

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ್ ಅಜರ್ನ ಹಿರಿಯ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. ಅವನ ಸಾವು ಇನ್ನೂ ನಿಗೂಢವಾಗಿಯೇ ಉಳಿದಿದೆ. ತಾಹಿರ್ ಅನ್ವರ್ ನ ಸಾವನ್ನು ಜೈಶ್ನ ಅಧಿಕೃತ ಚಾನೆಲ್ ಮೂಲಕ ಬಹಿರಂಗಪಡಿಸಲಾಗಿದೆ.
ವರದಿಗಳ ಪ್ರಕಾರ, ತಾಹಿರ್ ಅನ್ವರ್ ಜೈಶ್-ಎ-ಮೊಹಮ್ಮದ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ದೀರ್ಘಕಾಲದಿಂದ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದು ಅದರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನು. ಸಂಘಟನೆಯಲ್ಲಿ ಆತನ ಪಾತ್ರವನ್ನು ಮಹತ್ವದ್ದಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.
ಜೈಶ್-ಎ-ಮೊಹಮ್ಮದ್ ಮತ್ತು ಮಸೂದ್ ಅಜರ್ ಭಾರತದಲ್ಲಿ ನಡೆದ ಹಲವಾರು ಪ್ರಮುಖ ಭಯೋತ್ಪಾದಕ ದಾಳಿಗಳಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಈ ದಾಳಿಗಳು ಭದ್ರತೆ, ರಾಜಕೀಯ ಮತ್ತು ಭಾರತ-ಪಾಕಿಸ್ತಾನ ಸಂಬಂಧಗಳ ಮೇಲೆ ಆಳವಾದ ಪರಿಣಾಮ ಬೀರಿವೆ.
ಪ್ರಮುಖ ಭಯೋತ್ಪಾದಕ ಘಟನೆಗಳು ಈ ಕೆಳಗಿನಂತಿವೆ...
* ದೆಹಲಿಯ ಸಂಸತ್ತಿನ ಮೇಲಿನ ದಾಳಿ: 2001ರ ಡಿಸೆಂಬರ್ 13ರಂದು ದೆಹಲಿ ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು.
* ಪಠಾಣ್ಕೋಟ್ ವಾಯುನೆಲೆಯ ದಾಳಿ: 2016ರ ಜನವರಿಯಲ್ಲಿ ಆರು ಭಯೋತ್ಪಾದಕರು ಪಂಜಾಬ್ ನ ಭಾರತೀಯ ವಾಯುಪಡೆಯ ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ಮಾಡಿದರು.
* ಉರಿ ದಾಳಿ: 2016ರ ಸೆಪ್ಟೆಂಬರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ದಾಳಿ ಮಾಡಲಾಯಿತು. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾದರು.
* ಪುಲ್ವಾಮಾ ದಾಳಿ: 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲೆ ಆತ್ಮಾಹುತಿ ದಾಳಿ ನಡೆಯಿತು. 40 ಸೈನಿಕರು ಹುತಾತ್ಮರಾದರು.
Advertisement