

ಢಾಕಾ: 2024ರ ದಂಗೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ ಆರೋಪದ ಮೇಲೆ, ಬಾಂಗ್ಲಾದೇಶದ ನ್ಯಾಯಾಲಯವೊಂದು ಮಂಗಳವಾರ ಪದಚ್ಯುತ ಪ್ರಧಾನಿ ಶೇಖ್ ಹಸೀನಾರ ಏಳು ಆಪ್ತ ನಾಯಕರಿಗೆ(ಇಬ್ಬರು ಮಾಜಿ ಸಚಿವರು ಸೇರಿದಂತೆ) ಗಲ್ಲು ಶಿಕ್ಷೆ ವಿಧಿಸಿದೆ.
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ದಂಗೆಯ ನಂತರ ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 'ಅವಾಮಿ ಲೀಗ್' ಪಕ್ಷದ ಏಳು ನಾಯಕರಿಗೆ, ಕೊಲೆ ಹಾಗೂ ಹತ್ಯೆಗಳಿಗೆ ಪ್ರಚೋದನೆ ನೀಡುವುದು ಸೇರಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿದೆ.
'ಅವಾಮಿ ಲೀಗ್' ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್ ಮತ್ತು ಮತ್ತೊಬ್ಬ ಮಾಜಿ ಸಚಿವ ಮೊಹಮ್ಮದ್ ಅಲಿ ಅರಾಫತ್ ಸೇರಿದಂತೆ ಏಳು ನಾಯಕರಿಗೆ ನ್ಯಾಯಮೂರ್ತಿ ನಜ್ರುಲ್ ಇಸ್ಲಾಂ ಚೌಧರಿ ನೇತೃತ್ವದ ಮೂವರು ಸದಸ್ಯರ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ.
"ಈ ತೀರ್ಪಿನಿಂದ ನಮಗೆ ಸಂತೋಷವಾಗಿದೆ" ಎಂದು ಸರ್ಕಾರಿ ಅಭಿಯೋಜಕ ಎಂಡಿ ಅಮೀನುಲ್ ಇಸ್ಲಾಂ ಹೇಳಿದ್ದಾರೆ.
ವಿಶ್ವಸಂಸ್ಥೆಯ ಪ್ರಕಾರ, 2024ರ ಜುಲೈ ಮತ್ತು ಆಗಸ್ಟ್ ನಡುವೆ ವಿದ್ಯಾರ್ಥಿಗಳ ನೇತೃತ್ವದ ದಂಗೆಯನ್ನು ಹಸೀನಾ ಸರ್ಕಾರವು ಹತ್ತಿಕ್ಕಲು ಪ್ರಯತ್ನಿಸಿದಾಗ ನಡೆದ ಹಿಂಸಾಚಾರದಲ್ಲಿ ಸುಮಾರು 1,400 ಜನರು ಸಾವನ್ನಪ್ಪಿದ್ದರು.
ಹಸೀನಾ ಅವರ 15 ವರ್ಷಗಳ ಆಳ್ವಿಕೆಯು 2024ರ ಆಗಸ್ಟ್ನಲ್ಲಿ ಅಂತ್ಯಗೊಂಡಿತು. ಆ ಸಮಯದಲ್ಲಿ ಅವರು ಹೆಲಿಕಾಪ್ಟರ್ ಮೂಲಕ ನೆರೆಯ ಭಾರತಕ್ಕೆ ಪಲಾಯನ ಮಾಡಿದರು. ಈಗ ಭಾರತದಲ್ಲೇ ಅಜ್ಞಾತವಾಸದಲ್ಲಿದ್ದಾರೆ.