಚಿತ್ರದ ಅವಮಾನ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದ ಸದಸ್ಯರು ರಾಜಧಾನಿ ಢಾಕಾದಲ್ಲಿ ಶುಕ್ರವಾರ ಭಾರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಭಾಗವಾಗಿ ಟಾರ್ಚ್ಲೈಟ್ ಮೆರವಣಿಗೆ ಆಯೋಜಿಸಲಾಯಿತು ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಇತ್ತೀಚೆಗೆ ಉತ್ತರ ಬಾಂಗ್ಲಾದೇಶದ ಗೈಬಾಂಧಾ ಜಿಲ್ಲೆಯ ಪಲಾಶ್ಬಾರಿಯಲ್ಲಿ ಕೆಲ ದುಷ್ಕರ್ಮಿಗಳು ಶ್ರೀರಾಮನ ಮೂರ್ತಿ ಮತ್ತು ಚಿತ್ರಕ್ಕೆ ಅವಮಾನ ಮಾಡಿದ್ದು, ಮೂರ್ತಿಯ ಮೇಲೆ ಚಪ್ಪಲಿ ಎಸೆದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಸಂಜೆ 5 ಗಂಟೆಯಿಂದ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಢಾಕಾದ ಶಾಹ್ಬಾಗ್ ಚೌಕದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಇದರಲ್ಲಿ ಭಾಗವಹಿಸಿದರು.
ಗೈಬಾಂಧಾ ಜಿಲ್ಲೆಯಲ್ಲಿನ ರಾಮಮಂದಿರ ನಿರ್ಮಾಣ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಕೆಲವರು, ರಾಮನ ಚಿತ್ರವನ್ನು ಧ್ವಂಸಗೊಳಿಸಿ, ಮೂರ್ತಿಗೆ ಚಪ್ಪಲಿ ಎಸೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಲ್ಲಿನ ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ 81 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣವಾಗುತ್ತಿತ್ತು ಎನ್ನಲಾಗಿದೆ. ಈ ಘಟನೆಯ ಬಳಿಕ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದರೂ ಇದೂವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನಾ ನಾಯಕರ ಪ್ರಕಾರ, ಭವಿಷ್ಯದಲ್ಲಿ ಬಾಂಗ್ಲಾದೇಶದ ಎಲ್ಲಾ 64 ಜಿಲ್ಲೆಗಳಲ್ಲೂ ರಾಮಮಂದಿರಗಳನ್ನು ನಿರ್ಮಿಸುವ ಯೋಜನೆಯಿದೆ. ಪ್ರತಿಭಟನೆಯ ಅಂಗವಾಗಿ ಶಾಹ್ಬಾಗ್ನಿಂದ ರಾಷ್ಟ್ರೀಯ ಪತ್ರಿಕಾ ಕ್ಲಬ್ವರೆಗೆ ಟಾರ್ಚ್ಲೈಟ್ ಮೆರವಣಿಗೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು "ಜೈ ಶ್ರೀರಾಮ್" ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮುನ್ನ ಹಿಂದೂ ಮಹಾಜೋಟ್ನ ವಿವಿಧ ಬಣಗಳು ರಾಷ್ಟ್ರೀಯ ಪತ್ರಿಕಾ ಕ್ಲಬ್ ಎದುರು ಮಾನವ ಸರಪಳಿ ಹಾಗೂ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಿ ಘಟನೆಯನ್ನು ಖಂಡಿಸಿದ್ದವು.
ಇದೇ ವೇಳೆ, ರಾಮನಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ರಾಷ್ಟ್ರೀಯ ಪೂಜಾ ಉತ್ಸವ ಸಮಿತಿಯೂ ಘೋಷಿಸಿದೆ.
Advertisement