

ನವದೆಹಲಿ: ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ (MoU) ಬಳಿಕ ಜಾಗತಿಕವಾಗಿ ಮಹತ್ವ ಪಡೆದಿರುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.
ಒಪ್ಪಂದದ ನಂತರ ಭಾರತದತ್ತ ಹೊರಟಿದ್ದ 11 ಹಡಗುಗಳು ಯಶಸ್ವಿಯಾಗಿ ಜಲಸಂಧಿಯನ್ನು ದಾಟಿದ್ದು, ಇನ್ನೂ 10 ಭಾರತೀಯ ಧ್ವಜದ ಹಡಗುಗಳು ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಸಂಚಾರಕ್ಕೆ ಕಾಯುತ್ತಿವೆ.
ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, "ಪ್ರಸ್ತುತ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ 10 ಭಾರತೀಯ ಧ್ವಜದ ಹಡಗುಗಳು ಇವೆ. ಇತ್ತೀಚೆಗೆ ಇನ್ನೆರಡು ಹಡಗುಗಳು ಅಲ್ಲಿಗೆ ತಲುಪಿವೆ. ಜೂನ್ 17ರ ಒಪ್ಪಂದದ ಬಳಿಕ ಭಾರತಕ್ಕೆ ಹೊರಟಿದ್ದ 11 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ" ಎಂದು ಮಾಹಿತಿ ನೀಡಿದ್ದಾರೆ.
ಜಲಸಂಧಿಯನ್ನು ದಾಟಿದ ಹಡಗುಗಳಲ್ಲಿ ಮೂರು ಭಾರತೀಯ ಧ್ವಜದ ಕಚ್ಚಾ ತೈಲ ಟ್ಯಾಂಕರ್ಗಳು ಸೇರಿವೆ. ಇವುಗಳಲ್ಲಿ ಪ್ರತಿಯೊಂದು 2.85 ಲಕ್ಷ ಮೆಟ್ರಿಕ್ ಟನ್ಗಿಂತ ಹೆಚ್ಚು ಕಚ್ಚಾ ತೈಲವನ್ನು ಸಾಗಿಸುತ್ತಿವೆ. ಜೊತೆಗೆ ಒಂದು ವಿದೇಶಿ ಧ್ವಜದ ಎಲ್ಪಿಜಿ ವಾಹಕ ಹಡಗು, ಒಂದು ವಿದೇಶಿ ಧ್ವಜದ ಕಚ್ಚಾ ತೈಲ ಟ್ಯಾಂಕರ್ ಹಾಗೂ ರಸಗೊಬ್ಬರ ಸಾಗಿಸುತ್ತಿದ್ದ ಆರು ವಿದೇಶಿ ಧ್ವಜದ ಬಲ್ಕ್ ಕ್ಯಾರಿಯರ್ಗಳು ಕೂಡ ಜಲಸಂಧಿ ದಾಟಿವೆ.
ಉಳಿದಿರುವ ಭಾರತೀಯ ಹಡಗುಗಳೂ ಶೀಘ್ರದಲ್ಲೇ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಲಿವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾ ನಿರ್ಬಂಧ ಮುಂದುವರಿಯುವುದಿಲ್ಲ ಹಾಗೂ ಇರಾನ್ ಅಣು ತಪಾಸಣೆಗೆ ಒಪ್ಪಿಕೊಂಡಿದೆ ಎಂದು ಘೋಷಿಸಿದ್ದರು. ಆದರೆ, ಇರಾನ್ ಅಧಿಕಾರಿಗಳು ಈ ಹೇಳಿಕೆಯನ್ನು ಪ್ರಶ್ನಿಸಿದ್ದು, ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂಬುದು ಸ್ಪಷ್ಟವಾಗಿದೆ.
ಆದಾಗ್ಯೂ, ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಮುದ್ರ ಮಾರ್ಗ ವಿಶ್ಲೇಷಣಾ ಸಂಸ್ಥೆ ಕ್ಲೆಪರ್ (Kpler) ಮಾಹಿತಿ ಪ್ರಕಾರ, ಕಳೆದ ಶುಕ್ರವಾರದಿಂದ ಭಾನುವಾರದವರೆಗೆ 71 ಹಡಗುಗಳು ಜಲಸಂಧಿಯನ್ನು ದಾಟಿವೆ. ಶನಿವಾರ ಒಂದೇ ದಿನ 35 ಹಡಗುಗಳ ಸಂಚಾರ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇದರ ನಡುವೆಯೂ ಜಲಸಂಧಿಯ ಭವಿಷ್ಯದ ಆಡಳಿತ, ಸಾಗಣೆ ವೆಚ್ಚ ಹಾಗೂ ಭದ್ರತೆ ಕುರಿತ ಅನಿಶ್ಚಿತತೆ ಮುಂದುವರಿದಿದೆ. ಇದು ಅಮೆರಿಕಾ-ಇರಾನ್ ನಡುವಿನ ಶಾಶ್ವತ ಶಾಂತಿ ಒಪ್ಪಂದದ ಮಾತುಕತೆಗಳ ಮೇಲೂ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಒಪ್ಪಂದದ ಭಾಗವಾಗಿ ಇರಾನ್ ಮುಂದಿನ 30 ದಿನಗಳಲ್ಲಿ ಸಮುದ್ರದಲ್ಲಿ ಅಳವಡಿಸಲಾದ ಸ್ಫೋಟಕಗಳನ್ನು ತೆರವುಗೊಳಿಸುವುದು ಹಾಗೂ ನೌಕಾ ಸಂಚಾರಕ್ಕೆ ಅಡ್ಡಿಯಾಗಿರುವ ತಾಂತ್ರಿಕ ಮತ್ತು ಸೇನಾ ಅಡೆತಡೆಗಳನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದೆ.
ಇದೇ ವೇಳೆ ಒಮಾನ್ ಮತ್ತು ಇರಾನ್, ಹಾರ್ಮುಜ್ ಜಲಸಂಧಿಯ ಭವಿಷ್ಯದ ನಿರ್ವಹಣೆ, ನೌಕಾ ಸೇವೆಗಳು ಹಾಗೂ ಸಂಬಂಧಿತ ವೆಚ್ಚಗಳ ಕುರಿತು ಮಾತುಕತೆ ಮುಂದುವರಿಸಲು ಒಪ್ಪಿಕೊಂಡಿವೆ. ಮಸ್ಕತ್ನಲ್ಲಿ ನಡೆದ ಸಭೆಯ ಬಳಿಕ ಉಭಯ ದೇಶಗಳು ಜಂಟಿ ಕಾರ್ಯಪಡೆ ರಚಿಸುವುದಾಗಿ ಘೋಷಿಸಿವೆ.
ಜಾಗತಿಕ ತೈಲ ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾರ್ಮುಜ್ ಜಲಸಂಧಿಯಲ್ಲಿ ಪರಿಸ್ಥಿತಿ ಸಹಜವಾಗುತ್ತಿರುವುದು ಭಾರತ ಸೇರಿದಂತೆ ಹಲವು ದೇಶಗಳಿಗೆ ನಿರಾಳ ನೀಡಿದೆ.
Advertisement