

ಟೆಹರಾನ್ : ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಸತ್ತಿದ್ದಾರೋ ಅಥವಾ ಬದುಕಿದ್ದಾರೋ ಎಂಬ ವದಂತಿಗಳ ನಡುವೆ ಇದೀಗ ಮತ್ತೊಂದು ಸಂದೇಶ ಕಳುಹಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಬೆಂಬಲ ನೀಡಿದ ಇರಾಕ್ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ ಎಂದು ಇರಾನ್ ಮಾಧ್ಯಮ ಭಾನುವಾರ ತಿಳಿಸಿದೆ.
ಫೆಬ್ರವರಿ 28 ರಂದು ಆರಂಭವಾದ ಯುದ್ಧದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ, ನೂತನ ಸರ್ವೋಚ್ಚ ನಾಯಕರಾಗಿ ನೇಮಕವಾದ ನಂತರ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ ಕೆಲವೊಮ್ಮೆ ಲಿಖಿತ ಹೇಳಿಕೆಗಳನ್ನು ಮಾತ್ರ ನೀಡಿದ್ದಾರೆ.
ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಕಾರಣ ಅವರು ಜೀವಂತವಾಗಿ ಇರುವಿಕೆ ಬಗ್ಗೆ ತೀವ್ರವಾದ ಊಹಾಪೋಹಗಳು ಹರಡಿತ್ತು. ಆದರೆ ರಾಜ್ಯ ದೂರದರ್ಶನ ಮತ್ತು ಕೆಲವು ಇರಾನಿನ ಅಧಿಕಾರಿಗಳು ಅವರು ವೈಮಾನಿಕ ದಾಳಿಯಲ್ಲಿ ಉಂಟಾದ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿವೆ.
ಇರಾನ್ ವಿರುದ್ಧದ ಆಕ್ರಮಣದ ವಿರುದ್ಧ ಸ್ಪಷ್ಟ ನಿಲುವು ಮತ್ತು ದೇಶಕ್ಕಾಗಿ ಅವರ ಬೆಂಬಲಕ್ಕಾಗಿ ಇರಾಕ್ನ ಜನರಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ" ಎಂದು ISNA ಸುದ್ದಿ ಸಂಸ್ಥೆ ಹೇಳಿದೆ. ಶಿಯಾ ಪಕ್ಷ ಇಸ್ಲಾಮಿಕ್ ಸುಪ್ರೀಂ ಕೌನ್ಸಿಲ್ ಆಫ್ ಇರಾಕ್ ಮತ್ತು ಬಾಗ್ದಾದ್ನಲ್ಲಿರುವ ಇರಾನ್ ರಾಯಭಾರಿ ನಡುವಿನ ಸಭೆಯ ನಂತರ ಈ ಸಂದೇಶವನ್ನು ತಲುಪಿಸಲಾಗಿದೆ ಎಂದು ಅದು ಹೇಳಿದೆ. ಸಂದೇಶವನ್ನು ಹೇಗೆ ರವಾನಿಸಲಾಗಿದೆ ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ.
ರಾಜ್ಯ ಮಾಧ್ಯಮಗಳು ಮೊಜ್ತಾಬಾ ಖಮೇನಿಯವರ ಫೋಟೋಗಳನ್ನು ನಿಯಮಿತವಾಗಿ ಪ್ರಕಟಿಸುತ್ತವೆ ಆದರೆ ಅವು ಹೊಸದು ಎಂಬುದಕ್ಕೆ ಯಾವುದೇ ಸೂಚನೆಯನ್ನು ನೀಡುವುದಿಲ್ಲ. ಅವರು ತಮ್ಮದೇ ಆದ ಅಧಿಕೃತ ಟೆಲಿಗ್ರಾಮ್ ಮತ್ತು ಎಕ್ಸ್ ಖಾತೆಗಳನ್ನು ಹೊಂದಿದ್ದಾರೆ.
ಇರಾನ್ ಜೊತೆಗಿನ ಮಾತುಕತೆಯಲ್ಲಿ "ಉನ್ನತ ವ್ಯಕ್ತಿ" ಯೊಂದಿಗೆ ವ್ಯವಹರಿಸುತ್ತಿರುವುದಾಗಿ ಕಳೆದ ವಾರ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಮೊಜ್ತಾಬಾ ಖಮೇನಿ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದರು. ಮೊಜ್ತಾಬಾ ಖಮೇನಿ ಅವರು 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಮೂರನೇ ಸರ್ವೋಚ್ಚ ನಾಯಕರಾಗಿದ್ದಾರೆ.
Advertisement